ನಗರದ ಅಭಿವೃದ್ಧಿಗೆ ನಿಮ್ಮ ಸಲಹೆ: ನಾಗರಿಕರ ಸಮೀಕ್ಷೆ ಆರಂಭಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಬೆಂಗಳೂರು: ನಗರದ ಅಭಿವೃದ್ದಿ ಯೋಜನೆಗಳನ್ನು ಜನರ ಅಭಿಪ್ರಾಯಕ್ಕೆ ತಕ್ಕಂತೆ ರೂಪಿಸುವ ಉದ್ದೇಶಕ್ಕಾಗಿಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ನಾಗರಿಕ ಸಮೀಕ್ಷೆಗೆ ಚಾಲನೆಯನ್ನು ನೀಡಿದೆ. ಬೆಂಗಳೂರು ಮಹಾನಗರ ಪ್ರದೇಶದ ಅಭಿವೃದ್ದಿ ದೃಷ್ಟಿಕೋನ ಮತ್ತು ಸಮಗ್ರ ಯೋಜನೆ ರೂಪಿಸಲು ಆರಂಭಿಸಿರುವ ಈ ಸಮೀಕ್ಷೆ ಮುಂದಿನ ಐದು ವಾರಗಳಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ನಾಗರಿಕರ ಸಲಹೆಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.
ನಗರಾಭಿವೃದ್ಧಿಯ ಪ್ರಮುಖ ಕ್ಷೇತ್ರಗಳಾದ ವಸತಿ, ಸಾರಿಗೆ, ಕುಡಿಯುವ ನೀರು, ಉದ್ಯೋಗಾವಕಾಶಗಳು, ಆರೋಗ್ಯ ಸೇವೆ, ಶಿಕ್ಷಣ, ಸಾರ್ವಜನಿಕ ಸುರಕ್ಷತೆ, ಪರಿಸರ ಸುಸ್ಥಿರತೆ, ಉದ್ಯಾನವನಗಳು ಹಾಗೂ ಇತರ ಅಗತ್ಯ ನಾಗರಿಕ ಮೂಲಸೌಕರ್ಯಗಳ ಕುರಿತು ಸಮೀಕ್ಷೆ ಮೂಲಕ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಪ್ರದೇಶದ ಆದ್ಯತೆಗಳನ್ನು ಗುರುತಿಸಿ, ಜನರ ಆಶೋತ್ತರಗಳಿಗೆ ಅನುಗುಣವಾದ ನೀತಿ ನಿಯಮಗಳನ್ನು ರೂಪಿಸಲು ನಾಗರಿಕರಿಂದ ದೊರೆಯುವ ಅಭಿಪ್ರಾಯಗಳು ಬೆಂಗಳೂರು ಅಭಿವೃದ್ದಿಗೆ ನೆರವಾಗಲಿವೆ.

ಮುಂದಿನ ಐದು ವಾರಗಳಲ್ಲಿ ಬೆಂಗಳೂರು ಮಹಾನಗರ ಪ್ರದೇಶದಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ನಾಗರಿಕರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸುವ ಗುರಿಯನ್ನು ಈ ಸಮೀಕ್ಷೆ ಹೊಂದಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು, ಕೈಗಾರಿಕಾ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಗಿಗ್ ಉದ್ಯೋಗಿಗಳು ಸೇರಿದಂತೆ ಇನ್ನು ಅನೇಕ ವಿವಿಧ ವರ್ಗಗಳ ಜನರ ಭಾಗವಹಿಸುವಿಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಖಚಿತಪಡಿಸಿಕೊಳ್ಳಲಾಗುತ್ತಿದೆ.
ಬೆಂಗಳೂರಿನ ನಾಗರಿಕರು ಎದುರಿಸುತ್ತಿರುವ ತಕ್ಷಣದ ಸಮಸ್ಯೆಗಳು ಹಾಗೂ ಬೆಂಗಳೂರಿನ ಭವಿಷ್ಯದ ಬೆಳವಣಿಗೆಯ ಕುರಿತು ಅವರ ದೂರದೃಷ್ಟಿಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಸಮೀಕ್ಷೆಯನ್ನು ವಿನ್ಯಾಸಗೊಳಿಸಲಾಗಿದೆ. ಸಾರ್ವಜನಿಕ ಸೇವೆಗಳ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ವ್ಯವಹಾರ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣ ಹಾಗೂ ಒಟ್ಟಾರೆ ಜೀವನಮಟ್ಟವನ್ನು ಉತ್ತಮಗೊಳಿಸುವ ಕುರಿತು ನಾಗರಿಕರ ಸಲಹೆಗಳನ್ನೂ ಈ ಸಮೀಕ್ಷೆ ಮೂಲಕ ಪಡೆಯಲಾಗುತ್ತದೆ.
ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಲಭ್ಯವಿರುವ ಪ್ರಶ್ನಾವಳಿಯನ್ನು ಪೂರ್ಣಗೊಳಿಸಲು ಸುಮಾರು 8-10 ನಿಮಿಷಗಳು ಬೇಕಾಗುತ್ತವೆ. ಪಠ್ಯ ಅಥವಾ ಧ್ವನಿ ಸಂದೇಶಗಳ ಮೂಲಕ ಉತ್ತರಗಳನ್ನು ಸಲ್ಲಿಸಬಹುದು. ಎಲ್ಲಾ ಪ್ರತಿಕ್ರಿಯೆಗಳು ಸಂಪೂರ್ಣ ಗೌಪ್ಯವಾಗಿರಲಿದೆ.
ವಾಟ್ಸ್ಆ್ಯಪ್ ಚಾಟ್ಬಾಟ್ ಸಮೀಕ್ಷೆ ಲಿಂಕ್: WhatsApp Chatbot: https://wa.link/29vk7s
"ಬೆಂಗಳೂರು ಮಹಾನಗರ ಪ್ರದೇಶದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ನಾಗರಿಕ ಕೇಂದ್ರಿತವಾಗಿಸುವ ನಿಟ್ಟಿನಲ್ಲಿ ಈ ಸಮೀಕ್ಷೆ ಮಹತ್ವದ ಹೆಜ್ಜೆಯಾಗಿದೆ. ನಗರದ ಪ್ರತಿಯೊಬ್ಬರು ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ನಗರದ ಭವಿಷ್ಯಕ್ಕಾಗಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡುವಂತೆ ಮನವಿ ಮಾಡುತ್ತೇನೆ. ನಾಗರಿಕರ ಆಶಯಗಳನ್ನು ಅರ್ಥಮಾಡಿಕೊಂಡು ಎಲ್ಲರನ್ನು ಒಳಗೊಂಡ, ಸುಸ್ಥಿರ ಅಭಿವೃದ್ಧಿಯ ಮಾರ್ಗಸೂಚಿಯನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ತಿಳಿಸಿದ್ದಾರೆ.














Click it and Unblock the Notifications