ಬೆಳ್ತಂಗಡಿ; ಅರಣ್ಯ ಇಲಾಖೆಯ ಟ್ರ್ಯಾಪಿಂಗ್ ಪತ್ತೆಯಾದ ಪ್ರಾಣಿಗಳು
ಮಂಗಳೂರು, ಮಾರ್ಚ್ 21; ಅರಣ್ಯ ಇಲಾಖೆ ಹುಲಿ ಗಣತಿ ಯೋಜನೆಯನ್ನು ಪಶ್ಚಿಮ ಘಟ್ಟದಲ್ಲಿ ಮಾಡುತ್ತಿದೆ. ಘಟ್ಟದ ತಪ್ಪಲಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುರುಬರ ಗುಡ್ಡದ ಕಾಡುಮನೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಕ್ಯಾಮೆರಾ ಟ್ರ್ಯಾಪಿಂಗ್ ಮಾಡುತ್ತಿದೆ. ಹುಲಿ ಗಣತಿ ಯೋಜನೆಯ ಅಂಗವಾಗಿ ಕಾಡುಮನೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಕ್ಯಾಮೆರಾ ಟ್ಯ್ರಾಪಿಂಗ್ ಮಾಡುತ್ತಿದ್ದು, ಈ ವೇಳೆ ಹಲವು ಪ್ರಾಣಿಗಳು ಸೆರೆಯಾಗಿದೆ.
ಕಾಡುಮನೆ ಪ್ರದೇಶದಲ್ಲಿ ಇಡಲಾದ ಕ್ಯಾಮೆರಾದಲ್ಲಿ ಕಾಡುಹಂದಿ, ಮುಳ್ಳುಹಂದಿ, ಜಿಂಕೆ, ಚಿರತೆ, ಕಡವೆ, ಕರಡಿ ಸೇರಿದಂತೆ ಹಲವು ಪ್ರಾಣಿಗಳು ಸೆರೆಯಾಗಿದೆ. ಇಂದಬೆಟ್ಟು ಪ್ರದೇಶದಲ್ಲಿ ಚಿರತೆ ಕಾಟ ಇರುವ ಬಗ್ಗೆ ಸ್ಥಳೀಯರು ಆಗಾಗ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಅರಣ್ಯ ಇಲಾಖಾ ಸಿಬ್ಬಂದಿಗೆ ಚಿರತೆ ಪತ್ತೆಯಾಗಿರಲಿಲ್ಲ. ಆದರೆ ಇಲಾಖೆಯ ಕ್ಯಾಮೆರಾ ಟ್ರ್ಯಾಪಿಂಗ್ನಲ್ಲಿ ಚಿರತೆ, ಕರಡಿ ಪತ್ತೆಯಾಗಿದೆ.
ಹೀಗಾಗಿ ಚಿರತೆ, ಕರಡಿ ಓಡಾಟ ಈ ಪ್ರದೇಶದಲ್ಲಿ ಇರುವುದು ಧೃಡವಾಗಿದೆ. ಆದರೆ ಇದುವರೆಗೂ ಇವು ಯಾವುದೇ ಹೆಚ್ಚಿನ ಅಪಾಯ ಉಂಟು ಮಾಡಿಲ್ಲ. ಅಲ್ಲದೇ ಕಾಡುಹಂದಿ, ಮುಳ್ಳು ಹಂದಿ, ಜಿಂಕೆ, ಕಡವೆ, ನರಿ, ಮೊದಲಾದ ಪ್ರಾಣಿಗಳೂ ಕ್ಯಾಮೆರಾ ಎದುರು ಅನೇಕ ಬಾರಿ ಓಡಾಟ ಮಾಡಿವೆ.

ಅರಣ್ಯ ಇಲಾಖೆ ಬೆಳ್ತಂಗಡಿ ತಾಲೂಕಿನ ಅರಣ್ಯ ಭಾಗದಲ್ಲಿರುವ ಇಂದಬೆಟ್ಟು, ಸವಣಾಲು, ತೋಟತ್ತಾಡಿ, ಮಲವಂತಿಗೆ ಸೇರಿದಂತೆ ಹಲವು ಭಾಗದಲ್ಲಿ ಹುಲಿಗಣತಿ ಯೋಜನೆಯ ಸಲುವಾಗಿ ಅರಣ್ಯ ಭಾಗದಲ್ಲಿ ಕ್ಯಾಮೆರಾ ಇರಿಸಿದೆ.
ಅರಣ್ಯ ಇಲಾಖೆ ಮಾರ್ಚ್ 7 ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ತೊಟತ್ತಾಡಿ ಇರಿಸಲಾಗಿದ್ದ ಕ್ಯಾಮರದಲ್ಲೂ ಚಿರತೆ ಪತ್ತೆಯಾಗಿದೆ. ಈ ಮೂಲಕ ಅಧಿಕೃತವಾಗಿ ತಾಲೂಕಿನ ಎರಡು ಗ್ರಾಮದಲ್ಲಿ ಚಿರತೆ ಇರೋದು ಪತ್ತೆಯಾಗಿದೆ. ಅರಣ್ಯ ಇಲಾಖೆಯ ತಾಲೂಕಿನ ಹಲವು ಕಡೆಗಳಲ್ಲಿ ಹುಲಿ ಗಣತಿ ಯೋಜನೆಯಡಿಯಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಮಾಡುತ್ತಿದ್ದು, ಎಲ್ಲೂ ಹುಲಿ ಪತ್ತೆಯಾಗಿಲ್ಲ.

ತಾಲೂಕಿನ ಹಲವು ಕಡೆಗಳಲ್ಲಿ ಕಾಡಾನೆಯ ಉಪಟಳ ಅತಿ ಹೆಚ್ಚಾಗಿದೆ. ಶಿಬಾಜೆ, ಮಕ್ಕಿ, ಗುರಿಪಳ್ಳ ಸೇರಿದಂತೆ ಹಲವು ಭಾಗದಲ್ಲಿ ಕಾಡಾನೆಯ ದಾಳಿಗೆ ಅಪಾರ ಕೃಷಿ ಹಾನಿಯಾಗಿದೆ. ರಾತ್ರಿ ತೋಟಗಳಿಗೆ ಲಗ್ಗೆ ಇಡುವ ಆನೆಗಳು ಅಡಿಕೆ ತೋಟವನ್ನು ಧ್ವಂಸ ಮಾಡಿದೆ. ಕ್ಯಾಮೆರಾ ಟ್ಯ್ರಾಪಿಂಗ್ ನಡೆಸುತ್ತಿರುವ ಪ್ರದೇಶಗಳ ಸುತ್ತ-ಮುತ್ತ ಕಾಡಾನೆಗಳ ಸಂಚಾರವಿದ್ದರೂ ಕ್ಯಾಮೆರಾದಲ್ಲಿ ಆನೆಗಳ ದರ್ಶನವಾಗಿಲ್ಲ.











Click it and Unblock the Notifications