ವೈಭವ್ಗೆ ಅವಕಾಶ ನೀಡಿದ್ದು ಒಕೆ, ಸಂಜು ಸ್ಯಾಮ್ಸನ್ ಕೈಬಿಟ್ಟಿದ್ದೇಕೆ?: ಗಂಭೀರ್ಗೆ ಪಾರ್ಥಿವ್ ಪಟೇಲ್ ಪ್ರಶ್ನೆ
Parthiv Patel: ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಟಿ20 ಕ್ರಿಕೆಟ್ ತಂಡವು ಬ್ಯಾಟಿಂಗ್ ಪ್ರದರ್ಶನದಲ್ಲಿ ಸತತ ವೈಫಲ್ಯ ಅನುಭವಿಸಿ ಸರಣಿ ಕೆಚೆಲ್ಲಿ ಕುಳಿತಿದೆ. ಈ ಹಿನ್ನೆಲೆ ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಇದೀಗ ಮಾಜಿ ಕ್ರಿಕೆಟರ್ ಪ್ರತಿಕ್ರಿಯಿಸಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಭಾರತ ತಂಡ ಸತತ ಸೋಲುಗಳ ಬೆನ್ನಲ್ಲೇ ಆಯ್ಕೆ ಪ್ರಕ್ರಿಯೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ನೇತೃತ್ವದ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ. ಅದರಲ್ಲೂ ಅನುಭವಿ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಈ ಕುರಿತು ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಕೈಚೆಲ್ಲಿದ ಟೀಮ್ ಇಂಡಿಯಾ
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಕೇವಲ 158 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 80 ರನ್ ಹೊರತುಪಡಿಸಿ ತಂಡದ ಉಳಿದ ಬ್ಯಾಟರ್ಗಳು 25 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಕೊನೆಗೆ ಈ ಸಾಧಾರಣ ಮೊತ್ತದ ಗುರಿಯನ್ನು ಇಂಗ್ಲೆಂಡ್ ತಂಡವು ಕೇವಲ 13.5 ಓವರ್ಗಳಲ್ಲಿ ಮುಗಿಸಿ ಸರಣಿ ತನ್ನದಾಗಿಸಿಕೊಂಡಿತು.
ಈವರೆಗೆ ಭಾರತ ತಂಡ ಸತತ ಐದು ಟಿ20 ಪಂದ್ಯಗಳಲ್ಲಿ (ಐರ್ಲೆಂಡ್ ವಿರುದ್ಧ ಎರಡು ಮತ್ತು ಇಂಗ್ಲೆಂಡ್ ವಿರುದ್ಧ ಮೂರು) ಸೋಲು ಅನುಭವಿಸಿದೆ. ಗೌತಮ್ ಗಂಭೀರ್ ಮುಖ್ಯ ತರಬೇತುದಾರರಾದ ಬಳಿಕ ಭಾರತ ತಂಡವು ಸತತ ಎರಡು ದ್ವಿಪಕ್ಷೀಯ ಟಿ20 ಸರಣಿಗಳನ್ನು ಕಳೆದುಕೊಂಡಿರುವುದು ಇದೇ ಮೊದಲು.
ಪಾರ್ಥಿವ್ ಪಟೇಲ್ ಗಂಭೀರ ಆರೋಪ
ಜಿಯೋಹಾಟ್ಸ್ಟಾರ್ನೊಂದಿಗೆ ಮಾತನಾಡಿದ ಪಾರ್ಥಿವ್ ಪಟೇಲ್ ಅವರು, 'ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿರುವುದರ ಹಿಂದೆ ಯಾವುದೇ ನಿರ್ಧಿಷ್ಟ ಕಾರಣಗಳಿಲ್ಲ. ಮ್ಯಾನೇಜ್ಮೆಂಟ್ ಸಂಪೂರ್ಣವಾಗಿ ಭಾವನಾತ್ಮಕ ನಿರ್ಧಾರ ತೆಗೆದುಕೊಂಡು ತಪ್ಪು ಮಾಡಿದೆ,' ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಂಜು ಸ್ಯಾಮ್ಸನ್ ಇತ್ತೀಚೆಗಷ್ಟೇ ಭಾರತ ಗೆದ್ದ ಟಿ20 ವಿಶ್ವಕಪ್ 2026ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆದರೂ ಈ ಪ್ರಸ್ತುತ ಪ್ರವಾಸದಲ್ಲಿ ಮೊದಲ ಮೂರು ಪಂದ್ಯಗಳ ಬಳಿಕ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಸ್ಯಾಮ್ಸನ್ ಆಡಿದ ಮೂರು ಪಂದ್ಯಗಳಲ್ಲಿ 5, 0 ಮತ್ತು 1 ರನ್ ಗಳಿಸಿ ವಿಫಲರಾಗಿದ್ದರು ನಿಜ. ಆದರೆ ಅವರ ಜಾಗಕ್ಕೆ ಬಂದ ಯುವ ಆಟಗಾರ ವೈಭವ್ ಸೂರ್ಯವಂಶಿ ಸಹ ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 13 ಮತ್ತು 15ರನ್ ಗಳಿಸಿದ್ದಾರೆ. ಅವರು ದೊಡ್ಡ ಮೊತ್ತದ ಇನ್ನಿಂಗ್ಸ್ ಕಟ್ಟಲು ವಿಫಲರಾಗಿದ್ದಾರೆ.
'ಭಾವನೆಗೆ ಕಟ್ಟುಬಿದ್ದು ಸಂಜು ಕೈಬಿಡಲಾಗಿದೆ'
'ಯಾವಾಗಲೂ ಸಂಜು ಸ್ಯಾಮ್ಸನ್ ಅವರನ್ನೇ ಯಾಕೆ ತಂಡದಿಂದ ಕೈಬಿಡಲಾಗುತ್ತದೆ? ಅವರ 11-12 ವರ್ಷಗಳ ಕ್ರಿಕೆಟ್ ವೃತ್ತಿಜೀವನವನ್ನು ನೋಡಿದರೆ, ಸ್ಥಿರತೆಯ ಕೊರತೆಯ ಪ್ರಶ್ನೆ ಅವರನ್ನು ಸದಾ ಕಾಡುತ್ತಿದೆ. ಸಾಮಾನ್ಯವಾಗಿ ವೇಗವಾಗಿ ರನ್ ಗಳಿಸದ ಆಟಗಾರನನ್ನು ಆಟಗಾರನನ್ನು ತಂಡದಿಂದ ಹೊರಗಿಡಲಾಗುತ್ತದೆ. ಆದರೆ ಕೇವಲ ಭಾವನೆಗೆ ಕಟ್ಟುಬಿದ್ದು ಸಂಜು ಅವರನ್ನು ಕೈಬಿಡಲಾಗಿದೆ,' ಎಂದು ಪಾರ್ಥಿವ್ ಪಟೇಲ್ ಆರೋಪಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, 'ಭಾವನಾತ್ಮಕವಾಗಿ ಯೋಚಿಸಿದರೆ 15 ವರ್ಷದ ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಅವಕಾಶ ನೀಡಿದ್ದು ಸರಿಯಾದ ಕ್ರಮವಾಗಿ ಕಾಣಬಹುದು. ಆದರೆ ನೀವು ಹೀಗೆ ಯೋಚಿಸುವುದಾದರೆ, ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್ ಅವರನ್ನು ಬೆಂಚ್ ಮೇಲೆ ಕೂರಿಸಿದ್ದು ಎಷ್ಟು ಸರಿ? ಆದ್ದರಿಂದ ಗಂಭೀರ್ ನೇತೃತ್ವದ ಮ್ಯಾನೇಜ್ಮೆಂಟ್ ಈ ನಿರ್ಧಾರವನ್ನು ಕೇವಲ ಭಾವನೆಗಳಿಗೆ ಕಟ್ಟುಬಿದ್ದು ತೆಗೆದುಕೊಂಡಿದೆ ಎಂದು ನಾನು ಭಾವಿಸುತ್ತೇನೆ,' ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಇನ್ನು ಕೇವಲ ಒಂದು ಪಂದ್ಯ ಬಾಕಿ ಉಳಿದಿದೆ. ಕೊನೆಯ ಪಂದ್ಯದಲ್ಲಾದರೂ ಸಂಜು ಸ್ಯಾಮ್ಸನ್ ಅವರಿಗೆ ಮರಳಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುತ್ತದೆಯೇ ಅಥವಾ ಯುವ ಆಟಗಾರ ವೈಭವ್ ಅವರನ್ನೇ ಮುಂದುವರೆಸಲಾಗುತ್ತದೆಯೇ ಎಂದು ಕಾದುನೋಡಬೇಕಿದೆ.












Click it and Unblock the Notifications