ಬಿಹಾರ ರಾಜ್ಯದ ಖಗರಿಯಾ ಜಿಲ್ಲೆ ಶಹಾರಬನ್ನಿ ಗ್ರಾಮದವರಾದ ರಾಮವಿಲಾಸ ಪಾಸ್ವಾನ್ ಅವರ ತಂದೆಯ ಹೆಸರು ದಿ. ಜಮುನ್ ಪಾಸ್ವಾನ್ ಹಾಗೂ ತಾಯಿ ದಿ. ಶ್ರೀಮತಿ ಸಿಯಾ ದೇವಿ. ಪಿಲ್ಖಿ ಹಾಗೂ ಪಾಟ್ನಾ ವಿಶ್ವವಿದ್ಯಾಲಯಗಳಿಂದ ಇವರು ಕಾನೂನು ಪದವಿ ಹಾಗೂ ಸ್ನಾತಕೋತ್ತರ ಕಲಾ ಪದವಿಗಳನ್ನು ಪಡೆದಿದ್ದಾರೆ. 1960 ರ ದಶಕದಲ್ಲಿ ರಾಜಕುಮಾರಿ ದೇವಿ ಅವರನ್ನು ವಿವಾಹವಾದರು. ಆದರೆ ರಾಜಕುಮಾರಿ ದೇವಿ ಅವರಿಗೆ 1981ರಲ್ಲಿಯೇ ವಿಚ್ಛೇದನ ನೀಡಿರುವುದಾಗಿ 2014ರಲ್ಲಿ ರಾಮವಿಲಾಸ ಪಾಸ್ವಾನ್ ಬಹಿರಂಗಪಡಿಸಿದರು. ಇವರು ಲೋಕಸಭಾ ಚುನಾವಣೆಗೆ ಸಲ್ಲಿಸಿದ ನಾಮಪತ್ರವನ್ನು ಕೆಲವರು ಪ್ರಶ್ನಿಸಿದಾಗ ಈ ಮಾಹಿತಿಯನ್ನು ಬಹಿರಂಗಪಡಿಸಬೇಕಾಯಿತು. ಮೊದಲ ಪತ್ನಿಯಿಂದ ಇವರಿಗೆ ಉಷಾ ಹಾಗೂ ಆಶಾ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪಂಜಾಬಿ ಹಿಂದೂ ಕುಟುಂಬಕ್ಕೆ ಸೇರಿದ ಗಗನಸಖಿಯಾಗಿದ್ದ ಅಮೃತಸರ ನಗರದ ರೀನಾ ಶರ್ಮಾ ಅವರನ್ನು 1983 ರಲ್ಲಿ ವಿವಾಹವಾದರು. ಈ ದಂಪತಿಗೆ ಓರ್ವ ಹೆಣ್ಣು, ಓರ್ವ ಗಂಡು ಮಕ್ಕಳಿದ್ದಾರೆ. ಇವರ ಮಗ ಚಿರಾಗ ಪಾಸ್ವಾನ್ ಓರ್ವ ಚಿತ್ರನಟ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.
ಬಿಹಾರ ರಾಜ್ಯದವರಾದ ಪಾಸ್ವಾನ್ ಪ್ರಸ್ತುತ ಕೇಂದ್ರ ಸರಕಾರದ ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿಯ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಇವರು 1969 ರಲ್ಲಿ ಬಿಹಾರ ವಿಧಾನ ಸಭೆಯ ಶಾಸಕರಾಗಿ ಚುನಾಯಿತರಾದರು. 1974 ರಲ್ಲಿ ಲೋಕ ದಳ ಸ್ಥಾಪನೆಯಾದಾಗ ಆ ಪಕ್ಷ ಸೇರಿದ ಪಾಸ್ವಾನ್, ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು. ತುರ್ತು ಪರಿಸ್ಥಿತಿ ಘೋಷಣೆಯನ್ನು ವಿರೋಧಿಸಿದ ಕಾರಣ ಆ ಸಂದರ್ಭದಲ್ಲಿ ಇವರನ್ನು ಬಂಧಿಸಲಾಗಿತ್ತು. 1977 ರಲ್ಲಿ ಜನತಾ ಪಕ್ಷದಿಂದ ಹಾಜಿಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದರು. ತದನಂತರ 1980, 1989, 1996 ಮತ್ತು 1998, 1999, 2004 ಹಾಗೂ 2014 ರಲ್ಲಿ ಸಹ ಇವರು ಲೋಕಸಭೆಗೆ ಚುನಾಯಿತರಾಗಿದ್ದಾರೆ.
ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರಾಗಿರುವ ಪಾಸ್ವಾನ್, ಎಂಟು ಬಾರಿ ಸಂಸದರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದಾರೆ. 2000ನೇ ಇಸ್ವಿಯಲ್ಲಿ ಲೋಕ ಜನಶಕ್ತಿ ಪಕ್ಷವನ್ನು (ಎಲ್ಜೆಪಿ) ಹುಟ್ಟುಹಾಕಿ ಅದರ ಅಧ್ಯಕ್ಷರಾದರು. ನಂತರ 2004 ರಲ್ಲಿ ಅಧಿಕಾರದಲ್ಲಿದ್ದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರಕಾರ ಸೇರಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಉಕ್ಕು ಖಾತೆಗಲ ಸಚಿವರಾಗಿ ಮುಂದುವರೆದರು. 2004 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದರೂ 2009 ರಲ್ಲಿ ಸೋಲನುಭವಿಸಿದರು. 2010 ರಿಂದ 2014 ರವರೆಗೆ ರಾಜ್ಯಸಭಾ ಸಂಸದರಾಗಿದ್ದ ಇವರು 2016 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಾಜಿಪುರ ಕ್ಷೇತ್ರದಿಂದ ಮತ್ತೊಮ್ಮೆ ಲೋಕಸಭಾ ಸಂಸದರಾಗಿ ಚುನಾಯಿತರಾದರು.
1969 ರಲ್ಲಿ ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ (ಯುನೈಟೆಡ್ ಸೋಶಿಯಲಿಸ್ಟ್ ಪಾರ್ಟಿ) ವತಿಯಿಂದ ಬಿಹಾರ ವಿಧಾನ ಸಭೆಗೆ ಮೀಸಲು ಕ್ಷೇತ್ರದಿಂದ ಶಾಸಕರಾದರು. ರಾಜ ನಾರಾಯಣ ಹಾಗೂ ಜಯ ಪ್ರಕಾಶ ನಾರಾಯಣ ಅವರ ಕಟ್ಟಾ ಅನುಯಾಯಿಯಾಗಿ ಗುರುತಿಸಿಕೊಂಡ ಪಾಸ್ವಾನ್, 1974 ರಲ್ಲಿ ಲೋಕ ದಳದ ಪ್ರಧಾನ ಕಾರ್ಯದರ್ಶಿಯಾದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಮುಂಚೂಣಿ ನಾಯಕರಾದ ರಾಜ ನಾರಾಯಣ, ಕರ್ಪೂರಿ ಠಾಕೂರ ಹಾಗೂ ಸತ್ಯೇಂದ್ರ ನಾರಾಯಣ ಸಿನ್ಹಾ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದರು. ಮೊರಾರ್ಜಿ ದೇಸಾಯಿ ಅವರೊಂದಿಗೆ ಸಂಬಂಧ ಕಡಿದುಕೊಂಡ ನಂತರ ಲೋಕ ಬಂಧು ರಾಜನಾರಾಯಣ ಅವರ ಜನತಾ ಪಾರ್ಟಿ-ಎಸ್ ಸೇರಿ ಅದರ ಅಧ್ಯಕ್ಷ, ನಂತರ ಚೇರಮನ್ರಾದರು. 1975 ರಲ್ಲಿ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಾಗ ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಇಡೀ ತುರ್ತು ಪರಿಸ್ಥಿತಿ ಅವಧಿಯನ್ನು ಇವರು ಜೈಲಿನಲ್ಲಿಯೇ ಕಳೆದರು. 1977 ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಜನತಾ ಪಾರ್ಟಿ ಸೇರಿ ಆ ಪಕ್ಷದ ಟಿಕೆಟ್ ಮೇಲೆ ಪ್ರಥಮ ಬಾರಿಗೆ ಲೋಕಸಭಾ ಸಂಸದರಾಗಿ ಚುನಾಯಿತರಾದರು. ಈ ಚುನಾವಣೆಯಲ್ಲಿ ತಮ್ಮ ಸಮೀಪದ ಸ್ಪರ್ಧಿಯನ್ನು ಅತ್ಯಧಿಕ ಮತಗಳಿಂದ ಸೋಲಿಸಿದ ಕಾರಣದಿಂದ ಇವರ ಹೆಸರು ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ಸೆರ್ಪಡೆಯಾಯಿತು. 1980 ಹಾಗೂ 1984 ರಲ್ಲಿ ಹಾಜಿಪುರ ಕ್ಷೇತ್ರದಿಂದ 7ನೇ ಲೋಕಸಭೆಯ ಸಂಸದರಾಗಿ ಪುನರಾಯ್ಕೆಯಾದರು. ದಲಿತರ ಕಲ್ಯಾಣ ಹಾಗೂ ಜಾಗೃತಿಗಾಗಿ ಇವರು 1983 ರಲ್ಲಿ ದಲಿತ ಸೇನಾ ಸಂಘಟನೆ ಆರಂಭಿಸಿದರು.
1989 ರಲ್ಲಿ 9ನೇ ಲೋಕಸಭೆಯ ಸಂಸದರಾಗಿ ಪುನರಾಯ್ಕೆಯಾಗಿ ವಿಶ್ವನಾಥ ಪ್ರತಾಪ ಸಿಂಗ್ ಅವರ ಕೇಂದ್ರ ಸರಕಾರದಲ್ಲಿ ಕಾರ್ಮಿಕ ಹಾಗೂ ಕಲ್ಯಾಣ ಖಾತೆಯ ಸಚಿವರಾದರು. 1996 ರಲ್ಲಿ ಪ್ರಧಾನ ಮಂತ್ರಿಗಳು ರಾಜ್ಯಸಭಾ ಸದಸ್ಯರಾಗಿದ್ದರಿಂದ ಇವರು ಲೋಕಸಭೆಯಲ್ಲಿ ಆಡಳಿತ ಮೈತ್ರಿಕೂಟದ ಪ್ರಧಾನ ಮಂತ್ರಿಯ ರೂಪದಲ್ಲಿ ಕೆಲಸ ಮಾಡಿದರು. ಇದೇ ಅವಧಿಯಲ್ಲಿ ಪ್ರಥಮ ಬಾರಿಗೆ ರೈಲ್ವೆ ಸಚಿವರಾದರು. 1998 ರವರೆಗೆ ರೈಲ್ವೆ ಸಚಿವರಾಗಿ ಮುಂದುವರಿದರು. ತದನಂತರ ಅಕ್ಟೋಬರ್ 1999 ರಿಂದ ಸೆಪ್ಟೆಂಬರ್ 2001 ರವರೆಗೆ ಕೇಂದ್ರದ ಸಂಪರ್ಕ ಖಾತೆ ಸಚಿವರಾಗಿದ್ದರು. ನಂತರ 2001 ರಿಂದ ಏಪ್ರಿಲ್ 2002 ರವರೆಗೆ ಕಲ್ಲಿದ್ದಲು ಖಾತೆ ಸಚಿವರಾಗಿದ್ದರು.
2000 ನೇ ಇಸ್ವಿಯಲ್ಲಿ ಜನತಾ ದಳದಿಂದ ಸಂಪರ್ಕ ಕಡಿದುಕೊಂಡ ಪಾಸ್ವಾನ್ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಸ್ಥಾಪಿಸಿದರು. 2004 ರ ಸಾರ್ವತ್ರಿಕ ಚುನಾವಣೆಗಳ ನಂತರ ಯುಪಿಎ ಮೈತ್ರಿಕೂಟ ಸೇರಿ ರಾಸಾಯನಿಕ, ರಸಗೊಬ್ಬರ ಹಾಗೂ ಉಕ್ಕು ಖಾತೆ ಸಚಿವರಾದರು.
2005ರ ಫೆಬ್ರವರಿಯಲ್ಲಿ ನಡೆದ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ತಮ್ಮ ಲೋಕ ಜನಶಕ್ತಿ ಪಾರ್ಟಿಯ ಮೈತ್ರಿಕೂಟ ರಚಿಸಿ ಚುನಾವಣೆ ಎದುರಿಸಿದರು. ಆದರೆ ಈ ಚುನಾವಣೆಯ ನಂತರ ಬಂದ ಫಲಿತಾಂಶದಲ್ಲಿ ಯಾವುದೇ ಒಂದು ಪಕ್ಷ ಅಥವಾ ಮೈತ್ರಿಕೂಟ ಸರಕಾರ ರಚಿಸುವಷ್ಟು ಬಲಾಬಲ ಹೊಂದಿರಲಿಲ್ಲ. ಈ ಸಂದರ್ಭದಲ್ಲಿ ಲಾಲೂ ಪ್ರಸಾದ ಯಾದವ್ ಅವರನ್ನು ಭ್ರಷ್ಟಾಚಾರದ ಕಾರಣದಿಂದ ಹಾಗೂ ಬಲಪಂಥೀಯ ವಿಚಾರಧಾರೆಯ ನ್ಯಾಷನಲ್ ಡೆಮಾಕ್ರಟಿಕ್ ಅಲಾಯನ್ಸ್ (ಎನ್ಡಿಎ) ಎರಡಕ್ಕೂ ಬೆಂಬಲ ನೀಡಲು ನಿರಾಕರಿಸಿದರು. ಹೀಗಾಗಿ ಬಿಹಾರದಲ್ಲಿ ಅನಿಶ್ಚಿತ ಪರಿಸ್ಥಿತಿ ತಲೆದೋರುವಂತಾಯಿತು. ಆದರೆ ಲೋಕ ಜನಶಕ್ತಿ ಪಾರ್ಟಿಯ 12 ಶಾಸಕರ ಬೆಂಬಲ ಪಡೆಯುವಲ್ಲಿ ಸಫಲರಾದ ನಿತೀಶಕುಮಾರ 12 ಸದಸ್ಯರೊಂದಿಗೆ ಪಕ್ಷ ಬಿಟ್ಟು ಹೊರನಡೆದರು. ಈ ಸಂದರ್ಭದಲ್ಲಿ ಎಲ್ಜೆಪಿ ಸದಸ್ಯರ ಬೆಂಬಲದಿಂದ ಸರಕಾರ ರಚನೆಯಾಗುವುದನ್ನು ತಪ್ಪಿಸಲು ಆಗಿನ ಬಿಹಾರ ರಾಜ್ಯಪಾಲರಾಗಿದ್ದ ಬೂಟಾ ಸಿಂಗ್ ಬಿಹಾರ ವಿಧಾನ ಸಭೆಯನ್ನೇ ವಿಸರ್ಜಿಸಿ ಹೊಸದಾಗಿ ಚುನಾವಣೆಗೆ ಆದೇಶಿಸಿದರು. ಇದರಿಂದ ಬಿಹಾರ ರಾಷ್ಟ್ರಪತಿ ಆಳ್ವಿಕೆಗೆ ಒಳಪಡುವಂತಾಯಿತು. 2005ರ ನವೆಂಬರ್ನಲ್ಲಿ ನಡೆದ ವಿಧಾನ ಸಭಾ ಚುನಾವಣೆಗಳಲ್ಲಿ ಪಾಸ್ವಾನ್ ಅವರ ಮೂರನೇ ಮೈತ್ರಿಕೂಟ ಹೀನಾಯ ಸೋಲನುಭವಿಸಿತು. ಲಾಲೂ ಪ್ರಸಾದ ಯಾದವ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಅಲ್ಪಮತಕ್ಕಿಳಿದು, ಎನ್ಡಿಎ ಮೈತ್ರಿಕೂಟ ಜಯ ಸಾಧಿಸಿ ಸರಕಾರ ರಚಿಸಿತು.
ಕೇಂದ್ರ ಸರಕಾರದ ಮೇಲೆ ಬಿಹಾರ ಚುನಾವಣೆ ಫಲಿತಾಂಶಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಾರಿದ ಪಾಸ್ವಾನ್, ತಾವು ಹಾಗೂ ಲಾಲೂ ಪ್ರಸಾದ ಯಾದವ್ ಮಂತ್ರಿಗಳಾಗಿ ಮುಂದುವರೆಯುವುದಾಗಿ ಘೋಷಿಸಿದರು. ಒಟ್ಟಾರೆ ಐದು ಪ್ರಧಾನ ಮಂತ್ರಿಗಳ ಕಾರ್ಯಾವಧಿಯಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ಪಾಸ್ವಾನ್, 1996 ರಿಂದ 2015 ರ ಮಧ್ಯದ ಎಲ್ಲ ಕೇಂದ್ರ ಸರಕಾರಗಳ ಅವಧಿಯಲ್ಲಿ ಕೇಂದ್ರ ಮಂತ್ರಿಗಳಾಗಿ ಕೆಲಸ ಮಾಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಯುನೈಟೆಡ್ ಫ್ರಂಟ್, ಯುನೈಟೆಡ್ ಪ್ರೊಗ್ರೆಸಿವ್ ಅಲಾಯನ್ಸ್ ಹಾಗೂ ನ್ಯಾಷನಲ್ ಡೆಮಾಕ್ರಟಿಕ್ ಅಲಾಯನ್ಸ್ ಹೀಗೆ 1996 ರಿಂದ 2015ರ ಅವಧಿಯಲ್ಲಿ ಎಲ್ಲ ಮೈತ್ರಿಕೂಟಗಳ ಸರಕಾರಗಳಲ್ಲಿಯೂ ಇವರು ಸಚಿವರಾಗಿ ಕೆಲಸ ಮಾಡಿದ್ದು ವಿಶೇಷವಾಗಿದೆ.
2009 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ತನ್ನ ಹಿಂದಿನ ಮೈತ್ರಿಕೂಟ ಪಾಲುದಾರ ಕಾಂಗ್ರೆಸ್ ನೇತೃತ್ವದ ಯುಪಿಎನೊಂದಿಗೆ ಮೈತ್ರಿ ಮುರಿದು, ಲಾಲೂ ಪ್ರಸಾದ ಯಾದವ್ ಅವರ ರಾಷ್ಟ್ರೀಯ ಜನತಾ ದಳದೊಂದಿಗೆ ಮೈತ್ರಿ ಮಾಡಿಕೊಂಡರು. ನಂತರ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷವನ್ನೂ ಮೈತ್ರಿಕೂಟಕ್ಕೆ ಸೇರಿಸಿಕೊಂಡು ಚತುರ್ಥ ರಂಗವನ್ನು ಘೋಷಿಸಿದರು. ಬಿಹಾರದ ಮಾಜಿ ಮುಖ್ಯಮಂತ್ರಿ ಜನತಾ ದಳದ ರಾಮ ಸುಂದರ ದಾಸ್ ಎದುರು ಪಾಸ್ವಾನ್ ಹಾಜಿಪುರದಲ್ಲಿ ಚುನಾವಣೆ ಸೋತರು. 15ನೇ ಲೋಕಸಭೆಯ ಚುನಾವಣೆಯಲ್ಲಿ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ ಒಂದೂ ಸ್ಥಾನ ಗೆಲ್ಲಲಾಗಲಿಲ್ಲ. ಮೈತ್ರಿಕೂಟದ ಪಾಲುದಾರ ಲಾಲೂ ಪ್ರಸಾದ ಅವರ ಪಕ್ಷ ಸಹ ಕೇವಲ ನಾಲ್ಕು ಸ್ಥಾನಗಳನ್ನಷ್ಟೇ ಗಳಿಸಿತು.
2014 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಾಜಿಪುರ ಕ್ಷೇತ್ರದಿಂದ 16ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು. ಇದೇ ಚುನಾವಣೆಯಲ್ಲಿ ಬಿಹಾರದ ಜಾಮುಯಿ ಕ್ಷೇತ್ರದಿಂದ ಪಾಸ್ವಾನ್ ಅವರ ಪುತ್ರ ಚಿರಾಗ ಪಾಸ್ವಾನ್ ಅವರು ಸಹ ಸಂಸದರಾಗಿ ಚುನಾಯಿತರಾದರು.
| ಪೂರ್ಣ ಹೆಸರು | ರಾಮ ವಿಲಾಸ ಪಾಸ್ವಾನ್ |
| ಜನ್ಮ ದಿನಾಂಕ | 05 Jul 1946 |
| ಮೃತಪಟ್ಟ ದಿನಾಂಕ | 08 Oct 2020 (ವಯಸ್ಸು 74) |
| ಹುಟ್ಟಿದ ಸ್ಥಳ | ಶಹಾರಬನ್ನಿ, ಖಗರಿಯಾ ಜಿಲ್ಲೆ, ಬಿಹಾರ |
| ಪಕ್ಷದ ಹೆಸರು | Ljnsp |
| ವಿದ್ಯಾರ್ಹತೆ | Post Graduate |
| ಉದ್ಯೋಗ | ಸಾಮಾಜಿಕ ಕಾರ್ಯಕರ್ತ |
| ತಂದೆಯ ಹೆಸರು | ದಿ. ಶ್ರೀ ಜಮುನ ಪಾಸ್ವಾನ್ |
| ತಾಯಿಯ ಹೆಸರು | ದಿ. ಶ್ರೀಮತಿ ಸಿಯಾ ದೇವಿ |
| ಅವಲಂಬಿತರ ಹೆಸರು | ಶ್ರೀಮತಿ ರೀನಾ ಪಾಸ್ವಾನ್ |
| ಅವಲಂಬಿತರ ಉದ್ಯೋಗ | ಸಾಮಾಜಿಕ ಕಾರ್ಯಕರ್ತೆ |
| ಮಕ್ಕಳು | 1 ಪುತ್ರ(ರು) 3 ಪುತ್ರಿ(ಯರು) |
| ವೆಬ್ಸೈಟ್ | ljp.co.in |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.