Get Updates
Get notified of breaking news, exclusive insights, and must-see stories!

ಬಿಸಿಲಿನ ತಾಪ; ಶ್ರೀಕೃಷ್ಣದೇವರಾಯ ವಿವಿಯ ಮಾದರಿ ಕಾರ್ಯ

ಬಳ್ಳಾರಿ, ಮಾರ್ಚ್ 13: ಕರ್ನಾಟಕದಲ್ಲಿ ಬಿರು ಬಿಸಿಲು ನೆತ್ತಿ ಸುಡುತ್ತಿದೆ. ಮನುಷ್ಯರು ಬಿಸಿಲಿನ ಝಳಕ್ಕೆ ಕಂಗಾಲಾಗಿ ಹೋಗಿದ್ದಾರೆ. ಮತ್ತೊಂದು ಕಡೆ ಪ್ರಾಣಿ-ಪಕ್ಷಿಗಳು ಆಹಾರ, ನೀರಿಗಾಗಿ ಪರಿತಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮಾದರಿ ಕಾರ್ಯವೊಂದನ್ನು ಮಾಡುತ್ತಿದೆ.

ಜಿಲ್ಲೆಯಲ್ಲಿ ಬಿಸಿಲಿನ ತಾಪ ಮನುಷ್ಯನ ನೆತ್ತಿ ಸುಡುತ್ತಿದೆ. ಇನ್ನೂ ಪ್ರಾಣಿ-ಪಕ್ಷಿಗಳ ಪಾಡು ಊಹಿಸುವುದು ಕಷ್ಟ. ಇಂತಹ ಸ್ಥಿತಿಯಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಪಕ್ಷಿ ಸಂಕುಲಕ್ಕೆ ಆಹಾರ, ನೀರು ಒದಗಿಸಲು 'ಜಲ-ಆಹಾರ ಅಭಿಯಾನ' ಆರಂಭಿಸಲಾಗಿದೆ.

Summer Mode Work By Vijayanagara Sri Krishnadevaraya University

ಈ ವಿನೂತನ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ. ಎಂ. ಮೇತ್ರಿ ಬುಧವಾರ ಚಾಲನೆ ನೀಡಿದರು. ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ್. ಎಸ್. ಎನ್., ಕುಲಸಚಿವ (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ್, ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ಶಶಿಕಾಂತ್ ಮಜಿಗಿ, ಡಾ. ನಾಗಭೂಷಣ್ ಸಿ., ಸ್ನೇಹಾ ಸುಮಾ ಹೆಗಡೆ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಏನಿದು ಜಲ-ಆಹಾರ ಅಭಿಯಾನ?; ಬಳಸಿ ಬಿಸಾಡಿರುವ ಪ್ಲಾಸ್ಟಿಕ್ ಬಾಟಲಿಗಳು, ಬುಟ್ಟಿ, ತೆಂಗಿನ ಚಿಪ್ಪು, ಬೊಂಬಿನ ತುಂಡುಗಳನ್ನು ಬಳಸಿಕೊಂಡು ವಿಶ್ವವಿದ್ಯಾಲಯದ ಜೀವ ವಿಜ್ಞಾನ ಕಟ್ಟಡದ ಆವರಣದಲ್ಲಿರುವ ಮರಗಿಡಗಳಿಗೆ ನೇತು ಹಾಕಲಾಗಿದೆ. ಇದರಲ್ಲಿ ನೀರು, ಸಿರಿಧಾನ್ಯಗಳನ್ನು ಇರಿಸಿ ಪಕ್ಷಿಗಳಿಗೆ, ಅಳಿಲುಗಳಿಗೆ ಜೀವಸೆಲೆ ಕಲ್ಪಿಸಲಾಗುತ್ತಿದೆ.

ಕುಲಪತಿ ಪ್ರೊ. ಕೆ. ಎಂ. ಮೇತ್ರಿ ಮಾತನಾಡಿ, "ಜೀವ ಸಂಕುಲದ ಅತ್ಯಂತ ಕೆಟ್ಟ ಪ್ರಾಣಿ ಎಂದರೆ ಮನುಷ್ಯ. ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡಿ ಹವಾಮಾನ ವೈಫರಿತ್ಯಕ್ಕೆ ಕಾರಣವಾಗಿದ್ದಾನೆ. ಜೀವ ವೈವಿಧ್ಯತೆಗಳನ್ನು ಕಾಪಾಡಲು ಬೇಸಿಗೆಯಲ್ಲಿ ಅನ್ನಾಹಾರ ಪೂರೈಸುವ ಇಂತಹ ಮಾನವೀಯ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕು" ಎಂದು ಕರೆ ನೀಡಿದರು.

"ಪ್ರಾಣಿಶಾಸ್ತ್ರ ವಿಭಾಗದ ಪ್ರಾಯೋಗಿಕ ಅಧ್ಯಯನಕ್ಕೆ ಈ ಭಾಗದಲ್ಲಿ ಸ್ಥಾಪನೆಯಾಗಿರುವ ಹಂಪಿ ಬಳಿಯ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರೀಯ ಉದ್ಯಾನವನ ಮತ್ತು ದರೋಜಿ ಕರಡಿ ಧಾಮಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವುದು ಒಳಿತು" ಎಂದು ಕಿವಿಮಾತು ಹೇಳಿದರು.

ವಿವಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ್ ಮಲಶೆಟ್ಟಿ ಮಾತನಾಡಿ, "ಆಹ್ಲಾದಕರ ದಿನಚರಿ, ಸಂತೋಷ ಮತ್ತು ಮಾನಸಿಕ ನೆಮ್ಮದಿ ನಮ್ಮಲ್ಲಿ ಕಂಡುಕೊಳ್ಳಲು ಪರಿಸರ ಕಾಳಜಿಯಂತಹ ಸೇವೆಗಳಿಂದ ಸಾಧ್ಯವಾಗುತ್ತದೆ. ಲವಲವಿಕೆಯ ಜೀವನಶೈಲಿಯು ಸ್ವಚ್ಛಂದ ಪರಿಸರದಿಂದ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷಿಗಳಿಗೆ ಜಲ-ಆಹಾರ ಅಭಿಯಾನವನ್ನು" ಆರಂಭಿಸಲಾಗಿದೆ ಎಂದರು.

ಬಿಸಿಲ ನಾಡಿನಲ್ಲಿ ಪ್ರಾಣಿ-ಪಕ್ಷಿ ಸಂಕುಲದ ರಕ್ಷಣೆಗೆ ಮುಂದಾಗಿರುವ ವಿಭಾಗದ ಕೆಲಸಕ್ಕೆ ಮೆಚ್ಚುವೆ ವ್ಯಕ್ತವಾಗಿದೆ. ವಿಶ್ವವಿದ್ಯಾಲಯದ ಆವರಣದಾದ್ಯಂತ ಇಂತಹ ಕಾರ್ಯವನ್ನು ವಿಸ್ತರಿಸಲಾಗುತ್ತದೆ. ವಿದ್ಯಾರ್ಥಿಗಳು ಮರಗಿಡಗಳಲ್ಲಿ ನೇತು ಹಾಕಿದ್ದ ಬುಟ್ಟಿಗಳಿಗೆ ಆಹಾರ ಧಾನ್ಯಗಳನ್ನು ಮತ್ತು ನೀರನ್ನು ತುಂಬಿಸಿದರು.

ವಿವಿಗೆ 50 ಲಕ್ಷ ರೂ. ಪ್ರೋತ್ಸಾಹ ಧನ: ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರವು 50 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ಮಂಜೂರು ಮಾಡಿದೆ. 2023-24ನೇ ಆರ್ಥಿಕ ಸಾಲಿನ ಆಯವ್ಯಯದ ಭಾಷಣದಲ್ಲಿ ಅತ್ಯುತ್ತಮ ಸಾಧನೆ ಮಾಡುವ ರಾಜ್ಯ ವಿಶ್ವವಿದ್ಯಾಲಯಗಳಿಗೆ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ವಿವಿ ಆಡಳಿತ ಮೌಲ್ಯಮಾಪನ ನಡೆಸಲು ಸಮಿತಿಯೊಂದನ್ನು ರಚಿಸಲಾಗಿತ್ತು.

ಒಟ್ಟು 7 ವಿವಿಧ ವರ್ಗಗಳಲ್ಲಿ ಉತ್ತಮ ಸಾಧನೆ ತೋರುವ ವಿಶ್ವವಿದ್ಯಾಲಯಗಳಿಗೆ ಪ್ರೋತ್ಸಾಹ ಧನವನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ಪಾಲುದಾರರ ಸಂಭಾಷಣೆ ವಿಭಾಗದಲ್ಲಿ ವಿಶ್ವವಿದ್ಯಾಲಯವು ಒಟ್ಟು 71 ಅಂಕಗಳನ್ನು ಕಲೆ ಹಾಕಿ ಅಗ್ರ ಸ್ಥಾನ ಪಡೆದು ಸಹಾಯಧನ ಪಡೆಯಲು ಅರ್ಹತೆ ಹೊಂದಿತ್ತು.

ವಿವಿ ಚಟುವಟಿಕೆಗಳ ಕುರಿತು ನಿರಂತರವಾಗಿ ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಸಂಗ್ರಹ, ಹಳೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಆಯೋಜಿಸುವುದು ಮತ್ತು ಪ್ರತಿಕ್ರಿಯೆ ಪಡೆಯುವುದು, ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಯಿಂದ ಸುಧಾರಣಾ ಕ್ರಮಗಳ ಕುರಿತು ನಿರಂತರವಾಗಿ ಸಲಹೆಗಳನ್ನು ಸಂಗ್ರಹಿಸುವುದು, ಉದ್ಯಮ ಸಂಸ್ಥೆಗಳೊಂದಿಗೆ ಹಾಗೂ ಉದ್ಯಮಶೀಲ ವ್ಯಕ್ತಿಗಳನ್ನು ವಿಶ್ವವಿದ್ಯಾಲಯದ ಪಠ್ಯ ರಚನಾ ಸಮಿತಿಯಲ್ಲಿ ವಿಶೇಷ ಸದಸ್ಯರಾಗಿ ಅವಕಾಶ ನೀಡಿರುವುದು ಹೀಗೆ ವಿವಿಧ ಅಂಶಗಳನ್ನು ಪರಿಗಣಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+