ರಾಯಚೂರಿನಲ್ಲಿ ಕೃಷ್ಣಮೃಗಗಳ ಕಾಟ: ಕಂಗಾಲಾದ ಅನ್ನದಾತರು
ರಾಯಚೂರು, ಜುಲೈ, 27: ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪೈಕಿ ಕೃಷ್ಣಮೃಗವು ಕೂಡ ಒಂದಾಗಿವೆ. ಆದರೆ ರಾಯಚೂರಿನಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಕೃಷ್ಣಮೃಗಗಳ ಸಂತತಿ ಹೆಚ್ಚಾಗುತ್ತಿದೆ. ಹಾಗೂ ಅಲ್ಲಿನ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ಸಂಪೂರ್ಣವಾಗಿ ತಿಂದುಹಾಕುತ್ತಿವೆ. ಇದರಿಂದ ಅಲ್ಲಿನ ರೈತರು ಬೇಸತ್ತು ಸಹಾಯಕ್ಕೆ ಧಾವಿಸಿ ಎಂದು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.
ವರ್ಷದ 8 ತಿಂಗಳುಗಳ ಕಾಲ ಕೃಷ್ಣಮೃಗಗಳು ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಮುಂಗಾರು ಮಳೆ ಬಳಿಕ ಕೃಷ್ಣ ಮೃಗಗಳ ಹಿಂಡಿನಲ್ಲಿ ಬಂದು ರಾಯಚೂರಿನ ರೈತರಿಗೆ ಕಾಟ ನೀಡಲು ಶುರು ಮಾಡಿವೆ. ಸಾಧು ಪ್ರಾಣಿಗಳು ಎಂದು ಕರೆಸಿಕೊಳ್ಳುವ ಇವುಗಳ ಕಾಟಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಕೆಲ ರೈತರಂತೂ ಇವುಗಳ ಹಾವಳಿಯಿಂದ ಒಂದೇ ಜಮೀನಿನಲ್ಲಿ 2-3 ಬಾರಿ ಬಿತ್ತನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳ್ತಂಗಡಿ; ಅರಣ್ಯ ಇಲಾಖೆಯ ಟ್ರ್ಯಾಪಿಂಗ್ ಪತ್ತೆಯಾದ ಪ್ರಾಣಿಗಳು
ರೋಗ ಹರಡಿದರೆ ಔಷಧಿ ಸಿಂಪಡಣೆ ಮಾಡಿ ಬೆಳೆ ಉಳಿಸಿಕೊಳ್ಳಬಹುದು. ಆದರೆ ಕೃಷ್ಣಮೃಗಗಳ ವಿಚಾರದಲ್ಲಿ ರೈತರು ಆ ರೀತಿ ಮಾಡದಂತೆ ಕೈಕಟ್ಟಿ ಕುಳಿತುಕೊಳ್ಳುವಂತೆ ಆಗಿದೆ. ರೈತರು ಜಮೀನಿಗೆ ಬರುತ್ತಿದ್ದಂತೆ ಅವುಗಳು ಅಲ್ಲಿಂದ ಕಾಲ್ಕಿಳಲು ಆರಂಭಿಸುತ್ತವೆ. ರೈತರ ಬೆಳೆಗಳಿಗೆ ಈವರೆಗೆ ಕೀಟಬಾಧೆ ಹಾಗೂ ನೀರಿನ ಅಭಾವ ಕಾಡುತ್ತಿತ್ತು. ಆದರೆ ಈಗ ಕೃಷ್ಣಮೃಗಗಳ ಕಾಟ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಬೆಳೆಗಳ ಉಳಿವಿಗಾಗಿ ದಿನಪೂರ್ತಿ ಕಾವಲು
ರಾಯಚೂರು ತಾಲೂಕಿನ ಮಂಚಲಾಪೂರ, ಮರ್ಚೆಡ್, ಫತ್ತೆಪೂರು, ಜಾಗೀರ್ ವೆಂಕಟಪುರ ಸೇರಿದಂತೆ ವಿವಿಧ ಗ್ರಾಮದಲ್ಲಿ ಕೃಷ್ಣಮೃಗಗಳ ಬಗ್ಗೆಯೇ ಚರ್ಚೆ ಶುರುವಾಗಿದೆ. ಬಿತ್ತನೆ ಮಾಡಿದ ಹತ್ತಿ ಬೆಳೆ ಮೊಳಕೆಗಳನ್ನು ಬಿಡದೆ ಕೃಷ್ಣಮೃಗಗಳು ತಿಂದುಹಾಕುತ್ತಿವೆ. ಇದರಿಂದ ರೈತರಿಗೆ ಮತ್ತೊಮ್ಮೆ ಬಿತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ದಿನನಿತ್ಯ ಜಮೀನುಗಳಲ್ಲಿ ಕೃಷ್ಣಮೃಗಗಳನ್ನು ಕಾಯುವುದೇ ರೈತರ ಕಾಯಕವಾಗಿದೆ.
ಮಳೆಗಾಲದ ಸಮಯದಲ್ಲಿ ದಾಳಿ
ರಾಯಚೂರು ಕೃಷ್ಣ ನದಿ ತೀರದಲ್ಲಿ ನೂರಾರು ಕೃಷ್ಣಮೃಗಗಳು ಬೀಡುಬಿಟ್ಟಿವೆ. ವರ್ಷದ 8 ತಿಂಗಳುಗಳ ಕಾಲ ಯಾರ ಕಣ್ಣಿಗೂ ಕಾಣದಂತೆ ನದಿ ತೀರದಲ್ಲಿ ವಾಸವಾಗಿರುತ್ತವೆ. ಮಳೆಗಾಲ ಬಂತು ಅಂದರೆ ಸಾಕು ಕೃಷ್ಣಮೃಗಗಳು ರೈತರ ಜಮೀನುಗಳಲ್ಲಿ ಓಡಾಟ ಶುರು ಮಾಡುತ್ತವೆ. ಆಗತಾನೆ ಬಿತ್ತಿದ ಶೇಂಗಾ, ಜೋಳ, ಹತ್ತಿ ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳು ಇವುಗಳ ದಾಳಿಯಿಂದ ಹಾಳಾಗುತ್ತಿವೆ. ಚಿಕ್ಕ ಸಸಿಗಳನ್ನು ತಿಂದು ಹೋಗುತ್ತಿದ್ದು, ಮತ್ತೆ ಮರು ಬಿತ್ತನೆ ಮಾಡುತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾವಲಿಟ್ಟರೂ ದಾಳಿ ಮುಂದುವರಿಗೆ
ಮುಂಗಾರು ಬಿತ್ತನೆ ವೇಳೆಯಲ್ಲಿ ಕಾಣಿಸಿಕೊಳ್ಳುವ ಇವುಗಳು ಮೊಳಕೆಗೆ ಬಂದ ಬೆಳೆಗಳನ್ನು ತಿನ್ನಲು ಶುರು ಮಾಡಿವೆ. ಹೀಗಾಗಿ ರೈತರು ಕೂಲಿ ಆಳುಗಳನ್ನು ಇಟ್ಟು ಬೆಳಗ್ಗೆಯಿಂದ ಸಂಜೆವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ಆಳುಗಳು ಮನೆಗೆ ಹೋದ ನಂತರ ಆಡಿದ್ದೇ ಆಟ ಅನ್ನುವ ಹಾಗೆ ರಾತ್ರಿ ವೇಳೆ ಮತ್ತೆ ಜಮೀನಿಗೆ ಬಂದು ಬೆಳೆಗಳನ್ನು ತಿಂದು ಹೋಗುತ್ತಿದೆ. ಆದ್ದರಿಂದ ಅಲ್ಲಿನ ರೈತರು ದಿಕ್ಕೂ ತೋಚದಂತೆ ಸುಮ್ಮನಾಗಿದ್ದಾರೆ. ಇನ್ನು ಕೆಲವರು ಕೃಷಿಯೇ ಬೇಡ ಅನ್ನುವಷ್ಟರ ಮಟ್ಟಿಗೆ ಕಂಗಾಲಾಗಿ ಹೋಗಿದ್ದಾರೆ.
ಹೀಗೆ ಕೃಷ್ಣಮೃಗಗಳ ಕಾಟಕ್ಕೆ ಬೇಸತ್ತು ರೈತರು ರಾಯಚೂರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದರು. ಅರಣ್ಯ ಅಧಿಕಾರಿಗಳು ರೈತರ ದೂರು ಆಧರಿಸಿ ಸ್ಥಳ ಪರಿಶೀಲನೆ ನಡೆಸಿದರು. ಕೃಷಿ ಇಲಾಖೆಯೂ ಅರಣ್ಯ ಅಧಿಕಾರಿಗಳ ವರದಿಯಂತೆ ಬೆಳೆ ಪರಿಹಾರ ನೀಡುತ್ತಿದೆ. ಇದು ಒಂದೆರಡು ವರ್ಷದ ಕತೆಯಲ್ಲಿ. ಪ್ರತಿ ವರ್ಷವೂ ಈ ಸಮಯದಲ್ಲಿ ರೈತರ ಕೃಷಿಗಳಿಗೆ ಕೃಷ್ಣಮೃಗಗಳು ಲಗ್ಗೆ ಇಟ್ಟು ಬೆಳೆಗಳನ್ನು ಅಲ್ಲೊಲ ಕಲ್ಲೋಲ ಮಾಡುತ್ತಿವೆ. ನಮಗೆ ಕೃಷ್ಣಾಮೃಗಗಳಿಂದ ಶಾಶ್ವತ ಮುಕ್ತಿ ದೊರಕಿಸಿ ಕೊಡಿ ಎಂದು ರೈತರು ಅಧಿಕಾರಿಗಳ ಬಳಿ ಮನವಿ ಮಾಡಿದರು.
ಕಂಗಾಲಾಗದಂತೆ ಅಭಯ ನೀಡಿದ ಇಲಾಖೆ
ಇದಕ್ಕೆ ರಾಯಚೂರು ಪ್ರಾದೇಶಿಕ ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿ ರಾಜ್ಯದಲ್ಲಿ ಕೃಷ್ಣಮೃಗಗಳ ಸಂತತಿ ಅಳಿವಿನಂಚಿಗೆ ಬಂದಿದೆ. ಇಂತಹ ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಕೃಷ್ಣ ಮೃಗಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೆ ಒಳಪಟ್ಟಿವೆ. ಅವುಗಳ ರಕ್ಷಣೆಗೆ ನಾವು ಮುಂದಾಗಬೇಕಾಗಿದೆ. ಕೃಷ್ಣ ನದಿ ತೀರದಲ್ಲಿ ಕೃಷ್ಣಾಮೃಗಗಳ ವಾಸಕ್ಕೆ ಅನುಕೂಲಕರ ವಾತಾವರಣ ಇರುವುದರಿಂದ ಅವುಗಳು ಅಲ್ಲಿಯೇ ವಾಸವಾಗಿವೆ. ಬೆಳೆ ಹಾನಿ ಆಗಿದ್ದರೆ ಪರಿಹಾರ ಕೋರಿ ರೈತರು ಅರ್ಜಿ ಸಲ್ಲಿಕೆ ಮಾಡಿ. ನಾವು ಮತ್ತು ಕೃಷಿ ಇಲಾಖೆಯವರು ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಕೊಡಿಸುತ್ತೇವೆ. ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ರೈತರಿಗೆ ಅಭಯ ನೀಡಿದರು.
Recommended Video