ನನ್ನ ಪತ್ನಿ ಕ್ಷೇಮವಾಗಿದ್ದಾರೆ, ನಿಧನದ ಸುದ್ದಿ ಸುಳ್ಳು: ಬಿಜೆಪಿ ಶಾಸಕ ಸಿ.ಎನ್.ಅಶ್ವತ್ಥನಾರಾಯಣ್ ಸ್ಪಷ್ಟನೆ
ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ಎಷ್ಟು ವೇಗವಾಗಿ ಸಿಗುತ್ತದೆಯೋ, ಅಷ್ಟೇ ವೇಗವಾಗಿ ಸುಳ್ಳು ಸುದ್ದಿಗಳೂ (Fake News) ಹರಡುತ್ತಿವೆ. ಸತ್ಯ ಏನೆಂದು ಪರಿಶೀಲಿಸುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಶೇರ್ಗಳ ಬೆನ್ನತ್ತಿ ಹೋಗುವ ಧಾವಂತ, ಬದುಕಿರುವವರನ್ನೇ ಸಾವಿನ ಮನೆಗೆ ತಳ್ಳುವಷ್ಟು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗುತ್ತಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿಯ ನಿಧನದ ಸುಳ್ಳು ಸುದ್ದಿ ನೋಡಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಬೇಸರ ಹೊರಹಾಕಿದ್ದು, ಸ್ಪಷ್ಟನೆಯೂ ನೀಡಿದ್ದಾರೆ.
ತಮ್ಮ ಧರ್ಮಪತ್ನಿ ಅವರ ಕುರಿತು ಕೆಲವು ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ನಿಧನದ ಸುದ್ದಿ ಸಂಪೂರ್ಣ ಸುಳ್ಳು" ಎಂದು ಸಿ.ಎನ್.ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಕೆಲವು ಸೋಶಿಯಲ್ ಮೀಡಿಯಾ ಪೇಜ್ಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಅಶ್ವತ್ಥನಾರಾಯಣ್ ಅವರ ಪತ್ನಿ ನಿಧನರಾಗಿದ್ದಾರೆ ಎಂಬ ವದಂತಿ ಹರಡಿತ್ತು. ಇದಕ್ಕೆ ಸಂಬಂಧಿಸಿದಂತೆ ಆಘಾತ ವ್ಯಕ್ತಪಡಿಸಿರುವ ಅವರು, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಈ ಸುಳ್ಳು ಸುದ್ದಿಯನ್ನು ಖಂಡಿಸಿದ್ದಾರೆ ಹಾಗೂ ಸಾರ್ವಜನಿಕರು ಇಂತಹ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿದ್ದಾರೆ.

ಹೆಸರಿನ ಗೊಂದಲವೇ ಸುಳ್ಳು ಸುದ್ದಿಗೆ ಕಾರಣ
ರಾಜಕೀಯ ವಲಯದ ಮೂಲಗಳ ಪ್ರಕಾರ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ರಾಜ್ಯ ಮುಖ್ಯ ವಕ್ತಾರರಾಗಿರುವ ಮತ್ತೊಬ್ಬ ನಾಯಕ ಶ್ರೀ ಅಶ್ವತ್ಥನಾರಾಯಣ್ ಅವರ ಧರ್ಮಪತ್ನಿ ಸುನೀತಾ ಅವರು ನಿಧನರಾಗಿದ್ದರು. ಮೃತರ ಆತ್ಮಕ್ಕೆ ಸಂತಾಪ ಸೂಚಿಸುವ ಭರದಲ್ಲಿ ಕೆಲವು ಡಿಜಿಟಲ್ ಮಾಧ್ಯಮಗಳು ಹಾಗೂ ನೆಟ್ಟಿಗರು, ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರ ಪತ್ನಿಯೇ ನಿಧನರಾಗಿದ್ದಾರೆ ಎಂದು ತಪ್ಪು ಫೋಟೋ ಹಾಗೂ ವಿವರಗಳೊಂದಿಗೆ ಸುಳ್ಳು ಸುದ್ದಿ ಹರಡಿದ್ದರು.
ಕೆಲವು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಡಿಜಿಟಲ್ ಮಾಧ್ಯಮಗಳಲ್ಲಿ ನನ್ನ ಧರ್ಮ ಪತ್ನಿ ಅವರ ಕುರಿತು ಹರಿದಾಡುತ್ತಿರುವ ನಿಧನದ ಸುದ್ದಿ ಸಂಪೂರ್ಣ ಸುಳ್ಳು ಸುದ್ದಿಯಾಗಿದೆ.
— Dr. C.N. Ashwath Narayan (@drashwathcn) July 8, 2026
ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ರಾಜ್ಯ ಮುಖ್ಯ ವಕ್ತಾರರಾದ ಶ್ರೀ ಅಶ್ವತ್ಥನಾರಾಯಣ್ ಅವರ ಧರ್ಮಪತ್ನಿ ಶ್ರೀಮತಿ ಸುನೀತಾ ಅವರ ನಿಧನದ ಸುದ್ದಿ ತಿಳಿದು ತೀವ್ರ… pic.twitter.com/PTQCZwdMFt
ಅಶ್ವತ್ಥನಾರಾಯಣ್ ಕೊಟ್ಟ ಸ್ಪಷ್ಟನೆ ಏನು?
ಸುಳ್ಳು ಸುದ್ದಿ ವಿರುದ್ಧ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಕೆಲವು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಡಿಜಿಟಲ್ ಮಾಧ್ಯಮಗಳಲ್ಲಿ ನನ್ನ ಧರ್ಮ ಪತ್ನಿ ಅವರ ಕುರಿತು ಹರಿದಾಡುತ್ತಿರುವ ನಿಧನದ ಸುದ್ದಿ ಸಂಪೂರ್ಣ ಸುಳ್ಳು ಸುದ್ದಿ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ನಿಜವಾಗಿಯೂ ನಿಧನರಾಗಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ್ ಅವರ ಪತ್ನಿ ಸುನೀತಾ ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ಅವರು, "ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ರಾಜ್ಯ ಮುಖ್ಯ ವಕ್ತಾರರಾದ ಅಶ್ವತ್ಥನಾರಾಯಣ್ ಅವರ ಧರ್ಮಪತ್ನಿ ಸುನೀತಾ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ದಿವಂಗತ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಮತ್ತು ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.
ಕ್ಲಿಕ್ಗಳ ಬೆನ್ನತ್ತಿ ಹೋಗುವ ಭರದಲ್ಲಿ ಹೆಸರಿನ ಗೊಂದಲದಿಂದಾಗಿ ಬದುಕಿರುವವರನ್ನೇ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿರುವುದು ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications