ಹುಲಿ ಬಂತು ಹುಲಿ.... ಬಾಳೆ ತೋಟದಲ್ಲಿ ಹುಲಿ ಪ್ರತ್ಯಕ್ಷ- ಯುವಕನ ಮೇಲೆ ದಾಳಿ!
ಚಾಮರಾಜನಗರ ಏಪ್ರಿಲ್ 12: ಇತ್ತೀಚೆಗೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಪ್ರಾಣಿಗಳು ಹೆಚ್ಚಾಗಿ ಆಗಮಿಸುತ್ತಿವೆ. ಸಾಕು ಪ್ರಾಣಿಗಳನ್ನು ತಿಂದು ಜನರ ಮೇಲೂ ದಾಳಿ ಮಾಡುತ್ತಿವೆ. ಹೀಗೆ ರೈತರೊಬ್ಬರ ಬಾಳೆ ತೋಟದಲ್ಲಿ ಇಂದು ಮಧ್ಯಾಹ್ನ ಹುಲಿಯೊಂದು ಕಾಣಿಸಿಕೊಂಡಿದ್ದು ಯುವಕನ ಮೇಲೆ ದಾಳಿ ಮಾಡಿದೆ.
ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ಬಾಳೆ ತೋಟದಲ್ಲಿ ಹುಲಿಯೊಂದು ಇಂದು ಮಧ್ಯಾಹ್ನ ಕಾಣಿಸಿಕೊಂಡಿದೆ. ಈ ವೇಳೆ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಹುಲಿ ಹಿಡಿಯಲು ಸಿದ್ದರಾಗಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡ ಹುಲಿ ಯುವಕನ ಮೇಲೆ ದಾಳಿ ಮಾಡಿದೆ.

ಹೌದು... ಹೊನ್ನೇಗೌಡನಹಳ್ಳಿ ಗ್ರಾಮದ ವೃಷಬೇಂದ್ರಪ್ಪ ಎಂಬ ರೈತ ಬೆಳೆದಿದ್ದ ಬಾಳೆ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿತ್ತು. ಹುಲಿ ದಾಳಿ ಬಳಿಕ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಯವರು ಸ್ಥಳಕ್ಕಾಗಮಿಸಿದರು. ಹುಲಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದರು. ಸೆರೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸುತ್ತಲಿದ್ದ ರೈತರು ಮತ್ತು ಗ್ರಾಮಸ್ಥರನ್ನು ಪೊಲೀಸರು ದೂರ ಕಳುಹಿಸಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು.
ಅರಣ್ಯ ಇಲಾಖೆ ನೌಕರರು ಸಿದ್ಧತೆಗಳೊಂದಿಗೆ ಅರವಳಿಕೆ ನೀಡಲು ಮುಂದಾಗಿದ್ದರು. ಆದರೆ ತಂಡವು ಬಾಳೆ ತೋಟ ಪ್ರವೇಶಿಸುತ್ತಿದ್ದಂತೆ ಹುಲಿಯು ಅಲ್ಲಿಂದ ಪಕ್ಕದ ತೋಟಕ್ಕೆ ಓಡಿ ಹೋಯಿತು. ಬಾಳೆ ತೋಟದಿಂದ ತಪ್ಪಿಸಿಕೊಂಡ ಓಡುತ್ತಿದ್ದ ಹುಲಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಿಕ್ಕಿದ್ದಾನೆ. ಆಗ ಹುಲಿ ಯುವಕನಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಮನು(22) ಎಂಬ ಯುವಕ ಗಾಯಗೊಂಡಿದ್ದು, ಯುವಕ ತಲೆ ಹಾಗು ಎಡ ಕೈಗೆ ಹುಲಿ ಪರಚಿದ್ದು ಪ್ರಾಣಾಪಾಯದಿಂದ ಯುವಕ ಪಾರಾಗಿದ್ದಾನೆ. ಹುಲಿ ಕಾಲಿಗೆ ಗಾಯ ಆಗಿರಬಹುದು ಅಥವಾ ಅನಾರೋಗ್ಯ ಇರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಇನ್ನು ಸ್ಥಳದಲ್ಲೇ ಅರಣ್ಯಾಧಿಕಾರಿಗಳು ಬೀಡು ಬಿಟ್ಟಿದ್ದಾರೆ.












Click it and Unblock the Notifications