ಉಪ ಚುನಾವಣೆ: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಮಹತ್ವದ ಸೂಚನೆಗಳು!
ಬೆಂಗಳೂರು, ಅ. 07: ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಈಗಾಗಲೇ ಅಧಿಸೂಚನೆ ಹೊರಡಿಸಿರುವ ಕೇಂದ್ರ ಚುನಾವಣಾ ಆಯೋಗ ಕೊರೊನಾ ವೈರಸ್ ಆತಂಕತ ಹಿನ್ನೆಲೆಯಲ್ಲಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ಹೀಗಾಗಿ ಪ್ರಚಾರ, ಮತದಾನ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಅನುಸರಿಸಬೇಕಾದ ನಿಯಮಗಳನ್ನು ಪ್ರಕಟಿಸಿದೆ.
ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಚಾರದ ವೇಳೆಯನ್ನು ಕಡಿತಗೊಳಿಸಿ ಆಯೋಗ ಆದೇಶ ಮಾಡಿದೆ. ರಾಜಕೀಯ ಪಕ್ಷಗಳ ನಾಯಕರು ಇದನ್ನು ಖಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಿದೆ. ಇದೇ ವಿಚಾರವಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯ ಬಗ್ಗೆ ವಿವರಿಸಿದ್ದಾರೆ.
ಪ್ರಚಾರದ ಸಮಯ ಕಡಿಗೊಳಿಸಿದ ಚುನಾವಣಾ ಆಯೋಗ!
ವಿಜಯಪುರ ಜಿಲ್ಲೆಯ ಸಿಂಧಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಈ ಎರಡೂ ಕ್ಷೇತ್ರಗಳಲ್ಲಿ ಪ್ರಚಾರದ ಸಮಯವನ್ನು ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಕಡಿಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಮಾಡಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಚುನಾವಣಾ ಪ್ರಚಾರ ಮಾಡಲು ಅನುಮತಿ ಕೊಡಲಾಗಿದೆ. ಸಂಜೆ 7 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಪ್ರಚಾರ ನಿರ್ಬಂಧಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಜೊತೆಗೆ ಮದ್ಯ ಮಾರಾಟವನ್ನೂ ನಿಷೇಧಿಸಿದ ಆದೇಶ ಮಾಡಲಾಗಿದೆ.
ಮತದಾನ ಹಾಗೂ ಮತ ಎಣಿಕೆ ದಿನದಂದು ಮದ್ಯ ಮಾರಾಟ ನಿಷೇಧ!
ಉಪ ಚುನಾವಣೆಗೆ ಮತದಾನ ನಡೆಯಲಿರುವ ಅಕ್ಟೋಬರ್ 30 ಹಾಗೂ ಮತ ಎಣಿಕೆ ನಡೆಯುವ ನವೆಂಬರ್ 2ರಂದು ಮದ್ಯ ಮಾರಾಟ ನಿಷೇಧಿಸಿ ಆದೇಶ ಮಾಡಿದೆ. ಮತದಾನ ನಡೆಯುವ ಹಾಗೂ ಮತ ಎಣಿಕೆ ನಡೆಯುವ ದಿನದಂದು ಒಟ್ಟು 48 ಗಂಟೆಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹಾಕಲಾಗಿದೆ. ಆ ಸಂದರ್ಭದಲ್ಲಿ ಬಾರ್, ಕ್ಲಬ್, ಹೋಟೆಲ್, ಸ್ಟಾರ್ ಹೊಟೆಲ್ ಅಥವಾ ವೈಯಕ್ತಿಕವಾಗಿ ಮದ್ಯ ಶೇಖರಣೆಯನ್ನೂ ನಿಷೇಧ ಮಾಡಲಾಗಿದೆ. ತಪ್ಪಿದಲ್ಲಿ ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಟನ್ 135ಸಿ ಪ್ರಕಾರ ಮದ್ಯ ಮಾರಾಟ, ಸರಬರಾಜು ನಿಷೇಧಿಸಿ ಆದೇಶ ಮಾಡಲಾಗಿದೆ.
ಕೋವಿಡ್ ಲಸಿಕೆ, RTPCR ಪ್ರಮಾಣ ಪತ್ರ ಕಡ್ಡಾಯ!
ಜೊತೆಗೆ ಮತ ಎಣಿಕೆಯ ದಿನ ಮತ ಎಣಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಅಧಿಕಾರಿ, ಸಿಬ್ಬಂಧಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೋವಿಡ್-19 ನಿರೋಧಕ ಎರಡು ಲಸಿಕೆಗಳನ್ನು ಪಡೆದಿರಬೇಕು ಅಥವಾ ಒಂದು ಲಸಿಕೆ ಪಡೆದವರು ಮತ ಎಣಿಕೆ ದಿನದ ಮುಂಚಿನ 72 ಗಂಟೆಯೊಳಗಿನ RTPCR ಪ್ರಮಾಣ ಪತ್ರ ಅಥವಾ ಲಸಿಕೆಯನ್ನು ಪಡೆಯದವರು 48 ಗಂಟೆಯೊಳಗಿನ RTPCR ಪ್ರಮಾಣಪತ್ರವನ್ನು ಸಂಬಂಧಿಸಿಧ ಮತ ಎಣಿಕೆ ಕೇಂದ್ರದ ಅಧಿಕಾರಿಗೆ ಸಲ್ಲಿಸಿ ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಬಹುದು ಎಂದು ಆಯೋಗದ ಸೂಚಿಸಿದೆ.
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ
ಗುರುವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಆಯೋಗದ ಆದೇಶಗಳ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು. ಪ್ರಸ್ತುತ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿಗಳ ಚುನಾವಣಾ ಒಟ್ಟು ಖರ್ಚನ್ನು 30,80,000 ರೂ.ಗಳಿಗೆ ಮಿತಿಗೊಳಿಸಿ ಆಯೋಗ ಆದೇಶ ಹೊರಡಿಸಿರುವುದನ್ನು ಮುಖ್ಯ ಚುನಾವಣಾಧಿಕಾರಿ ಮೀನಾ ಸಭೆಯಲ್ಲಿ ವಿವರಿಸಿದರು. ಇದೇ ವೇಳೆ ಚುನಾವಣಾ ಸಮಯದಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
Recommended Video