Karnataka Rains: ಜೂನ್ನಲ್ಲಿ ವಾಡಿಕೆಗಿಂತ ಶೇ. 41ರಷ್ಟು ಕಡಿಮೆ ಮಳೆ ದಾಖಲು; ರೈತರಲ್ಲಿ ಆತಂಕ, ಬರದ ಬೀತಿ! ವರದಿ
Karnataka Rain Report: ಕರ್ನಾಟಕ ರಾಜ್ಯ ಮುಂಗಾರು ಮಳೆ ನಾಲ್ಕು ತಿಂಗಳ (ಜೂನ್-ಸೆಪ್ಟಂಬರ್) ಋತುವಿನಲ್ಲಿ ಮೊದಲ ತಿಂಗಳನ್ನು ಕಳೆದಿದೆ. ಈ ಒಂದು ತಿಂಗಳಲ್ಲಿ (ಜೂನ್ 1-30ರವರೆಗೆ) ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ವಾಡಿಕೆಗಿಂತ ಶೇ. 41ರಷ್ಟು ಮಳೆ ಕಡಿಮೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬುಧವಾರ ದೃಢಪಡಿಸಿದೆ. ಯಾವೆಲ್ಲ ಜಿಲ್ಲೆಗಳಲ್ಲಿ ಎಷ್ಟು ಮಳೆ ಕೊರತೆ ಆಗಿದೆ? ಮಾಹಿತಿ ಮುಂದಿದೆ.
ಜೂನ್ 4ರಂದು ಕೇರಳಕ್ಕೆ ತಡವಾಗಿ ಆಗಮಿಸಿದ ಮುಂಗಾರು ಮಳೆ ಆರಂಭದಲ್ಲೇ ದುರ್ಬಲವಾಗಿತ್ತು. ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ಜೂನ್ ತಿಂಗಳಲ್ಲಿ ಮಳೆ ಕೊರತೆ ಸೃಷ್ಟಿಯಾಗಿದೆ. ಐಎಂಡಿ ವಿಜ್ಞಾನಿಗಳ ಪ್ರಕಾರ, ಜೂನ್ ತಿಂಗಳಲ್ಲಿ ಕರ್ನಾಟಕದಲ್ಲಿ ವಾಡಿಕೆ 208 ಮಿಲಿ ಮೀಟರ್ ಮಳೆ ಆಗಬೇಕು. ಆದರೆ ಆಗಿದ್ದು ಕೇವಲ 124 ಮಿಲಿ ಮೀಟರ್ ಅಷ್ಟೇ. ಇದರಿಂದಾಗಿ 2026 ಜೂನ್ನಲ್ಲಿ ಬರೋಬ್ಬರಿ ಶೇಕಡಾ 41ರಷ್ಟು ಮಳೆ ಕೊರತೆ ಎದುರಾಗಿದೆ ಎಂದು ವರದಿ ತಿಳಿಸಿದೆ.

ಶೇ.70ರಷ್ಟು ಬಿತ್ತನೆಯೇ ಆಗಿಲ್ಲ!
ಈ ಮಳೆ ಕೊರತೆಯು ರಾಜ್ಯದಲ್ಲಿ ಮುಂಗಾರು ಹಂಗಾಮು ಬಿತ್ತನೆಯ ಮೇಲೆ ಪರಿಣಾಮ ಬೀರಿದೆ. ಶೇ. 30ರಷ್ಟು ಬಿತ್ತನೆ ಮಾಡಿದ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಕೆಲವು ರೈತರು ಬಿತ್ತಿದ್ದ ಬೀಜ ಗೇಣುದ್ದ ಆಗಿದ್ದು, ಮಳೆ ಇಲ್ಲದೇ ಒಣಗಿದೆ ಎಂದು ಆ ಬೆಳೆಯನ್ನು ನಾಶ ಮಾಡಲು ಮುಂದಾಗಿದ್ದಾರೆ. ಜೂನ್ ಮುಗಿದರೂ ಸುಮಾರು ಶೇ.70ರಷ್ಟು ಬಿತ್ತನೆಯೇ ಆಗಿಲ್ಲ. ಈ ವರ್ಷ ಕೃಷಿ ಉತ್ಪಾದನೆ ಮೇಲೆ ಮುಂಗಾರು ಕೊರತೆ ಭಾರೀ ಪ್ರಭಾವ ಉಂಟು ಮಾಡಿದೆ.
ಯಾವೆಲ್ಲ ಜಿಲ್ಲೆಗಳಲ್ಲಿ ಎಷ್ಟು ಮಳೆ ಕೊರತೆ?
ಮಲೆನಾಡು, ಒಳನಾಡು ಹಾಗೂ ಕರಾವಳಿ ಜಿಲ್ಲೆಗಳು ಮಳೆ ಕೊರತೆ ಎದುರಿಸಿವೆ. ಬೆಂಗಳೂರು ಒಳಗೊಂಡಂತೆ ದಕ್ಷಿಣ ಒಳನಾಡು ಭಾಗದಲ್ಲಿ ಜೂನ್ ತಿಂಗಳ ವಾಡಿಕೆ 67ಮಿಲಿ ಮೀಟರ್ ಮಳೆ ಆಗಿದ್ದು, ಕೇವಲ 62 ಮಿ.ಮೀ. ಮಳೆ ಆಗಿದ್ದರಿಂದ ಈ ಭಾಗದಲ್ಲಿ ಶೇ. 7ರಷ್ಟು ಮುಂಗಾರು ಕೊರತೆಯಾಗಿದೆ.
ಉತ್ತರ (ಒಳನಾಡು) ಕರ್ನಾಟಕದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಮಳೆಗಾಲದಲ್ಲೂ ಬೇಸಿಗೆಯ ಅನುಭವ ಪಡೆಯುತ್ತಿದ್ದಾರೆ. ತೀವ್ರ ಶಾಖದ ಅಲೆ ಮುಂದುವರಿದಿದೆ. ಜೂನ್ನಲ್ಲಿ ಈ ಭಾಗದಲ್ಲಿ ನಿರೀಕ್ಷಿತ ವಾಡಿಕೆ 106ಮಿಲಿ ಮೀಟರ್ ಮಳೆ ಆಗಬೇಕಿತ್ತು, ಆದರೆ ಬರೀ 75 ಮಿಲಿ ಮೀಟರ್ ಮಳೆ ಸುರಿಸುವ ಮೂಲಕ ಶೇ.29ರಷ್ಟು ಮಳೆ ಕೊರತೆ ಎದುರಾಗಿದೆ.
ಮಲೆನಾಡಿನಲ್ಲೂ ನಿರೀಕ್ಷಿತ ಮಳೆ ಆಗಿಲ್ಲ!
ಮಲೆನಾಡಿನಲ್ಲಿ 384 ಮಿಲಿ ಮಿಟರ್ ಮಳೆ ಆಗಬೇಕಿದ್ದು, ವಾಸ್ತವದಲ್ಲಿ ಕೇವಲ 162 ಮಿ.ಮೀ. ಮಳೆ ಆಗಿದ್ದರಿಂದ ಈ ವರ್ಷ ಶೇ.58ರಷ್ಟು ಮಳೆ ಕಡಿಮೆ ದಾಖಲಾಗಿದೆ. ಇನ್ನೂ 3 ಜಿಲ್ಲೆ ಒಳಗೊಂಡ ಕರಾವಳಿ ಭಾಗದಲ್ಲಿ ಜೂನ್ ವಾಡಿಕೆ 873 ಮಿಲಿ ಮಿಟರ್ ಮಳೆ ದಾಖಲಾಗಬೇಕಿತ್ತು, ಆದರೆ 473 ಮಿಲಿ ಮೀಟರ್ ಅಷ್ಟೇ ಮಳೆ ಸುರಿದಿದ್ದು, ಇದರಿಂದಾಗಿ ಆ ಭಾಗದಲ್ಲಿ ಶೇ. 46ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬುಧವಾರದ ವರದಿಯಲ್ಲಿ ತಿಳಿಸಿದೆ.
ಕೃಷಿ ಮೇಲೆ ಗಂಭೀರ ಪ್ರಭಾವ, ರೈತರಲ್ಲಿ ಆತಂಕ
ಮಳೆ ಆಶ್ರಿತ ಬೆಳೆ ನೆಚ್ಚಿಕೊಂಡಿರುವ ಹಾವೇರಿ, ಗದಗ, ಬೆಳಗಾವಿ, ಧಾರವಾಡ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್, ಕಲಬುರಗಿ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಭಾಗದ ಜಿಲ್ಲೆಗಳ ರೈತರಿಗೆ ಭಾರೀ ಸಂಕಷ್ಟ ಎದುರಾಗಿದೆ. ಬೆಳೆಗೆ ಒಂದೊಮ್ಮೆ ಜೋರು ಮಳೆ ಆದರೆ ತಕ್ಕಮಟ್ಟಿನ ಫಸಲು ನೀಡುವ ಸಾಧ್ಯತೆ ಇದೆ. ಆದರೆ ಮಳೆಯಾಗದೇ ರೈತಾಪಿ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಗಿದೆ. ಅಂತರ್ಜಲ ಮಟ್ಟ ಕುಸಿಯಲಿದ್ದು, ಕೆರೆ, ಜಲಾಶಯಗಳಲ್ಲಿ ನೀರು ಒಳಹರಿವು ಕಡಿಮೆ ಆಗಿದೆ. ನೀರಿನ ಬಳಕೆ ಹೆಚ್ಚಾಗಿದ್ದರಿಂದ ಅಣೆಕೆಟ್ಟುಗಳು ಬರಿದಾಗುತ್ತಿವೆ.
ಜುಲೈ 8ರವರೆಗೆ ಭಾರೀ ಮಳೆ ಎಚ್ಚರಿಕೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿರುವ ಬುಧವಾರ ಮುನ್ಸೂಚನಾ ವರದಿ ಪ್ರಕಾರ, ಮುಂದಿನ ಒಂದು ವಾರ (ಜುಲೈ 8ರವರೆಗೆ) ಕರಾವಳಿ ಜಿಲ್ಲೆಗಳು ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಗುರುವಾರ ಮತ್ತು ಶುಕ್ರವಾರ (ಜುಲೈ 2&3) ಧಾರಾಕಾರ ಮಳೆ ಆಗಲಿದ್ದು, 20 ಸೆಂಟಿ ಮೀಟರ್ಗೂ ಅತ್ಯಧಿಕ ಮಳೆಯಾಗುವ ಸಂಭವವಿದೆ. ಹೀಗಾಗಿ ಈ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ನೀಡಲಾಗಿದೆ. ಜುಲೈ 2ರಂದು ದಕ್ಷಿಣ ಕನ್ನಡ ಜಿಲ್ಲೆ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶಿಸಿದ್ದಾರೆ.
ಕರಾವಳಿಯಲ್ಲಿ ಜುಲೈ 4 ಮತ್ತು 5 ಮಳೆ ಕೊಂಚ ತಗ್ಗಲಿದೆ. ಅಂದು ಮೂರು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಿರುವ ಐಎಂಡಿ ವಿಜ್ಞಾನಿಗಳು ನಂತರದ ಮೂರು (ಜುಲೈ 8ರವರೆಗೆ) ಮತ್ತೆ ಇದೇ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಿದೆ.
ಇನ್ನೂ ಮುಂದಿನ ಒಂದು ವಾರ ಬೆಳಗಾವಿ, ಧಾರವಾಡ, ಹಾವೇರಿ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 65ರಿಂದ 115 ಮಿಲಿ ಮೀಟರ್ವರೆಗೆ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಹಿನ್ನೆಲೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ಮಬ್ಬು ವಾತಾವರಣ ಕಂಡು ಬರಲಿದೆ ಎಂಬ ಮುನ್ಸೂಚನೆ ಇದೆ.















Click it and Unblock the Notifications