Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ; ಬರದ ಕಾರ್ಮೋಡ: ಸರ್ಕಾರಕ್ಕೆ ಈ 3 ವಿಷಯಗಳದ್ದೇ ಚಿಂತೆ!
Karnataka Rain: ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಶೇ.42ರಷ್ಟು ಮತ್ತು ಜುಲೈನಲ್ಲಿ ಶೇ.34ರಷ್ಟು ಮಳೆ ಕೊರತೆಯಾಗಿದ್ದು, ಇದರಿಂದ ವ್ಯಾಪಕ ಬೆಳೆ ನಷ್ಟ, ಅಂತರ್ಜಲ ಮಟ್ಟ ಕುಸಿತ, ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿರುವುದು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ ಎಂದು ಕರ್ನಾಟಕ ಸರ್ಕಾರವೇ ಹೇಳಿದೆ. ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬಿಡದಿ ಟೌನ್ಶಿಪ್ ನಿರ್ಮಾಣ, ಮೈಸೂರು ದಸರಾದಲ್ಲಿ ಕಂಬಳ ಹಾಗೂ ಸಚಿವ ಸಂಪುಟ ವಿಸ್ತರಣೆಯಂತಹ ವಿಷಯಗಳಲ್ಲಿ ನಿರತವಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ತಪ್ಪುಗಳನ್ನು ಜನರ ಮುಂದಿರಿಸಿ ಹೋರಾಟ ಮಾಡಬೇಕಾದ ವಿರೋಧ ಪಕ್ಷವು ಇದೀಗ ರೈತರ ವಿಷಯದಲ್ಲಿ ಮೌನಕ್ಕೆ ಜಾರಿದೆ.
ಆಷಾಢ ಮಾಸವಾದರೂ ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ಮತ್ತೊಂದು ಕಡೆ ರಾಜ್ಯದಲ್ಲಿ ಕೋವಿಡ್ ಸೋಂಕಿನ ಆತಂಕ ಹೆಚ್ಚಾಗಿದೆ. ನಾಲ್ಕು ವರ್ಷಗಳ ಹಿಂದೆ ವಿಶ್ವದಾದ್ಯಂತ ಭಾರೀ ಆತಂಕಕ್ಕೆ ಕಾರಣವಾಗಿದ್ದ ಕೋವಿಡ್ ಸೋಂಕು ಇದೀಗ ಬೆಂಗಳೂರಿನಲ್ಲೂ ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಿ 32 ಸಕ್ರಿಯ ಕೋವಿಡ್ ಪ್ರಕರಣಗಳು ವರದಿಯಾಗಿವೆ. "ಆಷಾಢ ಮಾಸವಾದರೂ ಆಗಸದಲ್ಲಿ ಕಾರ್ಮೋಡಗಳಿಲ್ಲ, ಜಡಿ ಮಳೆಗೆ ಹದವಾಗಬೇಕಿದ್ದ ಮಲೆನಾಡೇ ಬಿಸಿಲಿನ ಬವಣೆಗೆ ಕಾದ ಕಾವಲಿಯಂತಾಗಿದೆ. ಬರಗಾಲದ ಮುನ್ಸೂಚನೆ ನಿಚ್ಛಳವಾಗಿ ಕಾಣುತ್ತಿದೆ. ಆದರೆ, ಇದನ್ನ ಯೋಚಿಸಬೇಕಾದ ಸರ್ಕಾರ ಮೈಸೂರಿನಲ್ಲಿ ಕಂಬಳದ ಕೆಸರುಗದ್ದೆ ಮಾಡುವ ವಿಷಯದಲ್ಲಿ ಕೆಸರಾಟದಲ್ಲಿ ಮುಳುಗಿದೆ. ವಿನಾಶ ಕಾಲೇ ವಿಪರೀತ ಬುದ್ಧಿ" ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Karnataka Rain: ಕಂಬಳದಲ್ಲಿ ಮುಳುಗಿದ ಸರ್ಕಾರ
ಕರ್ನಾಟಕದಲ್ಲಿ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಮಳೆ ಕೊರತೆಯಿಂದ ಹಲವು ಸಂಕಷ್ಟ ಎದುರಾಗಿದೆ. ಆದರೆ ಕರ್ನಾಟಕ ಸರ್ಕಾರವು ಮೈಸೂರಿನ ದಸರಾದಲ್ಲಿ ಕಂಬಳ ನಡೆಸುವುದಕ್ಕೆ ಮುಂದಾಗಿದೆ. ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸೂಚನೆಯ ಮೇರೆಗೆ ಸುಮಾರು 7 ರಿಂದ 8 ಕೋಟಿ ರೂ. ವೆಚ್ಚದಲ್ಲಿ 2 ದಿನಗಳ ಕಾಲ ಈ ಕಂಬಳ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಮೈಸೂರಿನ ವಿಜಯನಗರ - ಸಾತಗಳ್ಳಿ ರಿಂಗ್ ರಸ್ತೆಯ ಹತ್ತಿರ ಕಂಬಳ ನಡೆಸುವುದಕ್ಕೆ ಸ್ಥಳ ಗುರುತಿಸಲಾಗಿದೆ. ಈ ಸಾಂಸ್ಕೃತಿಕ ಆಚರಣೆಯಲ್ಲಿ ಕರಾವಳಿ ಭಾಗದಿಂದ ಸುಮಾರು 120 ಜೋಡಿ ಕೋಣಗಳನ್ನು ಕರೆದುಕೊಂಡು ಬರಲು ನಿರ್ಧರಿಸಲಾಗಿದೆ.
ಬಿಡದಿ ಟೌನ್ಶಿಪ್ ನಿರ್ಮಾಣ ಚರ್ಚೆ
ಕರ್ನಾಟಕದಲ್ಲಿ ಕಳೆದ ಮೂರು ವಾರಗಳಿಗೂ ಹೆಚ್ಚು ಅವಧಿಯಿಂದ ಬಿಡದಿ ಟೌನ್ಶಿಪ್ ನಿರ್ಮಾಣದ ವಿಚಾರವಾಗಿ ಭಾರೀ ಚರ್ಚೆ ನಡೆಯುತ್ತಿದೆ. ಇದರೊಂದಿಗೆ ಸಚಿವ ಸಂಪುಟ ವಿಸ್ತರಣೆ ವಿಚಾರವೂ ಭಾರೀ ಚರ್ಚೆಯಲ್ಲಿದೆ. ಈ ಎಲ್ಲ ಕಾರಣಗಳಿಂದ ಕರ್ನಾಟಕದ ಅಭಿವೃದ್ಧಿ ವಿಚಾರಕ್ಕೆ ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಬರ ನಿರ್ವಹಣೆ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಯಾವುದೇ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ & ಡಿಸಿಎಂ ಪತ್ರ ಬರೆಯುವುದು ಬಿಟ್ಟು ಕರ್ನಾಟಕ ಕಾಂಗ್ರೆಸ್ ಸರ್ಕಾರವು ಯಾವುದೇ ಗಂಭೀರ ಕ್ರಮ ತೆಗೆದುಕೊಳ್ಳದೆ ಇರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕರ್ನಾಟಕದ ಬರದ ವಿಚಾರದಲ್ಲಿ ಹಾಗೂ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಖಂಡಿಸುವ ಬದಲು ಕೇವಲ ಟ್ವೀಟ್ಗಳಿಗೆ ಸೀಮಿತವಾಗಿವೆ.












Click it and Unblock the Notifications