Karnataka Weather: ಮೈಸೂರು, ಬಾಗಲಕೋಟೆ ಸೇರಿ ಎಂಟು ಜಿಲ್ಲೆಗಳಿಗೆ ತಂಪಿನ ಸುದ್ದಿ ಕೊಟ್ಟ ಹವಾಮಾನ ಇಲಾಖೆ
ಬೆಂಗಳೂರು, ಏಪ್ರಿಲ್. 24: ಬರದಿಂದ ತತ್ತರಿಸಿದ್ದ ರಾಜ್ಯಕ್ಕೆ ಕಳೆದ ವಾರ ವರಣದೇವ ಕೊಂಚ ಕರುಣೆ ತೋರಿಸಿದ್ದ, ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿತ್ತು. ಆದರೆ, ಮಳೆ ಇನ್ನೂ ಬೇಕು ಬೇಕು ಎನ್ನುತ್ತಿದ್ದ ವೇಳೆಯೆ ಮತ್ತೆ ಕೈಕೊಟ್ಟಿತು. ಸದ್ಯ ಹವಾಮಾನ ಇಲಾಖೆ ರಾಜ್ಯದ ಎಂಟು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮತ್ತೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಎರಡು ದಿನ ಮಳೆ ಹನಿಗಳು ಕಾಣಿಸಿಕೊಂಡಿದ್ದವು, ಇದಾದ ಬೆನ್ನಲ್ಲೆ ಮತ್ತೆ ಜನರನ್ನು ಮನೆಯೊಳಗೆ ಬಂಧಿಸಿದೆ ಬಿಸಿಲು. ಸದ್ಯ ಹವಾಮಾನ ಇಲಾಖೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಎಂಟು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಈಗಾಗಲೇ ಭಾರತೀಯ ಹವಾಮಾನ ಇಲಾಖೆ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ತೀವ್ರವಾಗಲಿದೆ ಎಂದು ಮಾಹಿತಿ ನಿಡಿದೆ. ಅದರಲ್ಲೂ ಪೂರ್ವ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಗಳು ಹೆಚ್ಚಲಿವೆ ಎಂದಿದೆ. ಅದರ ಜೊತೆಗೆ ಏಪ್ರಿಲ್ 24ರಂದು ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಕೊಡಗು, ಹಾಸನ ಸೇರಿ 8 ಜಿಲ್ಲೆಗಳಲ್ಲಿ ಕೆಲವೆಡೆ ಮಳೆ ಬೀಳಬಹುದು.
ಈ ಎಂಟು ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಭಾಗಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಅದೇ ರೀತಿ ಬೆಂಗಳೂರು ಮತ್ತು ಸುತ್ತಮುತ್ತ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಬಿಸಿಲಿನ ಉಷ್ಣಾಂಶ ಇನ್ನು ಇಂದು ವಾರ ಹೆಚ್ಚಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ಹೇಳಿದೆ.
ಕರಾವಳಿಯಲ್ಲಿ ಮುಂದುವರೆಯಲಿದೆ ಒಣಹವೆ
ಇನ್ನು, ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ವರದಿಯಂತೆ ಏಪ್ರಿಲ್ 25ರ ವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಏಪ್ರಿಲ್ 27 ರ ತನಕ ಈ ಪ್ರದೇಶಗಳಲ್ಲಿ ಉಷ್ಣಾಂಶ 2 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಐಎಂಡಿ ಬೆಂಗಳೂರಿನ ಇತ್ತೀಚಿನ ಮುನ್ಸೂಚನೆಯು ಮುಂದಿನ ವಾರ ನಗರದಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ ಎಂದಿದೆ. ಜೊತೆಗೆ ತಾಪಮಾನದಲ್ಲಿ ಸುಮಾರು ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ. ಈ ತಿಂಗಳ ಏಪ್ರಿಲ್ 6 ರಂದು ರಾಜಧಾನಿಯಲ್ಲಿ ಗರಿಷ್ಠ 37.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಎಂಟು ವರ್ಷಗಳಲ್ಲಿ ಅತಿ ಹೆಚ್ಚು ಎಂದು ವರದಿಯಾಗಿದೆ.












Click it and Unblock the Notifications