Siddaramaiah: ಪ್ರಧಾನಿ ಕೊಟ್ಟ ಸುಳ್ಳು ಭರವಸೆಗಳಿಗೆ 10 ವರ್ಷ ಮೋಸ ಹೋಗಿದ್ದೀರಿ
ಹುಬ್ಬಳ್ಳಿ, ಏಪ್ರಿಲ್ 26: ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷ ಕಾಲ ಸುಳ್ಳು ಹೇಳಿಕೊಂಡು ತಿರುಗಿದ್ದಾರೆ. ಇದರಿಂದ ನಿಮ್ಮ ಮತಕ್ಕೆ ಘನತೆ ಬಂದಿದೆಯಾ?. ಮೋದಿ ಸುಳ್ಳುಗಳಿಗೆ ಹತ್ತು ವರ್ಷ ತಲೆಕೊಟ್ಟು ಮೋಸ ಹೋಗಿದ್ದೀರಿ. ಈ ಬಾರಿಯೂ ಮೋಸ ಹೋಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಗುರುವಾರ ಹುಬ್ಬಳ್ಳಿಯಲ್ಲಿ ನಡೆದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ರೈತರ ಆದಾಯ ಹೆಚ್ಚಳ ಮಾಡುವುದಾಗಿ ತಿಳಿಸಿದ್ದರು. ಆದರೆ ಕೃಷಿ ಖರ್ಚು ಮೂರು ಪಟ್ಟಾಗಿದೆ. ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಎಲ್ಲದರ ಬೆಲೆ ಹೆಚ್ಚಾಗಿದೆ."ಅಚ್ಚೇ ದಿನ್ ಆಯೆಗಾ" ಅಂತ ಡೈಲಾಗ್ ಹೊಡೆಯುತ್ತಾ ಕಾಲ ಕಳೆದರು ಎಂದು ಅವರು ಟೀಕಿಸಿದರು.

ಭಾರತೀಯ ರೂಪಾಯಿಯ ಮೌಲ್ಯವನ್ನು ಡಾಲರ್ ಎದುರು ವೃದ್ಧಿಸುವುದಾಗಿ ಭಾಷಣ ಬಿಗಿದಿದ್ದರು. ಆದರೆ ಈಗ ರೂಪಾಯಿ ಮೌಲ್ಯ ಕುಸಿಯುವಂತೆ ಮಾಡಿದ್ದಾರೆ.
ಹಣದುಬ್ಬರಕ್ಕೆ ಬಡವರು ತತ್ತರ
ಪ್ರಧಾನಿಯವರ ಕೆಟ್ಟ ಆರ್ಥಿಕ ನೀತಿಯಿಂದ ಸೃಷ್ಟಿಯಾದ ಹಣದುಬ್ಬರ, ಬೆಲೆ ಏರಿಕೆಯಿಂದ ರಾಜ್ಯದ ಬಡವರು ತತ್ತರಿಸಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದವರ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದಲೇ ನಾವು ಐದು ಗ್ಯಾರಂಟಿಗಳನ್ನು ಘೋಷಿಸಿದೆವು ಎಂದು ಕಾಂಗ್ರೆಸ್ ಆಡಳಿತವನ್ನು ಸಮರ್ಥಿಸಿಕೊಂಡರು.
ಸರ್ಕಾರ ಬಂದ ದಿನದಿಂದಲೇ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾದೆವು. ಕೇವಲ 8 ತಿಂಗಳಲ್ಲಿ ಎಲ್ಲಾ ಐದು ಗ್ಯಾರಂಟಿಗಳನ್ನೂ ಜಾರಿ ಮಾಡಿ ಪ್ರತೀ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ನೀವು ನಮಗೆ ಕೊಟ್ಟ ಮತಕ್ಕೆ ಗೌರವ ತಂದಿದ್ದೇವೆ ಎಂದರು.

ಜನರಿಗೆ ಗ್ಯಾರೆಂಟಿ ಆಸರೆ
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯೇ ಆಗಲ್ಲ ಎಂದು ಪ್ರಧಾನಿ ಮೋದಿ ಸುಳ್ಳು ಹೇಳಿದ್ದರು. ನಾವು ಐದಕ್ಕೂ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಈಗ ಬಿಜೆಪಿ ಹೊಸ ಸುಳ್ಳು ಹೊಸೆದಿದ್ದಾರೆ. ಪಾರ್ಲಿಮೆಂಟ್ ಚುನಾವಣೆ ಬಳಿಕ ಗ್ಯಾರಂಟಿಗಳು ಬಂದ್ ಆಗ್ತವೆ ಎನ್ನುತ್ತಿದ್ದಾರೆ. ಐದೂ ವರ್ಷ ಗ್ಯಾರಂಟಿಗಳು ಜಾರಿಯಲ್ಲಿರುತ್ತವೆ ಎಂದು ತಿಳಿಸಿದರು.
ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ರಾಜ್ಯದಲ್ಲಿ ಮೀಸಲಾತಿ ನೀತಿ ಜಾರಿಯಲ್ಲಿದೆ. ಆದರೆ ಈ ವಿಚಾರದಲ್ಲೂ ಮೋದಿ ಮತ್ತು ಬಿಜೆಪಿ ಸುಳ್ಳು ಹೇಳುತ್ತಿದೆ. ಸ್ವತಃ ಬಸವರಾಜ ಬೊಮ್ಮಾಯಿ ಅವರ BJP ಸರ್ಕಾರವೇ ಸುಪ್ರೀಂಕೋರ್ಟ್ ಎದುರು ಮುಸ್ಲೀಮರ ಮೀಸಲಾತಿಯನ್ನು ರಾಜ್ಯದಲ್ಲಿ ಯಥಾವತ್ತಾಗಿ ಮುಂದುವರೆಸುತ್ತೇವೆ ಎಂದು ತಿಳಿಸಿದ್ದರು ಎಂದು ಮಾಹಿತಿ ನೀಡಿದರು.












Click it and Unblock the Notifications