ಮೈಸೂರು ಚಾಮರಾಜ ಕ್ಷೇತ್ರದ ಚುನಾವಣಾ ಚಿತ್ರ
ಮೈಸೂರು, ಜನವರಿ 17 : ಮೈಸೂರು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಚಾಮರಾಜ ಕ್ಷೇತ್ರ. ಚುನಾವಣೆ ದಿನಾಂಕ ಘೋಷಣೆಯ ಮುನ್ನವೇ ಕ್ಷೇತ್ರದ ಜೆಡಿಎಸ್ ಘಟಕದಲ್ಲಿ ಭಿನ್ನಮತ ಸದ್ದು ಮಾಡುತ್ತಿದೆ. ಅತ್ತ ಬಿಜೆಪಿ ಟಿಕೆಟ್ಗೆ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕ್ಷೇತ್ರದ ಬಿಜೆಪಿ ಟಿಕೆಟ್ಗೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ. ಮಂಜುನಾಥ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಸನ್ನಗೌಡ, ಮುಡಾ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಮಾದೇಗೌಡ, ಪಾಲಿಕೆ ಸದಸ್ಯ ನಂದೀಶ್ ಪ್ರೀತಂ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಇವರೆಲ್ಲರೂ ಟಿಕೆಟ್ ಆಕಾಂಕ್ಷಿಗಳು.
ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ಗೆ ಬಂಡಾಯದ ಬಿಸಿ!
ಚುನಾವಣೆ ಹೊತ್ತಿಗೆ ಈ ಪಟ್ಟಿ ಮತ್ತಷ್ಟು ದೊಡ್ಡದಾಗಲಿದೆ ಎನ್ನುತ್ತಾರೆ ಕ್ಷೇತ್ರದ ಮುಖಂಡರು. ಸೇವಾ ಕಾರ್ಯ, ಉಚಿತ ಶಿಬಿರ, ಸಭೆ, ಸಮಾರಂಭ ಹಮ್ಮಿಕೊಳ್ಳಲು ಟಿಕೆಟ್ ಆಕಾಂಕ್ಷಿಗಳಲ್ಲಿ ಪೈಪೋಟಿ ಏರ್ಪಟ್ಟಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ.
ಡಾ. ಮಂಜುನಾಥ್ ಅವರು ತಮ್ಮ ಒಡೆತನದ ಪ್ರಯೋಗಾಲಯದಲ್ಲಿ ರಿಯಾಯಿತಿ ದರದಲ್ಲಿ ಆರೋಗ್ಯ ತಪಾಸಣೆಗೆ ಅನುವು ಮಾಡಿಕೊಟ್ಟು ಕ್ಷೇತ್ರದ ಜನರ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.
'ಆಕಾಂಕ್ಷಿಗಳು ಹೆಚ್ಚಿರುವುದು ನಿಜ. ಆದರೆ, ನನಗೆ ಟಿಕೆಟ್ ಸಿಗುವ ಭರವಸೆ ಇದೆ. ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ನನ್ನ ಮೇಲೆ ಪಕ್ಷದ ವರಿಷ್ಠರಿಗೆ ನಂಬಿಕೆ ಇದೆ' ಎನ್ನುತ್ತಾರೆ ಮಂಜುನಾಥ್.
ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರೋ. ರಂಗಪ್ಪ ಕಣಕ್ಕೆ
ಒಕ್ಕಲಿಗರ ಸಮುದಾಯದವರೇ ಆದ ಪ್ರಸನ್ನ ಕೂಡ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಪೂಜಾ ಕಾರ್ಯಕ್ರಮ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ.
ಈ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಗೇಂದ್ರ ಕೂಡ ಮತ್ತೆ ಟಿಕೆಟ್ ಬಯಸಿದ್ದಾರೆ. ಮಾಜಿ ಶಾಸಕ ಶಂಕರಲಿಂಗೇಗೌಡರ ಪುತ್ರ, ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಕೂಡ ಟಿಕೆಟ್ಗೆ ಪ್ರಯತ್ನ ಮುಂದುವರಿಸಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಬಸವೇಗೌಡರು, ಟಿಕೆಟ್ ಗಾಗಿ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ನಿಂದ ಹಾಲಿ ಶಾಸಕ ವಾಸು ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಆದರೆ, ಜೆಡಿಎಸ್ ನಲ್ಲಿ ಅಭ್ಯರ್ಥಿಯನ್ನು ಈಗಲೇ ಘೋಷಣೆ ಮಾಡಿರುವುದು ಭಿನ್ನಮತಕ್ಕೆ ಕಾರಣವಾಗಿದೆ.
ಸಮಾವೇಶ ಏರ್ಪಡಿಸಿ ಪ್ರೊ. ಕೆ.ಎಸ್.ರಂಗಪ್ಪ ಅವರನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದ ವರಿಷ್ಠ ದೇವೇಗೌಡರು ಹಾಗೂ ಹೆಚ್. ಡಿ ಕುಮಾರಸ್ವಾಮಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಇದರಿಂದ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನು ಎಂದು ಓಡಾಡುತ್ತಿದ್ದ ಕೆ. ಹರೀಶ್ ಗೌಡ ಅವರಿಗೆ ಆಘಾತವಾಗಿದೆ.
ಪಕ್ಷದ ವಿರುದ್ಧ ದನಿ ಎತ್ತಿದ್ದಕ್ಕೆ ಅವರನ್ನು ನಗರ ಘಟಕದ ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿಸಲಾಗಿದೆ. ಅದಕ್ಕೆಲ್ಲ ಸೊಪ್ಪು ಹಾಕದೆ ತಮ್ಮ ಬೆಂಬಲಿಗರ ಸಭೆ ನಡೆಸಿ ಕ್ಷೇತ್ರದಿಂದ ಸ್ಪರ್ಧಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಅಲ್ಲದೇ ಈ ಕ್ಷೇತ್ರದಲ್ಲಿ ವಿವಿಧ ಸೇವೆಗಳ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.
ಇದರಿಂದಾಗಿ ಜೆಡಿಎಸ್ ನಲ್ಲಿ ಬಂಡಾಯದ ಬಿಸಿ ಈಗಾಗಲೇ ಜೋರಾಗಿದೆ. ಕಾರ್ಯಕರ್ತರ ನಡುವೆ ಕಿತ್ತಾಟ ನಡೆದಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಮೈಸೂರು ವಿವಿ ವಿಶ್ರಾಂತ ಕುಲಪತಿ ರಂಗಪ್ಪ ಅವರು, ಕ್ಷೇತ್ರಕ್ಕೆ ಪದೇ ಪದೇ ಪಕ್ಷದ ವರಿಷ್ಠರನ್ನು ಕರೆಸಿ ತಮ್ಮ ಬಲವನ್ನು ಪ್ರದರ್ಶಿಸುತ್ತಿದ್ದಾರೆ. ಈಚೆಗೆ ಕಲಾಮಂದಿರದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಬುದ್ಧೀ ಜೀವಿಗಳೊಂದಿಗೆ ನಡೆದ ಸಂವಾದ ಇದಕ್ಕೊಂದು ಸ್ಪಷ್ಟ ನಿದರ್ಶನ.