Gautam Gambhir: ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಸರಣಿ ಸೋಲಿನ ಬೆನ್ನಲ್ಲೇ ಗೌತಮ್ ಗಂಭೀರ್ ಕೋಚ್ ಹುದ್ದೆಗೆ ಕುತ್ತು?
Gautam Gambhir: ಬ್ರಿಸ್ಟಲ್ನಲ್ಲಿ ಗುರುವಾರ (ಜುಲೈ 10) ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿ ತನ್ನದಾಗಿಸಿಕೊಂಡರು. ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸುವ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಕ್ರಿಕೆಟ್ ತಂಡವು 5 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕೈಚೆಲ್ಲಿದೆ. ಇದರ ಬೆನ್ನಲ್ಲೇ ಭಾರತದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಭವಿಷ್ಯದ ಕುರಿತು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ಮತ್ತು ವದಂತಿಗಳು ಆರಂಭವಾಗಿವೆ. ಗಂಭೀರ್ ಅವರ ಕೋಚ್ ಹುದ್ದೆಗೆ ಕುತ್ತು ಬಂದಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಭಾರತ ತಂಡದಿಂದ ಕಳಪೆ ಪ್ರದರ್ಶನ
ನೂತನ ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಭಾರತ ತಂಡ ಅನುಭವಿಸಿದ ಸತತ ಎರಡನೇ ಸರಣಿ ಸೋಲು ಇದಾಗಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಆತಿಥೇಯ ಇಂಗ್ಲೆಂಡ್ ಸತತ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತು. ಇನ್ನೂ ಭಾರತ ತಂಡದ ಈ ಕಳಪೆ ಪ್ರದರ್ಶನವು ಕೋಚಿಂಗ್ ಸ್ಟಾಫ್ ಮತ್ತು ಮ್ಯಾನೇಜ್ಮೆಂಟ್ನ ತಂತ್ರಗಾರಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಮಾಹಿತಿ ಪ್ರಕಾರ ಗೌತಮ್ ಗಂಭೀರ್ ಅವರು ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ತಂಡದ ಪ್ರದರ್ಶನದಲ್ಲಿ ಸ್ಥಿರತೆ ಕಂಡುಬರುತ್ತಿಲ್ಲ. ಪ್ರಮುಖ ಐಸಿಸಿ ಟೂರ್ನಿಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ತಂಡವು ವಿದೇಶಿ ಅಂಗಳದಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿರುವುದು ಬಿಸಿಸಿಐ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಸರಣಿ ಮುಗಿದ ತಕ್ಷಣ ತುರ್ತು ಸಭೆ ಸಾಧ್ಯತೆ
ಸರಣಿ ಮುಗಿದ ತಕ್ಷಣವೇ ಬಿಸಿಸಿಐ ಅಧ್ಯಕ್ಷ ಮತ್ತು ಆಯ್ಕೆ ಸಮಿತಿಯ ಮುಖ್ಯಸ್ಥರು ಮುಖ್ಯ ಕೋಚ್ ಗಂಭೀರ್ ಅವರೊಂದಿಗೆ ತುರ್ತು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕಳಪೆ ಪ್ರದರ್ಶನದ ಬಗ್ಗೆ ಗಂಭೀರ್ ಅವರಿಂದ ವಿವರಣೆ ಕೇಳುವ ಸಾಧ್ಯತೆಯಿದೆ. ಅಲ್ಲದೆ ಮುಂಬರುವ ಸರಣಿಗಳಲ್ಲಿ ಪ್ರದರ್ಶನ ಸುಧಾರಿಸದಿದ್ದರೆ ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ವೈಫಲ್ಯಕ್ಕೆ ಪ್ರಮುಖ ಕಾರಣಗಳು
ಇಡೀ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಲೈನ್-ಅಪ್ ಕುಸಿತ ಕಾಣುತ್ತಲೇ ಬಂದಿದೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಭಾರತ 7 ವಿಕೆಟ್ಗೆ 158 ರನ್ಗಳ ಸಾಧಾರಣ ಮೊತ್ತವನ್ನಷ್ಟೇ ಗಳಿಸಿತು. ನಾಯಕ ಶ್ರೇಯಸ್ ಅಯ್ಯರ್ ಅಜೇಯ 80 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಇದು ಕೂಡ ಭಾರತ ಸೋಲಿಗೆ ಪ್ರಮುಖ ಕಾರಣ ಅಂದ್ರೆ ತಪ್ಪಾಗಲಾರದು.
ಅದರಲ್ಲೂ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕೇವಲ 15 ರನ್ಗಳಿಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಗಂಭೀರ್ ಅವರು ಈ ಬಾಲಕನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಇನ್ನೂ ಭಾರತ ನೀಡಿದ 159 ರನ್ಗಳ ಗುರಿಯನ್ನು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಮತ್ತು ಫಿಲ್ ಸಾಲ್ಟ್ ಸುಲಭವಾಗಿ ಬೆನ್ನಟ್ಟಿದ್ದು, ಕೇವಲ 13.5 ಓವರ್ಗಳಲ್ಲಿ ತಂಡವು ಗುರಿ ತಲುಪಿತು.
ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿ ಮತ್ತು ತಂಡದ ಆಯ್ಕೆ ಪ್ರಕ್ರಿಯೆಯ ಬಗ್ಗೆ ಈಗಾಗಲೇ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತವರಿನಲ್ಲಿ ಹಾಗೂ ವಿದೇಶಿ ಪಿಚ್ಗಳಲ್ಲಿ ಎದುರಾಳಿಗಳಿಗೆ ತಕ್ಕ ತಿರುಗೇಟು ನೀಡಲು ತಂಡ ವಿಫಲವಾಗುತ್ತಿರುವುದು ಗಂಭೀರ್ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಈ ಟಿ20 ಸರಣಿಯ ಕೊನೆಯ ಪಂದ್ಯದಲ್ಲಾದರೂ ಭಾರತ ಜಯ ಸಾಧಿಸುತ್ತದೆಯೇ ಅಥವಾ ಗಂಭೀರ್ ಅವರ ಕೋಚಿಂಗ್ ಭವಿಷ್ಯದ ಮೇಲೆ ಮತ್ತಷ್ಟು ಕುತ್ತು ತರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ಇದೀಗ ಗೌತಮ್ ಗಂಭೀರ್ ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವುದಂತೂ ನಿಜ.












Click it and Unblock the Notifications