ಜ್ಞಾನವಾಪಿ ಮಸೀದಿ ವಿಚಾರ; ಒವೈಸಿ ಆತಂಕವೇನು?

ಹೈದರಾಬಾದ್, ಮೇ 22: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋ ರೆಕಾರ್ಡ್ ಮಾಡಲು ನ್ಯಾಯಾಲಯ ಆದೇಶ ಮಾಡಿದ ವಿಚಾರದ ಬಗ್ಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ. "ಬಾಬ್ರಿ ಮಸೀದಿ ವಿಚಾರದಲ್ಲಿ ಆದಂಥದ್ದೇ ಘಟನಾವಳಿಗಳು ಭವಿಷ್ಯದಲ್ಲಿ ನಡೆಯಲಿವೆ" ಎಂದು ಆತಂಕದ ಮಾತುಗಳನ್ನು ಅವರು ಪುನರುಚ್ಚರಿಸಿದ್ದಾರೆ.

"ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಕೋರ್ಟ್ ಮಾಡಿದ ಆದೇಶ 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಮುಸ್ಲಿಮರ ಪಕ್ಷದ ಅಭಿಪ್ರಾಯ ಕೇಳದೆಯೇ ಕೋರ್ಟ್ ಆದೇಶಿಸಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ದಿನಗಳಲ್ಲಿ ವಾರಣಾಸಿಯ ಜ್ಞಾನವಾಪಿ ಮಸೀದಿ ಅಲ್ಲದೆ, ಮಥುರಾ ಮತ್ತಿತರ ಸ್ಥಳಗಳ ಮಸೀದಿ ಕಟ್ಟಡಗಳ ಬಗ್ಗೆ ಚಕಾರ ಎತ್ತಲಾಗುತ್ತಿರುವ ಬೆಳವಣಿಗೆಯನ್ನು ಉಲ್ಲೇಖಿಸಿದ ಅಸಾದುದ್ದೀನ್ ಒವೈಸಿ, "1991ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸದೇ ಹೋದಲ್ಲಿ ಇನ್ನೂ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ" ಎಂದು ವಾದಿಸಿದ್ಧಾರೆ.

ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಸರ್ವೆ ನಡೆಸಲು ಅಲ್ಲಿನ ಕೋರ್ಟ್ ಆದೇಶ ಕೊಟ್ಟಾಗಲೇ ಅಸಾದುದ್ದೀನ್ ಒವೈಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತೊಂದು ಬಾಬ್ರಿ ಮಸೀದಿ ಆಗಲು ಬಿಡುವುದಿಲ್ಲ ಎಂದು ಪಣತೊಟ್ಟಿದ್ದರು.

ಆರಾಧನಾ ಸ್ಥಳಗಳ ಕಾಯ್ದೆ ಏನು?

ಆರಾಧನಾ ಸ್ಥಳಗಳ ಕಾಯ್ದೆ ಏನು?

1991ರಲ್ಲಿ ರಚಿಸಲಾದ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯಲ್ಲಿ (Protection to Places of Worship Act) ವಿವಿಧ ಧಾರ್ಮಿಕ ಸ್ಥಳಗಳ ಯಥಾಸ್ಥಿತಿ ಪಾಲನೆಗೆ ಅವಕಾಶ ನೀಡಲಾಗಿದೆ. ಸ್ವತಂತ್ರ ಬಂದಾಗಿನಿಂದ ಅಂದರೆ 1947 ಆಗಸ್ಟ್ 15ರಿಂದಲೂ ಅಸ್ತಿತ್ವದಲ್ಲಿರುವ ಒಂದು ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಹಾಗೆಯೇ ಉಳಿದುಕೊಳ್ಳಲಾಗುವಂತೆ ನೋಡಿಕೊಳ್ಳಬೇಕು ಎಂದು ಈ ಕಾಯ್ದೆ ಹೇಳುತ್ತದೆ.

ಒವೈಸಿ ಅಸಮಾಧಾನ ಏನು?

ಒವೈಸಿ ಅಸಮಾಧಾನ ಏನು?

1991ರ ಈ ಕಾಯ್ದೆಯು ಭಾರತೀಯ ಸಂವಿಧಾನದ ಮೂಲ ಗುಣವನ್ನು ಹೊಂದಿದೆ ಎಂದು ಹಿಂದೊಮ್ಮೆ ಸುಪ್ರೀಂ ಕೋರ್ಟ್ ಕೂಡ ತನ್ನ ತೀರ್ಪೊಂದರಲ್ಲಿ ಹೇಳಿತ್ತು. ಆದರೆ, ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋ ಸರ್ವೇಕ್ಷಣೆ ಕಾರ್ಯಕ್ಕೆ ತಡೆ ನೀಡಬೇಕೆಂದು ಮನವಿ ಮಾಡಿದರೂ ಸುಪ್ರೀಂ ಕೋರ್ಟ್ ಕೇಳದೇ ಪ್ರಕರಣದ ವಿಚಾರಣೆಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತು. ಸುಪ್ರೀಂ ಕೋರ್ಟ್ ನುಡಿದಂತೆ ನಡೆಯಲಿಲ್ಲ. ಇಂಥ ಬೆಳವಣಿಗೆಯನ್ನು ಆರಂಭದಲ್ಲೇ ಚಿವುಟಿ ಹಾಕುವ ಅವಕಾಶವನ್ನು ಸುಪ್ರೀಂ ಕೋರ್ಟ್ ಬಳಸಲಿಲ್ಲ ಎಂದು ಎಐಎಂಐಎಂ ಮುಖ್ಯಸ್ಥರು ನಿರಾಶೆ ವ್ಯಕ್ತಪಡಿಸಿದ್ದಾರೆ.

ಕೋರ್ಟ್ ತೀರ್ಪಿಗೆ ಬೇಸರ

ಕೋರ್ಟ್ ತೀರ್ಪಿಗೆ ಬೇಸರ

ಜ್ಞಾನವಾಪಿ ಮಸೀದಿಯೊಳಗೆ 'ಶಿವಲಿಂಗ' ಕಂಡುಬಂದ ಸ್ಥಳವನ್ನು ಸೀಲ್ ಮಾಡಲು ವಾರಣಾಸಿ ಕೋರ್ಟ್ ನೀಡಿದ ಆದೇಶಕ್ಕೆ ಒವೈಸಿ ಚಕಾರ ಎತ್ತಿದ್ದಾರೆ. "ಕೋರ್ಟ್ ಕಮಿಷನರ್ ವರದಿ ಇನ್ನೂ ಸಲ್ಲಿಕೆಯಾಗದೇ ಇದ್ದರೂ, ಮುಸ್ಲಿಮ್ ಪಕ್ಷದ ಅಭಿಪ್ರಾಯವನ್ನೂ ಆಲಿಸದೆಯೇ ಮಸೀದಿಯ ಒಂದು ಭಾಗವನ್ನು ಸೀಲ್ ಮಾಡಿ ಆದೇಶ ನೀಡುವುದು ತೀರಾ ಅನ್ಯಾಯ. ಯಾವ ಜಗತ್ತಿನಲ್ಲಿ ಇಂಥ ತೀರ್ಪು ಬರುತ್ತದೆ? ಇದು 1991ರ ಕಾಯ್ದೆಗೆ ವಿರುದ್ಧವಾಗಿದೆ. ಕಾಯ್ದೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನೂ ಇದು ಮೀರುತ್ತದೆ. 1998ರಲ್ಲಿ ಇಂಥದ್ದೇ ಅರ್ಜಿಯೊಂದಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿತ್ತು" ಎಂದು ಒವೈಸಿ ಹೇಳಿದ್ದಾರೆ.

ಅಚ್ಚರಿಯ ತೀರ್ಪು

ಅಚ್ಚರಿಯ ತೀರ್ಪು

400 ವರ್ಷಗಳಿಂದ ಅಸ್ತಿತ್ವದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಕಂಡು ಬಂದ ನೀರಿನ ಚಿಲುಮೆ ಅದು ಹೇಗೆ ಇನ್ನೊಂದು ಧಾರ್ಮಿಕ ನಂಬಿಕೆಯ ಕಟ್ಟಡವೆಂದು ಭಾವಿಸಲಾದೀತು? ಪ್ರತಿಯೊಂದು ಚಿಲುಮೆಯನ್ನೂ ಇದೇ ರೀತಿ ನೋಡಿದರೆ ಹೇಗೆ? ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ? ನಾವು ತಾಜ್ ಮಹಲ್ ಅನ್ನೂ ಮುಚ್ಚಬೇಕಾಗಬಹುದು" ಎಂದು ಅಸಾದುದ್ದೀನ್ ಒವೈಸಿ ಆತಂಕ ವ್ಯಕ್ತಪಡಿಸಿದ್ಧಾರೆ.

ಬಾಬ್ರಿಯಲ್ಲಾಗಿದ್ದೂ ಎಲ್ಲಾ ಕಡೆ

ಬಾಬ್ರಿಯಲ್ಲಾಗಿದ್ದೂ ಎಲ್ಲಾ ಕಡೆ

ಜ್ಞಾನವಾಪಿ ಮಸೀದಿಯಲ್ಲಿ ಆಗುತ್ತಿರುವ ಘಟನೆಗಳ ರೀತಿಯಲ್ಲೇ ಬಾಬ್ರಿ ಮಸೀದಿ ವಿಚಾರದಲ್ಲೂ ಆಗಿತ್ತು ಎಂದು ಒವೈಸಿ ಹೋಲಿಕೆ ಮಾಡಿ ವಿವರಿಸಿದ್ಧಾರೆ. "ಬಾಬ್ರಿ ಮಸೀದಿ ವಿವಾದದ ಬೆಳವಣಿಗೆ ಗಮನಿಸಿ ನೋಡಿ. ಚಬೂತ್ರದಿಂದ ಅದು ಶುರುವಾಯಿತು. ಮಸೀದಿಯೊಳಗೆ ವಿಗ್ರಹಗಳನ್ನು ಸೇರಿಸಲಾಯಿತು. ಗೇಟ್‌ಗಳನ್ನು ತೆರೆಯಲಾಯಿತು. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಯಿತು. ತಾತ್ಕಾಲಿಕ ದೇವಸ್ಥಾನ ನಿರ್ಮಿಸಲಾಯಿತು. ಕೊನೆಯಲ್ಲಿ ಮುಸ್ಲಿಮರು ಸ್ಥಳವನ್ನು ಬಿಟ್ಟುಕೊಡಬೇಕಾಯಿತು. ಬಾಬ್ರಿ ಮಸೀದಿ ಧ್ವಂಸ ಘಟನೆಯಲ್ಲಿ ಒಬ್ಬನೇ ವ್ಯಕ್ತಿಗೂ ಶಿಕ್ಷೆಯಾಗಲಿಲ್ಲ" ಎಂದು ಒವೈಸಿ ಅಳಲು ತೋಡಿಕೊಂಡಿದ್ದಾರೆ.

ಸಂಘ ಪರಿವಾರ ಅಜೆಂಡಾ ಏನು?

ಸಂಘ ಪರಿವಾರ ಅಜೆಂಡಾ ಏನು?

"ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಾಗಲೇ ಇದು ಹೊಸ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತೆ ಎಂದು ಹೇಳಿದ್ದೆ. ಜ್ಞಾನವಾಪಿ, ಮಥುರಾದ ಈದ್ಗಾ, ಲಕ್ನೋನ ತೆಲಿ ವಾಲಿ ಮಸೀದಿ, ಮುಂಬೈನ ಹಾಜಿ ಅಲಿ ದರ್ಗಾದಲ್ಲಿ ಇದೇ ರೀತಿ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದೆ. ಅದು ನಿಜವಾಯಿತು. ಬಾಬ್ರಿ ಮಸೀದಿ ಒಂದನ್ನು ಬಿಟ್ಟುಕೊಟ್ಟರೆ ಮುಂದೆ ಯಾವ ಸಮಸ್ಯೆಯೂ ಇರಲ್ಲ ಎಂದು ಕೆಲವರು ಬುದ್ಧಿ ಹೇಳಿದ್ದರು. ಈಗ ಏನಾಗುತ್ತಿದೆ ನೋಡಿ. ಅದೇ ವಿಷಯವನ್ನು ಎತ್ತುತ್ತಿದ್ದಾರೆ. ಸಂಘ ಪರಿವಾರದ ಅಜೆಂಡಾದಲ್ಲಿ 5೦ ಸಾವಿರ ಮಸೀದಿಗಳು ಇವೆ" ಎಂದು ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+