ಬೆಂಗಳೂರಿನಾಚೆಗೆ ಮತ್ತಷ್ಟು ಹೊಸ ಬೆಂಗಳೂರುಗಳ ನಿರ್ಮಾಣ, ಆಸ್ತಿದಾರರಿಗೆ ಸಿಎಂ ಡಿಕೆ ಶಿವಕುಮಾರ್ ಗುಡ್ನ್ಯೂಸ್
ಬೆಂಗಳೂರಿನಾಚೆಗೆ ಮತ್ತಷ್ಟು ಬೆಂಗಳೂರುಗಳನ್ನು ನಿರ್ಮಿಸಲು ನಮ್ಮ ಸರ್ಕಾರ ಮುಂದಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಸೌಕರ್ಯಗಳನ್ನು ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳಿಗೂ ಒದಗಿಸಲು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಬುಧವಾರ ನಡೆದ ಟಾರ್ಗೆಟ್ ಇಂಡಿಯಾ ಕಾರ್ಯಕ್ರಮದಲ್ಲಿ ಹಾಗೂ ಬಳಿಕ ಮಾಧ್ಯಮಗಳ ಜೊತೆ ಶಿವಕುಮಾರ್ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಕಚೇರಿ ಜಾಗದ ಬಾಡಿಗೆ 1 ರಿಂದ 1.5 ಡಾಲರ್ ಇದೆ. ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಅರ್ಧ ಡಾಲರ್ಗೆ ಸಿಗುತ್ತದೆ. ಅಲ್ಲಿ ಡಬಲ್ ಎಫ್ಎಆರ್ ನೀಡಲು ಮುಂದಾಗಿದ್ದೇವೆ. ಆ ಮೂಲಕ ಅಲ್ಲಿಯೂ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಲು ಮುಂದಾಗಿದ್ದೇವೆ. ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ನಿಮ್ಮ ಸಲಹೆಗಳಿಗೆ ನಾವು ಮುಕ್ತರಾಗಿದ್ದೇವೆ ಎಂದು ಹೇಳಿದ್ದಾರೆ.
ನೀವೆಲ್ಲರೂ ಬಲಿಷ್ಠವಾಗಿ ಬೆಳೆಯಲು ಎಲ್ಲಾ ಸಹಕಾರ ನೀಡಲು ಸಿದ್ಧ. ನೀವು ಬಲಿಷ್ಠರಾದರೆ ನಾವು ಬಲಿಷ್ಠರಾಗಲು ಸಾಧ್ಯ. ನೀವೆಲ್ಲರೂ ಕರ್ನಾಟಕದ ಪ್ರಗತಿಯ ಪಾಲುದಾರರು, ರಾಯಭಾರಿಗಳು. ಈ ರಾಜ್ಯ ಹಾಗೂ ದೇಶದ ಪ್ರಗತಿಗೆ ನಾವು ನಿಮ್ಮ ಜೊತೆ ಕೆಲಸ ಮಾಡಲಿದ್ದೇವೆ. ನಾವೆಲ್ಲರೂ ಒಂದೇ ತಂಡ 'ಟೀಮ್ ಕರ್ನಾಟಕ'. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು" ಎಂದು ತಿಳಿಸಿದರು.

ಕರ್ನಾಟಕ ಪ್ರತಿಭಾವಂತ ಮಾನವ ಸಂಪನ್ಮೂಲಗಳ ಕೇಂದ್ರ
ನಮ್ಮ ರಾಜ್ಯದಲ್ಲಿ ಪ್ರತಿಭಾನ್ವಿತ ಮಾನವ ಸಂಪನ್ಮೂಲ ಇದೆ. ನಮ್ಮ ರಾಜ್ಯದಲ್ಲಿ 257 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿ ವರ್ಷ 1.50 ಲಕ್ಷ ಎಂಜಿನಿಯರ್ ಗಳನ್ನು ತಯಾರು ಮಾಡುತ್ತಿದ್ದೇವೆ. ಇಂದು ನಿಮ್ಮ ಉಪಸ್ಥಿತಿಯೇ ನಮ್ಮ ಮೇಲಿರುವ ನಂಬಿಕೆಗೆ ಸಾಕ್ಷಿಯಾಗಿದೆ. ನಮ್ಮ ಮೇಲೆ ನಂಬಿಕೆ ಇಟ್ಟಿರುವ ನಿಮಗೆ ಧನ್ಯವಾದಗಳು. ನೀವು ನಿಮ್ಮ ಸಲಹೆಗಳ ಮೂಲಕ ಈ ರಾಜ್ಯಕ್ಕೆ ಹೊಸ ರೂಪ ನೀಡುತ್ತಿದ್ದೇವೆ. ನಮ್ಮ ಜೊತೆ ಕೆಲಸ ಮಾಡಿದವರು ಯಾರೂ ಹಿಂದಕ್ಕೆ ಹೋಗಿಲ್ಲ. ಬೆಂಗಳೂರು ಜಾಗತಿಕ ನಗರವಾಗಿದ್ದು, ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾಗುತ್ತಿದೆ. ಬೆಂಗಳೂರಿನಲ್ಲಿ ಉದ್ಯಮಗಳಿಗೆ ಅಗತ್ಯವಿರುವ ಸಹಕಾರ ನೀಡಿ, ನಾವೂ ಕೈ ಜೋಡಿಸುತ್ತೇವೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ ಎಂದಿದ್ದಾರೆ.
ಕರ್ನಾಟಕಕ್ಕೆ ಬಂದ ಕಂಪನಿಗಳು ಇಲ್ಲಿನ ಸಾಮರ್ಥ್ಯ, ಪ್ರತಿಭೆ ಬಗ್ಗೆ ಅರಿತಿದ್ದಾರೆ. ನಾವು ಭವಿಷ್ಯದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕೇವಲ ಬೆಂಗಳೂರು ಮಾತ್ರವಲ್ಲ ಕರ್ನಾಟಕದ ಇತರೆ ಭಾಗಗಳಲ್ಲಿ ಉದ್ಯಮ ಆರಂಭಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಹಾರಾಷ್ಟ್ರವು ಉದ್ಯಮಗಳಿಗೆ ದುಬಾರಿಯಾಗಿದ್ದು, ಅವರಿಗೆ ಕರ್ನಾಟಕ ಉತ್ತಮ ಆಯ್ಕೆಯಾಗಿದೆ ಎಂದು ನಮ್ಮ ಸ್ನೇಹಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಕಚೇರಿ ಕೆಲಸ ಮುಗಿಸಿ 30-40 ನಿಮಿಷಗಳಲ್ಲಿ ಮನೆ ಸೇರಲು ಬಯಸುತ್ತಾರೆ. ಕರ್ನಾಟಕ ಈ ಎಲ್ಲಾ ಆಯಾಮಗಳನ್ನು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ.
ಇಲ್ಲಿನ ಸಂಸ್ಕೃತಿ ಹಾಗೂ ಹವಾಮಾನ ಬೆಂಗಳೂರಿನ ಅತಿ ದೊಡ್ಡ ಬಲ. ನಮ್ಮ ಸಂಸ್ಕೃತಿ ಉಳಿಸಿಕೊಂಡು ಪ್ರಗತಿ ಸಾಧಿಸುವ ಗುರಿ ಹೊಂದಿದ್ದೇವೆ. ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸುತ್ತಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ದೇಶದಲ್ಲಿ 138 ಅಂತಾರಾಷ್ಟ್ರೀಯ ಶಾಲೆಗಳಿದ್ದು, ಆ ಪೈಕಿ 40 ಶಾಲೆಗಳು ಕರ್ನಾಟಕ ಹಾಗೂ ಬೆಂಗಳೂರಿನಲ್ಲಿವೆ. ಬೆಂಗಳೂರಿನಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರು ಕೆಲಸ ಮಾಡುತ್ತಿದ್ದಾರೆ. ನಾವು ನಿಮ್ಮ ನಿರೀಕ್ಷೆಯನ್ನು ತಲುಪಲಿದ್ದೇವೆ. ಬೆಂಗಳೂರು ಟೆಕ್ ಸಮಿಟ್ ನಿಮ್ಮೆಲ್ಲರಿಗೂ ಒಂದು ಅವಕಾಶವನ್ನು ನೀಡಲಿದ್ದು, ದೇಶದ ದೊಡ್ಡ ಟೆಕ್ ಸಮಿಟ್ ಗಳಲ್ಲಿ ಒಂದಾಗಿದೆ. ನಾವು ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪನೆಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.













Click it and Unblock the Notifications