Get Updates
Get notified of breaking news, exclusive insights, and must-see stories!

ಬಿಸಿಲಿಗೆ ಒಣಗಿ ಬೋರಲಾಗುತ್ತಿರುವ ಅರಣ್ಯ..ಜೀವಸಂಕುಲದ ಗತಿಯೇನು?

ಮೈಸೂರು, ಏಪ್ರಿಲ್‌ 25: ಇಷ್ಟರಲ್ಲಿಯೇ ಮಳೆ ಸುರಿಯಬೇಕಾಗಿತ್ತು. ಆದರೆ ಬಹುತೇಕ ಕಡೆಗಳಲ್ಲಿ ಅದರಲ್ಲೂ ನಾಗರಹೊಳೆ, ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಮಳೆ ಸುರಿಯದ ಕಾರಣ ಅರಣ್ಯ ಒಣಗುತ್ತಿದ್ದು, ಕೆರೆಕಟ್ಟೆಗಳಲ್ಲಿ ನೀರು ಬತ್ತಿದೆ. ಪರಿಣಾಮ ಜೀವ ಸಂಕುಲಗಳ ಸ್ಥಿತಿ ಚಿಂತಾಜನಕವಾಗಿದೆ.

ಮುಂಗಾರು ಮಳೆ ಸಮೃದ್ಧವಾಗಿ ಸುರಿಯದ ಕಾರಣ ಮತ್ತು ಬೇಸಿಗೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಕಾರಣ ಈಗಾಗಲೇ ಕುರುಚಲು ಕಾಡು ಸೇರಿದಂತೆ ಮರಗಿಡಗಳು ಒಣಗಿವೆ ಇದರಿಂದ ಹಚ್ಚ ಹಸಿರಿನಿಂದ ಕೂಡಿ ನಿಸರ್ಗ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದ್ದ ಅರಣ್ಯ ಪ್ರದೇಶ ಬಿರು ಬಿಸಿಲಿಗೆ ಒಣಗಿ ಬೋರಲಾಗುತ್ತಿದೆ. ಜತೆಗೆ ಕುರುಚಲು ಕಾಡುಗಳು ಒಣಗಿ ನಿಂತಿದ್ದು, ಕೆರೆಗಳಲ್ಲಿ ನೀರು ಬತ್ತುತ್ತಿರುವುದರಿಂದ ಬೇಸಿಗೆಯ ದಿನಗಳು ಕಳೆಯುವ ವೇಳೆಗೆ ಮಳೆ ಬಾರದೆ ಹೋರದೆ ಅರಣ್ಯ ನಾಶವಾಗಿ ಬಿಡುತ್ತಾ ಎಂಬ ಭಯ ಕಾಡುತ್ತಿದೆ.

Karnataka Drought The Trees Are Drying Up Due To Summer In Forest

ಇದೀಗ ಬಂಡಿಪುರ, ನಾಗರಹೊಳೆ ಸೇರಿದಂತೆ ಅರಣ್ಯ ಪ್ರದೇಶಗಳಿಗೊಂದು ಸುತ್ತು ಹೊಡೆದು ಬಂದರೆ ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ಅಭಯಾರಣ್ಯದ ಮರಗಿಡಗಳು ಸಂಪೂರ್ಣ ಒಣಗಿ ನಿಂತಿರುವುದು, ಹಸಿರು ಮೇವು, ನೀರಿಗಾಗಿ ಜಿಂಕೆಗಳು ಸೇರಿದಂತೆ ಹಲವು ಪ್ರಾಣಿಗಳು ಅಲೆಯುತ್ತಿರುವುದು ಕಂಡು ಬರುತ್ತಿದೆ.

ಪ್ರವಾಸಿಗರನ್ನು ನಿರಾಸೆಗೆ ತಳ್ಳುತ್ತಿದೆ

ಬಹಳಷ್ಟು ಪ್ರಾಣಿಗಳಿಗೆ ಹಸಿರು ಮೇವಿನ ಸಮಸ್ಯೆ ಉಂಟಾಗಿದ್ದು, ನೀರಿನ ಆಶ್ರಯವಿರುವ ಸ್ಥಳಗಳಲ್ಲಿ ಸ್ವಲ್ಪಮಟ್ಟಿಗೆ ಹಸಿರು ಮೇವು ದೊರೆಯುವ ಕಾರಣ ಅಂತಹ ಪ್ರದೇಶಗಳನ್ನು ಹುಡುಕಿಕೊಂಡು ಹೋಗುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ ಸಪಾರಿಗೆ ತೆರಳುವ ಮಂದಿಗೆ ಹೆಚ್ಚಿನ ಕಾಡು ಪ್ರಾಣಿಗಳು ಕಾಣಸಿಗುವುದು ಕಷ್ಟವಾಗಲಿದೆ ಎಂದರೆ ತಪ್ಪಾಗಲಾರದು.

Karnataka Drought The Trees Are Drying Up Due To Summer In Forest

ಕಳೆದ ವರ್ಷ ಅರಣ್ಯ ಪ್ರದೇಶಗಳಿಗೆ ಬಂದು ಹೋದ ಪ್ರವಾಸಿಗರು ಇದೀಗ ಇತ್ತ ಬಂದಿದ್ದೇ ಆದರೆ ಅಚ್ಚರಿಗೊಳ್ಳುವುದು ಖಚಿತ. ಏಕೆಂದರೆ ಈಗಿನ ರಣಬಿಸಿಲು ಹಸಿರನ್ನೇ ಬಲಿತೆಗೆದುಕೊಂಡಿದೆ. ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಹಸಿರು ಹೊದ್ದುಕೊಂಡಿದ್ದ ಈ ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಜಿಂಕೆ ಕಡವೆ, ಕಾಡೆಮ್ಮೆ, ಆನೆ, ಹುಲಿ, ಚಿರತೆಗಳು ಕಾಣುತ್ತಿದ್ದವು. ಜತೆಗೆ ಕಣ್ಣು ಹಾಯಿಸಿದುದ್ದಕ್ಕೂ ಹಸಿರು ರಾಚುತ್ತಿತ್ತು. ಶುದ್ದ ಗಾಳಿ, ತಂಪು ವಾತಾವರಣ, ಮನಕ್ಕೆ ಮುದ ನೀಡುತ್ತಿತ್ತು. ಈಗ ನೆತ್ತಿಸುಡುವ ಬಿಸಿಲು, ಒಣಗಿ ನಿಂತ ಅರಣ್ಯ, ಅಸಹಾಯಕ ಪ್ರಾಣಿಗಳು ಎಲ್ಲವೂ ಪ್ರವಾಸಿಗರನ್ನು ನಿರಾಸೆಗೆ ತಳ್ಳುತ್ತಿದೆ.

ಅರಣ್ಯ ಇಲಾಖೆಯ ಶ್ಲಾಘನೀಯ ಕಾರ್ಯ

ಈಗಾಗಲೇ ಅರಣ್ಯದಲ್ಲಿ ಹಸಿರು ಮೇವು ಸಿಗದ ಕಾರಣ ಕಾಡು ಪ್ರಾಣಿಗಳು ರೈತರ ಜಮೀನಿನತ್ತ ಮುಖ ಮಾಡಿದ್ದು ಪ್ರಾಣಿ ಮತ್ತು ಮಾನವ ಸಂಘರ್ಷಗಳು ಆರಂಭವಾಗಿದೆ. ಜತೆಗೆ ನೀರು, ಮೇವು ಅರಸಿಕೊಂಡು ಸ್ವಸ್ಥಾನ ಬಿಟ್ಟು ಮರಳಿವೆ. ಹೀಗಾಗಿ ಸಫಾರಿಗೆ ಬಂದವರಿಗೆ ಪ್ರಾಣಿಗಳು ಕಾಣ ಸಿಗದಂತಾಗಿದೆ.

ಈಗಾಗಲೇ ನಾಗರಹೊಳೆ ಅರಣ್ಯ ಪ್ರದೇಶದ ಕೆಲವೆಡೆಗಳಲ್ಲಿ ಮಳೆ ಸುರಿದಿರುವುದು ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತದೆ ಎಂಬ ಕಾರಣಕ್ಕಾಗಿ ಈ ಹಿಂದೆಯೇ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿದೆ. ಜತೆಗೆ ಅರಣ್ಯದತ್ತ ಇಲಾಖೆ ನಿಗಾವಹಿಸಿದ್ದು, ಕಾಡ್ಗಿಚ್ಚು ಉಂಟಾಗದಂತೆ ಎಚ್ಚರಿಕೆಯ ಕ್ರಮ ವಹಿಸಿರುವುದು ಶ್ಲಾಘನೀಯ.

ವರುಣ ಆದಷ್ಟು ಬೇಗ ಕೃಪೆ ತೋರಲಿ

ಇದಲ್ಲದೆ, ವನ್ಯ ಜೀವಿಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕೆರೆಗಳಿಗೆ ಸೋಲಾರ್ ಮೋಟಾರ್ ಮೂಲಕ ನೀರನ್ನು ತುಂಬಿಸುವ ಕೆಲಸವನ್ನು ಮಾಡಿದೆ. ಬಿಸಿಲ ಧಗೆ ಮುಂದುವರೆದು ಪರಿಸ್ಥಿತಿ ಹೀಗೆಯೇ ಇದ್ದರೆ ಬಹಳಷ್ಟು ಪ್ರಾಣಿಗಳು ನೀರು, ಆಹಾರ ಹುಡುಕಿಕೊಂಡು ವಲಸೆ ಹೋದರೂ ಅಚ್ಚರಿಯಿಲ್ಲ.

ಮುಂದಿನ ದಿನಗಳಲ್ಲಿ ಈ ಅರಣ್ಯ ವ್ಯಾಪ್ತಿಯಲ್ಲಿ ಮಳೆ ಬಂದರೆ ಪ್ರಾಣಿ ಪಕ್ಷಿ ಮತ್ತು ಗಿಡ ಮರಗಳು ನೆಮ್ಮದಿಯುಸಿರು ಬಿಡಲು ಸಾಧ್ಯವಾಗಲಿದೆ. ಸದ್ಯಕ್ಕೆ ಹುಯ್ಯೋ ಹುಯ್ಯೋ ಮಳೆರಾಯ ಎಂದು ಪ್ರಾರ್ಥಿಸುವುದಷ್ಟೆ ನಮ್ಮಿಂದ ಮಾಡಬಹುದಾದ ಕಾರ್ಯವಾಗಿದೆ. ಆದಷ್ಟು ಬೇಗ ವರುಣ ಕೃಪೆ ತೋರುವಂತಾಗಲಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+