ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಕೈಚೆಲ್ಲಿದ ಬೆನ್ನಲ್ಲೇ ಬಿಸಿಸಿಐ ಮಹತ್ವದ ನಿರ್ಧಾರ
India Vs England T20I Series: ಬ್ರಿಸ್ಟಲ್ನಲ್ಲಿ ಜುಲೈ 09ರಂದು ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 9 ವಿಕೆಟ್ಗಳ ಹೀನಾಯ ಸೋಲನುಭವಿಸಿತು. ಈ ಮೂಲಕ ಟೀಮ್ ಇಂಡಿಯಾ ಸರಣಿಯನ್ನು ಕೈಚೆಲ್ಲಿತು. ಇದರ ಬೆನ್ನಲ್ಲೇ ಬಿಸಿಸಿಐ ಮಹತ್ವದ ನಿರ್ಧಾರಕ್ಕೆ ಬಂದಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾವು ಸತತ ಕಳಪೆ ಪ್ರದರ್ಶನದ ಹಿನ್ನೆಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡದ ಪರಿಶೀಲನೆ ನಡೆಸಲು ನಿರ್ಧರಿಸಿದೆ. ಇಂಗ್ಲೆಂಡ್ ಪ್ರವಾಸ ಮುಗಿದ ತಕ್ಷಣವೇ ಈ ಪರಿಶೀಲನೆ ಸಭೆ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಮಹತ್ವದ ನಿರ್ಧಾರಕ್ಕೆ ಮುಂದಾದ ಬಿಸಿಸಿಐ
ಬ್ರಿಸ್ಟಲ್ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಪ್ರಸ್ತುತ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 9 ವಿಕೆಟ್ಗಳ ಹೀನಾಯ ಸೋಲು ಕಂಡಿತು. ಜೊತೆಗೆ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 3-0 ಅಂತರದ ಅಜೇಯ ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಬಿಸಿಸಿಐ ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ದೇವಜಿತ್ ಸೈಕಿಯಾ ಮಹತ್ವದ ಮಾಹಿತಿ
ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ಸ್ಕಾಟ್ಲೆಂಡ್ನ ಎಡಿನ್ಬರ್ಗ್ಗೆ ತೆರಳಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು IANS ಸುದ್ದು ಸಂಸ್ಥೆಯೊಂದಿಗೆ ಮಾತನಾಡಿದ್ದು, ಭಾರತ ತಂಡವು ಪ್ರಸ್ತುತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೇ ಅವರು ಮಹತ್ವದ ವಿಚಾರಗಳನ್ನ ಪ್ರಸ್ತಾಪ ಮಾಡಿ ಗಮನ ಸೆಳೆದಿದ್ದಾರೆ.
'ಇಂಗ್ಲೆಂಡ್ ಮತ್ತು ಅದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಪಂದ್ಯಗಳಲ್ಲಿ ಭಾರತದ ಪುರುಷರ ತಂಡವು ಕಳಪೆ ಪ್ರದರ್ಶನ ತೋರಿದೆ. ಆದ್ದರಿಂದ ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿದ ತಕ್ಷಣ ನಾವು ಸಂಪೂರ್ಣ ಪರಿಶೀಲನೆ ನಡೆಸಬೇಕಾಗಿದೆ. ಆಟಗಾರರು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಾವು ಪರಿಶೀಲಿಸಲಿದ್ದೇವೆ. ಅಲ್ಲದೆ ಸರಣಿ ಮುಗಿದ ತಕ್ಷಣ ಮಹತ್ವದ ಸಭೆ ನಡೆಸಿ ಸಮಸ್ಯೆಗಳನ್ನು ಖಂಡಿತವಾಗಿಯೂ ಬಗೆಹರಿಸಲಿದ್ದೇವೆ,' ಎಂದು ಸೈಕಿಯಾ ಅವರು ತಿಳಿಸಿದ್ದಾರೆ. 'ಇಂಗ್ಲೆಂಡ್ನಲ್ಲಿ ಜುಲೈ 19 ರಂದು ಏಕದಿನ ಸರಣಿ ಮುಕ್ತಾಯಗೊಂಡ ತಕ್ಷಣವೇ ಈ ಪರಾಮರ್ಶೆ ಪ್ರಕ್ರಿಯೆ ಆರಂಭವಾಗಲಿದೆ,' ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾದಿಂದ ಕಳಪೆ ಪ್ರದರ್ಶನ
ಭಾರತ ತಂಡವು ಟಿ20 ಸರಣಿಯಲ್ಲಿ ಕಳೆದ ಕೆಲವು ವಾರಗಳಿಂದ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಮೊದಲು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 0-2 ಅಂತರದ ಹೀನಾಯ ಸೋಲು ಕಂಡಿತ್ತು. ಈಗ ಇಂಗ್ಲೆಂಡ್ ವಿರುದ್ಧವೂ ಸರಣಿ ಕೈಚೆಲ್ಲಿದೆ. ಬ್ರಿಸ್ಟಲ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 80 ರನ್ಗಳ ನೆರವಿನಿಂದ ಕೇವಲ 158/7 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಬಳಿಕ ಬ್ಯಾಟಿಂಗ್ಗಿಳಿದ ಇಂಗ್ಲೆಂಡ್ ತಂಡವು ನಾಯಕ ಹ್ಯಾರಿ ಬ್ರೂಕ್ ಅಜೇಯ 79 ಮತ್ತು ಫಿಲ್ ಸಾಲ್ಟ್ ಅಜೇಯ 59 ರನ್ಗಳ ನೆರವಿನಿಂದ 13.5 ಓವರ್ಗಳಲ್ಲಿ ಸುಲಭವಾಗಿ ಗುರಿ ಬೆನ್ನಟ್ಟಿ ಭರ್ಜರಿ ಗೆಲುವು ಸಾಧಿಸಿತು. ಇನ್ನೂ ಈ ಸರಣಿಯ ಸತತ ಸೋಲುಗಳು ಭಾರತ ತಂಡದ ಹಲವು ದೌರ್ಬಲ್ಯಗಳನ್ನು ಬಹಿರಂಗಪಡಿಸಿವೆ.
ವೇಗದ ಬೌಲಿಂಗ್ ಸ್ನೇಹಿ ಪಿಚ್ಗಳಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗವು ರನ್ ಗಳಿಸಲು ಪರದಾಡುತ್ತಿದೆ. ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯು ಬೌಲಿಂಗ್ ವಿಭಾಗದಲ್ಲಿ ಎದ್ದು ಕಾಣುತ್ತಿದೆ. ಜೊತೆಗೆ ಫೀಲ್ಡಿಂಗ್ ಕೂಡ ವಿಶ್ವ ಚಾಂಪಿಯನ್ಸ್ ಗುಣಮಟ್ಟಕ್ಕೆ ತಕ್ಕಂತೆ ಇಲ್ಲದಿರುವುದು ಕಳವಳಕ್ಕೆ ಕಾರಣವಾಗಿದೆ. ಈಗ ಸೌತಾಂಪ್ಟನ್ನಲ್ಲಿ ನಡೆಯಲಿರುವ 5ನೇ ಟಿ20 ಪಂದ್ಯ ಹಾಗೂ ನಂತರದ 3 ಪಂದ್ಯಗಳ ಏಕದಿನ ಸರಣಿಯಲ್ಲಾದರೂ ಗೆಲುವಿನ ಹಳಿಗೆ ಮರಳಲು ಭಾರತ ತಂಡವು ಭರ್ಜರಿ ಸಿದ್ಧತೆ ನಡೆಸಲೇಬೇಕಿದೆ. ಇದನ್ನು ಬಿಟ್ಟರೆ ಪರ್ಯಾಯ ದಾರಿ ಇಲ್ಲ. ಆದ್ದರಿಂದ ಮುಂದಿನ ಪಂದ್ಯಗಳಲ್ಲಿ ಯಾವ ರೀತಿ ಪ್ರದರ್ಶನ ಕಂಡುಬರಲಿದೆ ಎಂದು ಕಾದುನೋಡಬೇಕಿದೆ.












Click it and Unblock the Notifications