ಯಶಸ್ವಿ ಉದ್ಯಮಿಯೂ ಆಗಿರುವ ಮುರುಗೇಶ್ ನಿರಾಣಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಬಿಜೆಪಿ ಶಾಸಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರು.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕ. 2018ರ ಚುನಾವಣೆಯಲ್ಲಿ ಬೀಳಗಿಯಿಂದ 3ನೇ ಬಾರಿಗೆ ಮುರುಗೇಶ್ ನಿರಾಣಿ ಗೆಲುವು ಸಾಧಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಡ ಹೇರಿದ್ದು, ಭಾರೀ ಸುದ್ದಿಯಾಗಿತ್ತು.
ಬಿಇ, ಸಿವಿಲ್ ಪದವೀಧರರಾಗಿರುವ ಮರುಗೇಶ್ ನಿರಾಣಿ ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ನಿರಾಣಿ ಶುಗರ್ಸ್ ಹೆಸರಿನಲ್ಲಿ ಸಕ್ಕರೆ ಕಾರ್ಖನೆಗಳ ಮಾಲೀಕರು. ಸಹೋದರ ಹನುಮಂತ ನಿರಾಣಿ ಸಹ ರಾಜಕೀಯದಲ್ಲಿದ್ದು, ವಿಧಾನ ಪರಿಷತ್ ಸದಸ್ಯರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹಂಚಿನಾಳ ಮೂಲದ ಮುರುಗೇಶ್ ನಿರಾಣಿ 2004ರಲ್ಲಿ ಮೊದಲ ಬಾರಿಗೆ ಗೆಲುವು ದಾಖಲಿಸಿ ವಿಧಾನಸಭೆ ಪ್ರವೇಶಿಸಿದರು. 2008ರಲ್ಲಿ ಮತ್ತೆ ಆಯ್ಕೆಯಾದ ಅವರು ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಸಚಿವರಾದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿದರು. ಆದರೆ 2013ರ ಚುನಾವಣೆಯಲ್ಲಿ 55,417 ಮತಗಳನ್ನು ಪಡೆದು ಸೋಲು ಕಂಡರು.
2018ರ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ 3ನೇ ಬಾರಿಗೆ ಆಯ್ಕೆಗೊಂಡರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರಾಗಿ ಸಂಪುಟಕ್ಕೆ ಸೇರಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮತ್ತೆ ಸಚಿವರಾದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವರಾದರು.
1993 ರಿಂದ 2000ದ ತನಕ ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿಯೂ ಮುರುಗೇಶ್ ನಿರಾಣಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. 2013-14ರಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್ ಪ್ರತಿಮೆ ಲೋಹ ಸಂಗ್ರಹಣಾ ಸಮಿತಿ ರಾಜ್ಯ ಪ್ರಕೋಷ್ಟದ ಸಂಚಾಲಕರಾಗಿದ್ದರು.
ರಾಜಕೀಯ ಹೊರತುಪಡಿಸಿ ಮುರುಗೇಶ್ ನಿರಾಣಿ ಯಶಸ್ವಿ ಉದ್ಯಮಿ. ಸಕ್ಕರೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ ಸ್ಥಾಪಿಸಿದ್ದಾರೆ. ಎಂ. ಆರ್. ಎನ್ (ನಿರಾಣಿ) ಉದ್ದಿಮೆ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು. ಸಾಮಾನ್ಯ ಕೃಷಿ ಕುಟುಂಬದಲ್ಲಿ ಜಿನಿಸಿದ ನಿರಾಣಿ ಈಗ ಸಕ್ಕರೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳ ಮಾಲೀಕರು.
Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.