ಶಕ್ತಿಸೌಧ, ಸರ್ಕಾರಿ ನೌಕರರಿಗೆ ತಟ್ಟಿದ ಬರದ ಬಿಸಿ: ಕಚೇರಿಗಳಲ್ಲಿ ನೀರು, ವಿದ್ಯುತ್ ಮಿತಬಳಕೆಗೆ ಸಿಎಸ್ ಆದೇಶ
ಬೆಂಗಳೂರು: ಜುಲೈ ತಿಂಗಳಲ್ಲಿ ಅಲ್ಪ ಮಳೆ ಸುರಿದ ಬೆನ್ನಲ್ಲೆ ರಾಜ್ಯಾದ್ಯಂತ ಮತ್ತೆ ಬಿಸಿಲು ಮೇಲುಗೈ ಸಾಧಿಸಿದೆ. ಬರಗಾಲ ಬಿಸಿ ರೈತರಿಗೆ, ಸಾರ್ವಜನಿಕರಿಗೆ ಮಾತ್ರವಲ್ಲ ಜನಪ್ರತಿನಿಧಿಗಳಿಗೂ ತಟ್ಟಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಹಾಗೂ ನೀರು ಪೋಲಾಗುವುದನ್ನು ತಡೆಯಲು, ಮಿತ ಬಳಕೆಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಬಿಗಿ ಕ್ರಮಗಳನ್ನು ಅನುಸರಿಸುವಂತೆ ಆದೇಶ ಹೊರಡಿಸಿದ್ದಾರೆ.
ಎಲ್ನಿನೋ ಪ್ರಭಾವದಿಂದಾಗಿ ಭಾರತದಲ್ಲಿ 2026ರ ಮುಂಗಾರು ಋತುವಿನಲ್ಲಿ ಮಳೆ ಕೊರತೆ ಮುನ್ಸೂಚನೆ ನೀಡಿದೆ. ಅದರಂತೆ ಮಳೆ ಕಡಿಮೆ ಆಗಿದ್ದು, ಕರ್ನಾಟಕದಲ್ಲಿ ನೀರಿನ ಬವಣೆ ಶುರುವಾಗುವ ಭೀತಿ ಉಂಟಾಗಿದೆ. ಜುಲೈ ಮೊದಲ ವಾರ ಸುರಿದ ಮಳೆಯಿಂದ ಜಲಾಶಯಗಳು ಭರ್ತಿ ಆಗುವಂತೆ ನೀರು ಸಂಗ್ರಹವಾಗಿಲ್ಲ. ವಿದ್ಯುತ್ ಉತ್ಪಾದನೆಯಲ್ಲಿ ಮಳೆ, ನೀರಿನ ಪಾತ್ರ ದೊಡ್ಡಿದಿದೆ. ಬರದ ನಡುವೆ ಸರ್ಕಾರಿ ಕಚೇರಿಗಳಲ್ಲೇ ವಿದ್ಯುತ್, ಕುಡಿಯುವ ನೀರಿನ ಹೇರಳ ಬಳಕೆ/ಪೋಲಾಗುವುದನ್ನು ತಡೆಯಲು ಸರ್ಕಾರದಿಂದ ಈ ಆದೇಶ ಹೊರಡಿಸಲಾಗಿದೆ.

ಶಕ್ತಿಸೌದಗಳಾದ ವಿಕಾಸಸೌಧ ಮತ್ತು ವಿಧಾನಸೌಧದ ಸರ್ಕಾರಿ ಕಚೇರಿಗಳಲ್ಲೇ ವಿದ್ಯುತ್, ನೀರು ಪೋಲಾಗುತ್ತಿದೆ. ಕಚೇರಿ ಕೆಲಸ ಮುಗಿದ ಬಳಿಕವು ಕರೆಂಟ್, ಫ್ಯಾನ್ ಆನ್ ಆಗಿಯೇ ಇರುತ್ತವೆ. ಇದೆಲ್ಲ ಪೋಲು ತಡೆಯಲು ನೀರು, ವಿದ್ಯುತ್ ಬಳಕೆಗೆ ಆದೇಶಿಸಿದ್ದಾರೆ. ಈ ಮೂಲಕ ವಿಕಾಸಸೌಧ ಮತ್ತು ವಿಧಾನಸೌಧಕ್ಕೂ ಬರಗಾಲ ಬಿಸಿ ತಟ್ಟಿದೆ.
ಆದೇಶದಲ್ಲಿ ಏನಿದೆ?
* ಸರ್ಕಾರಿ ಕಚೇರಿಗಳು, ಸಚಿವಾಲಯಗಳು ಸಾಧ್ಯವಾದಷ್ಟು ವಿದ್ಯುತ್ ಮೇಲೆ ಅವಲಂಬನೆ ಆಗದೇ ಸೂರ್ಯನ ಬೆಳಕನ್ನು ಬಳಸಬೇಕು. ಅದಕ್ಕಾಗಿ ಕಿಟಕಿ ತೆರೆದಿಡಬೇಕು. ಅಗತ್ಯವಿದ್ದಲ್ಲಿ ಮಾತ್ರವೇ ಫ್ಯಾನ್ ಆನ್ ಮಾಡಬೇಕು.
* ಶಕ್ತಿಸೌಧಗಳಲ್ಲಿ ಕಾವಲುಗಾರ ಸಂಜೆ 6 ಗಂಟೆ ಬಳಿಕ ವಿದ್ಯುತ್ ದೀಪಗಳನ್ನು ಆರಿಲಾಯಿತೇ ಎಂದು ಖಚಿತಪಡಿಸಿಕೊಳ್ಳಬೇಕು. ಈ ಸಂಬಂಧ ಸೂಕ್ತ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ.
* ಕಚೇರಿ, ಸಚಿವಾಲಯಗಳಲ್ಲಿ ಯಾರು ಇಲ್ಲದಿದ್ದಾಗ ವಿದ್ಯುತ್ ಪ್ರವಹಿಸುವ ಎಲ್ಲ ಸ್ವಿಚ್ಗಳನ್ನು ಕಡ್ಡಾಯವಾಗಿ ಆಫ್ ಮಾಡಿರಬೇಕು. ಕಚೇರಿ ಬೀಗ ಹಾಕುವ ಮೊದಲೇ ಇದೆಲ್ಲವನ್ನು ತಪ್ಪದೇ ಪರಿಶೀಲಿಸಿಕೊಳ್ಳಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
* ಇನ್ನೂ ಕಚೇರಿಗಳು/ಸಚಿವಾಲಯ ಎಸಿಗಳನ್ನು ಶೇ. 24-26 ಡಿಗ್ರಿ ಸೆಲ್ಸಿಯಸ್ ವರೆಗೆ ಬಳಸಬೇಕು.
* ಸಾಮಾನ್ಯ ವಿದ್ಯುತ್ ದೀಪಗಳ ಬದಲಾಗಿ ಎಲ್ಇಡಿ ದೀಪಗಳನ್ನು ಬಳಸಬೇಕು.
* ಇನ್ನು ಶೌಚಾಲಯಗಳಲ್ಲಿ, ಕಚೇರಿ ನಲ್ಲಿಗಳಲ್ಲಿ ನೀರಿನ ಹರಿವು ಕಡಿಮೆ ಮಾಡಬೇಕು. ನಲ್ಲಿಗಳನ್ನು ಆಫ್ ಮಾಡಿರಬೇಕು. ನೀರು ಪೋಲಾಗುವುದನ್ನು ತಪ್ಪಿಸುವ ಜೊತೆಗೆ ಕುಡಿಯುವ ನೀರನ್ನು ಮಿತವಾಗಿ ಬಳಸುವಂತೆ ತಿಲಿಸಲಾಗಿದೆ.
ಕೇಂದ್ರಕ್ಕೆ ಜಿ.ಪರಮೇಶ್ವರ್ ಪತ್ರ
ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು, ಬರಗಾಲದ ಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರವು ರಾಜ್ಯದ ಜನರ ನೆರವಿಗೆ ಧಾವಿಸಬೇಕೆಂದು ಕೋರಿ ಕೇಂದ್ರ ಕೃಷಿ ಸಚಿವರಾದಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕರ್ನಾಟಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪತ್ರ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಮುಂಗಾರು ಋತು ಆರಂಭವಾಗಿ 45 ದಿನ ಕಳೆದಿವೆ. ಈ ವರೆಗೆ ರಾಜ್ಯದಲ್ಲಿ ಅತೀ ಕಡಿಮೆ ಮಳೆ ದಾಖಲಾಗಿದೆ. ಈ ಪರಿಸ್ಥಿತಿಯಲ್ಲಿ ಕರ್ನಾಟಕದ ಪರಿಷ್ಕೃತ FRUITS ದತ್ತಾಂಶವನ್ನು ಅಂಗೀಕರಿಸಬೇಕು ಹಾಗೂ SDRF/NDRF ಮತ್ತು ಬರ ಕೈಪಿಡಿ-2020ರ ಬೆಳೆ ನಷ್ಟ ಪರಿಹಾರ ಮಾನದಂಡಗಳಲ್ಲಿರುವ ವ್ಯತ್ಯಾಸಗಳನ್ನು ನಿವಾರಿಸಿ, ರೈತರಿಗೆ ತ್ವರಿತ ಮತ್ತು ಸಮಾನ ಪರಿಹಾರ ದೊರೆಯುವಂತೆ ಕ್ರಮವಹಿಸುವಂತೆ ಅವರು ಕೋರಿದ್ದಾರೆ. ಬಿತ್ತನೆ ವೇಳೆ ಉಂಟಾಗುವ ಶೇ.20ರಿಂದ ಶೇ.59ರವರೆಗಿನ ಮಳೆ ಕೊರತೆಯನ್ನೂ ಬರ ಘೋಷಣೆಯ ಮಾನದಂಡವಾಗಿ ಪರಿಗಣಿಸಬೇಕು. ಬರಪೀಡಿತ ಎಂದು ಘೋಷಿಸಲು ರಾಜ್ಯಗಳಿಗೆ ಹೆಚ್ಚಿನ ಅವಕಾಶ ನೀಡುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.













Click it and Unblock the Notifications