IMD Weather Forecast: ವಾಯುಭಾರ ಕುಸಿತ, ಕರ್ನಾಟಕ ಸೇರಿ 23 ರಾಜ್ಯಗಳಿಗೆ ಭಾರೀ ಮಳೆ; ಎಲ್ಲೆಡೆ ಮುಂಗಾರು ವಿಸ್ತರಣೆ
IMD Weather Forecast: ದೇಶಾದ್ಯಂತ ಒಂದು ತಿಂಗಳು ದುರ್ಬಲವಾಗಿದ್ದ ಮುಂಗಾರು ಮಳೆ ಇದೀಗ ತೀವ್ರಗೊಂಡಿದೆ. ಕೆಲವೇ ದಿನಗಳಲ್ಲಿ ಭಾರತವನ್ನು ಸಂಪೂರ್ಣವಾಗಿ ವಿಸ್ತರಿಸಿಕೊಳ್ಳುತ್ತಿದೆ. ಸಮುದ್ರ ಮೇಲ್ಮೈ ಚಂಡಮಾರುತ ಪ್ರಸರಣ, ವಾಯುಭಾರ ಕುಸಿತ ಪ್ರಭಾವದಿಂದಾಗಿ ಕರ್ನಾಟಕ ಸೇರಿದಂತೆ ಒಟ್ಟು 23ರಾಜ್ಯಗಳಿಗೆ ಭಾರೀಯಿಂದ ಅತೀ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ವ್ಯವಸ್ಥೆಗಳು, ಬದಲಾವಣೆಗಳು ತೀವ್ರಗೊಳ್ಳುತ್ತಿದ್ದಂತೆ ಮುಂಗಾರು ಮಳೆ ಸುರಿಸುವ ಮಾರುತಗಳು ದೇಶವ್ಯಾಪಿ ತೀವ್ರಗೊಂಡಿವೆ. ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಹೊಸದಾಗಿ ವಾಯುಭಾರ ಕುಸಿತ ಉಂಟಾಗಿದೆ. ಬಿಹಾರದ ಪೂರ್ವ ಭಾಗದಲ್ಲಿ ಮೇಲ್ಮೈ ಚಂಡಮಾರುತದ ಸುಳಿಗಾಳಿಯ ಸೃಷ್ಟಿಯಾಗಿದೆ. ಇವುಗಳ ಪ್ರಭಾವದಿಂದಾಗಿ ಜುಲೈ 2ರಿಂದ ವಾಯುವ್ಯ ಭಾರತದ ರಾಜ್ಯಗಳನ್ನು ಮುಂಗಾರು ಅಧಿಕೃತವಾಗಿ ಪ್ರವೇಶಿಸಲಿದೆ. ಒಟ್ಟಾರೆಯಾಗಿ ಮುಂದಿನ 5 ದಿನ ಉತ್ತರದಿಂದ ದಕ್ಷಿಣದವರೆಗೆ ಧಾರಾಕಾರ ಮಳೆ ಆಗಲಿದೆ. ಮಳೆಗಾಲದಲ್ಲೂ ತೀವ್ರ ಬಿಸಿಲಿಗೆ ಹೈರಾಣಾಗಿ ವಾರಗಳಿಂದ ಮಳೆಗೆ ಕಾಯುತ್ತಿದ್ದ ಪ್ರದೇಶಗಳಲ್ಲೂ ಭಾರೀ ಮಳೆ ಮುನ್ಸೂಚನೆ ದೊರೆತಿದೆ.

ದೆಹಲಿಯಲ್ಲಿ ತಾಪಮಾನ ಇಳಿಕೆ, ಭರ್ಜರಿ ಮಳೆ
ದೇಶದ ರಾಜಧಾನಿ ದೆಹಲಿ ಹಾಗೂ ಉತ್ತರ ಪ್ರದೇಶ ರಾಜ್ಯಗಳನ್ನು ಮುಂಗಾರು ಮಾರುತಗಳು ಸಂಪೂರ್ಣವಾಗಿ ಆವರಿಸಿಕೊಂಡಿದೆ. ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಆಗುತ್ತಿದೆ. ಬಹಳ ದಿನಗಳ ಬಳಿಕ ಇಲ್ಲಿನ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇಳಿದಿದೆ. ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಸದ್ಯ ಮುಕ್ತಿ ಸಿಕ್ಕಿದೆ.
ಆಗ್ರಾ, ಕಾನ್ಪುರ, ಉತ್ತರ ಪ್ರದೇಶದ ಆಗ್ರಾ, ಮಥುರಾ, ವಾರಣಾಸಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯೊಂದಿಗೆ ಚಂಡಮಾರುತ ಸಂಭವದ ಮುನ್ನೆಚ್ಚರಿಕೆ ಕೊಡಲಾಗಿದೆ. ಜುಲೈ ಮೊದಲ ವಾರದಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲೂ ಮಳೆಯಾಗಲಿದೆ. ಈ ಭಾಗದಲ್ಲಿ ಮಳೆ ಆಗದ್ದಕ್ಕೆ ಬಿತ್ತನೆ ನಿಂತು ಹೋಗಿತ್ತು. ಇದೀಗ ಭತ್ತ ಬೆಳೆಯುವ ರೈತರಲ್ಲಿ ಈ ಮಳೆ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿಲಿವೆ. ಕರ್ನಾಟಕದ ಕೆಲವು ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬಿರುಗಾಳಿ ಸಹಿತ ಧಾರಾಕಾರ ಮಳೆ ಎಚ್ಚರಿಕೆ
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯವು ಹೆಚ್ಚು ಪ್ರಭಾವ ಉಂಟು ಮಾಡಲಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ, ಪುರುಲಿಯಾ, ನಾಡಿಯಾ ಜಿಲ್ಲೆಗಳಲ್ಲಿ ತೀವ್ರ ಮಳೆ ನಿರೀಕ್ಷೆ ಇದೆ. ಬಿಹಾರದ ಪಾಟ್ನಾ, ಮುಜಾಫರ್ಪುರದಲ್ಲಿ ಗಂಟೆಗೆ 65 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಇನ್ನೂ ಜಾರ್ಖಂಡ್ನ ರಾಂಚಿ, ಧನಬಾದ್ನಲ್ಲಿ ನದಿಗಳ ನೀರಿನ ಒಳಹರಿವು ಏರಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಮಹಾರಾಷ್ಟ್ರ ಕೆಲವು ಪ್ರದೇಶಗಳು, ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣ ಸಾಧ್ಯತೆ ಇದೆ. ರಾಜಸ್ಥಾನದ ಜೈಪುರ, ಕೋಟಾ ಮತ್ತು ಉದಯಪುರದಲ್ಲೂ ಗಾಳಿ ಸಹಿತ ರಣ ಮಳೆ ಮುನ್ಸೂಚನೆ ನೀಡಿದ್ದಾಗಿ ಹವಾಮಾನ ಕೇಂದ್ರ ತಿಳಿಸಿದೆ.
ಕರಾವಳಿ ರಾಜ್ಯಗಳಿಗೆ ಅಲ್ಲಲ್ಲಿ ಭಾರೀ ಮಳೆ
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲೂ ಮುಂದಿನ ದಿನಗಳಲ್ಲಿ ನಿರಂತರ ಮಳೆಯಾಗಲಿದೆ. ಕರ್ನಾಟಕ ಒಳನಾಡಿನಲ್ಲಿ ತಾಪಮಾನ ಇಳಿಕೆ ಆಗಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣವೇ ಸೃಷ್ಟಿಯಾಗಿದೆ. ಇನ್ನೂ ದಕ್ಷಿಣ ಭಾರತ ವಿವಿಧ ರಾಜ್ಯಗಳ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಭಾರೀ ಮಳೆ ಅಬ್ಬರಕ್ಕೆ ಜನ ತತ್ತರಿಸಿದ್ದಾರೆ. ಅನೇಕ ಕಡೆಗಳಲ್ಲಿ ಪ್ರವಾಸ ಸ್ಥಿತಿ ಉಂಟಾಗಿದ್ದು, ಇನ್ನೂ ಎರಡು ದಿನ ಮುಂಬೈಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.














Click it and Unblock the Notifications