Beyond Bengaluru: ರಾಜ್ಯದ ನಗರ ಸಂಚಾರಕ್ಕೆ ಹೊಸ ರೂಪುರೇಷೆ; ಮೈಸೂರಿಗೆ ಮಾಸ್ ಟ್ರಾನ್ಸಿಟ್ ಪ್ರಸ್ತಾವನೆ
ಬೆಂಗಳೂರು: ಕರ್ನಾಟಕದ ಸಾರಿಗೆ ಸುಸ್ಥಿರತೆ ಗಮನದಲ್ಲಿಟ್ಟುಕೊಂಡು ಸುಮಾರು 20 ವರ್ಷಗಳ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ಪ್ರಮುಖ ನಗರಗಳ ಸುಸ್ಥಿರ ಸಾರಿಗೆ ಅಭಿವೃದ್ಧಿಗಾಗಿ ಸಮಗ್ರ ಸಂಚಾರ ಯೋಜನೆಗಳನ್ನು (CMPs) ವಿವಿಧ ಹಂತಗಳಲ್ಲಿ ಸಿದ್ಧಪಡಿಸಲಾಗುತ್ತಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯದ (DULT) ಅಧಿಕಾರಿಗಳೊಂದಿಗೆ ಕರ್ನಾಟಕ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಹೊಸ ಯೋಜನೆ ರೂಪಿಸುತ್ತಿರುವ ಕುರಿತು ಸಚಿವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಸುಸ್ಥಿರ ನಗರ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು. ರಾಜ್ಯದಲ್ಲಿ ಅನುಷ್ಠಾನಗೊಳಿಸಲಿರುವ ಪ್ರಮುಖ ನಗರ ಸಾರಿಗೆ ಯೋಜನೆಗಳ ಪ್ರಗತಿ ಹಾಗೂ ಮುಂದಿನ ಕಾರ್ಯವಿಧಾನಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ನಗರಗಳ ಸಾರಿಗೆ ಮೂಲಸೌಕರ್ಯಕ್ಕೆ ಹೊಸ ಯೋಜನೆ ದಿಕ್ಸೂಚಿ
ಮುಂದಿನ ಎರಡು ದಶಕದಲ್ಲಿ ಏನೆಲ್ಲ ಸಾರಿಗೆ ಅಗತ್ಯಗಳು ಎದುರಾಗುತ್ತವೆ. ಅದೆಲ್ಲ ನೋಡಿಕೊಂಡು ಹೊಸ ಯೋಜನೆ ರೂಪಿಸಲಾಗಿದೆ. ಇದು ನಗರಗಳ ಸಾರಿಗೆ ಮೂಲಸೌಕರ್ಯ ಹೂಡಿಕೆ ಹಾಗೂ ದೀರ್ಘಾವಧಿಯ ಅಭಿವೃದ್ಧಿಗೆ ಪ್ರಮುಖ ದಿಕ್ಸೂಚಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ 'ಬೆಂಗಳೂರು ಆಚೆ'ಗೂ (Beyond Bengaluru) ನಗರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಇದಕ್ಕೆ ಅನುಗುಣವಾಗಿ, ಮೈಸೂರು ನಗರದ ಪ್ರಮುಖ ಮತ್ತು ಅತಿ ಹೆಚ್ಚು ಸಾರಿಗೆ ಬೇಡಿಕೆಯಿರುವ ಮಾರ್ಗಗಳಲ್ಲಿ ಸೂಕ್ತವಾದ ಸಮೂಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ಪ್ರಸ್ತಾವನೆಯ ಬಗ್ಗೆಯು ಗಂಭೀರ ಚರ್ಚೆಗಳಾಗಿದ್ದು, ಶೀಘ್ರವೇ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.
ಮೈಸೂರು ಯೋಜನೆ ಸಮಾಲೋಚನೆ ಬಳಿಕ ಅಂತಿಮ
ಹೊಸ ಯೋಜನೆಯಿಂದ ಮೈಸೂರು ನಗರದ ಕರಡು ಸಮಗ್ರ ಸಂಚಾರ ಯೋಜನೆಗೆ ಹೆಚ್ಚು ಅನುಕೂಲವಾಗಲಿದೆ. ಆದರೆ ಇದೆಲ್ಲವನ್ನು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವಷ್ಟೇ ಅಂತಿಮಗೊಳಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳ ನಿರ್ಮಾಣ, ಸೈಕ್ಲಿಂಗ್ ಹಾಗೂ ಪಾದಚಾರಿ ಸೌಲಭ್ಯಗಳ ಅಭಿವೃದ್ಧಿ, ನಗರ ಬಸ್ ಸೇವೆಗಳ ವಿಸ್ತರಣೆ ಮತ್ತು ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ (EV) ಮೂಲ ಸೌಕರ್ಯಗಳ ಅಭಿವೃದ್ಧಿಗೆ ಈಗಾಗಲೇ ಯಶಸ್ವಿಯಾಗಿ ಧನ ಸಹಾಯ ನೀಡಿದೆ.
ರಾಜ್ಯದ ಎಲ್ಲಾ ವಿಭಾಗಗಳಲ್ಲಿ ನಗರ ಸಾರಿಗೆ ನಿಧಿಯನ್ನು (SUTF) ಯಾವುದೇ ತಾರತಮ್ಯವಿಲ್ಲದೆ ಸಮರ್ಪಕವಾಗಿ ಮತ್ತು ಸಮಾನವಾಗಿ ಬಳಸಬೇಕು. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಹಾಗೂ ಸುರಕ್ಷಿತ ಮತ್ತು ಸುಸ್ಥಿರ ನಗರಾಭಿವೃದ್ಧಿಗೆ ಪೂರಕವಾದ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಜಾರಿಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.













Click it and Unblock the Notifications