Asaduddin Owaisi: ಸಂಸದ ಅಸಾದುದ್ದೀನ್ ಓವೈಸಿ ಮನೆ ಧ್ವಂಸ- ಅವಿಶ್ವಾಸ ನಿರ್ಣಯ ಭಾಷಣದ ಬಳಿಕ ಬೆದರಿಕೆ ಕರೆಗಳು
ನವದೆಹಲಿ, ಆಗಸ್ಟ್ 14: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ದೆಹಲಿ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮನೆಯ ಬಾಗಿಲಿನ ಎರಡು ಗಾಜುಗಳು ಒಡೆದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಒಡೆದ ಗಾಜುಗಳ ಸುತ್ತಮುತ್ತ ಕಲ್ಲು ಅಥವಾ ಇನ್ನಾವುದೇ ವಸ್ತು ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಪ್ರದೇಶವನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಓವೈಸಿ ಅವರ ಸರ್ಕಾರಿ ಬಂಗಲೆಯಲ್ಲಿದ್ದ ಕೇರ್ಟೇಕರ್ ಯಾರೋ ಬಂಗಲೆಯ ಗಾಜನ್ನು ಒಡೆದಿದ್ದಾರೆ ಎಂದು ದೂರಿದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ದೂರಿನ ಪ್ರಕಾರ, ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಅಶೋಕ ರಸ್ತೆಯಲ್ಲಿರುವ ಅಸಾದುದ್ದೀನ್ ಓವೈಸಿ ಅವರ ಮನೆಯ ( ಸಂಖ್ಯೆ 34 ) ಗೇಟ್ನ ಗಾಜಿಗೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಪಿಸಿಆರ್ ಕರೆ ಸ್ವೀಕರಿಸಿದ ನಂತರ, ಡಿಸಿಪಿ, ಎಸಿಪಿ ಮತ್ತು ಎಸ್ಎಚ್ಒ ಸ್ಥಳಕ್ಕೆ ತಲುಪಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಮನೆಯ ಸೇವಕ, 'ನಾಯಿ ಒಳಗಿನಿಂದ ಬೊಗಳಲು ಪ್ರಾರಂಭಿಸಿತು. ಆಗ ಹೊರಗೆ ಹೋಗಿ ನೋಡಿದಾಗ, ಗೇಟ್ನಲ್ಲಿ ಒಡೆದ ಗಾಜುಗಳನ್ನು ಗುರುತಿಸಿದೆ ಎಂದು ಎಂದು ಹೇಳಿದ್ದಾರೆ.
'ಹೊರಗೆ ಹೋಗಿ ನೋಡಿದಾಗ, ಕಿಟಕಿಯ ಗಾಜು ಒಡೆದಿರುವುದು ನನಗೆ ಕಂಡುಬಂತು. ಇದಾದ ನಂತರ ನಾನು ಸುತ್ತಲೂ ಸಾಕಷ್ಟು ಹುಡುಕಿದೆ. ಆದರೆ, ಯಾರೂ ಕಾಣಲಿಲ್ಲ' ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿರುವ ತಮ್ಮ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಓವೈಸಿ ಫೆಬ್ರವರಿಯಲ್ಲಿ ಆರೋಪಿಸಿದ್ದರು. 2014 ರಿಂದ ಅವರ ಮನೆ ಮೇಲೆ ದಾಳಿ ನಡೆದಿರುವುದು ನಾಲ್ಕನೇ ಬಾರಿ ಎಂದು ಓವೈಸಿ ಹೇಳಿದ್ದಾರೆ.
ದೆಹಲಿಯಲ್ಲಿರುವ ಓವೈಸಿ ಅವರ ಅಧಿಕೃತ ನಿವಾಸವನ್ನು ಧ್ವಂಸಗೊಳಿಸಿರುವುದು ಈ ವರ್ಷದಲ್ಲಿ ಇದು ಎರಡನೇ ಬಾರಿ. ಈ ವರ್ಷದ ಫೆಬ್ರವರಿ 19 ರಂದು ದುಷ್ಕರ್ಮಿಗಳು ಪ್ರವೇಶದ್ವಾರದಲ್ಲಿದ್ದ ಅವರ ನಾಮಫಲಕವನ್ನು ಕಲ್ಲು ಎಸೆದು ಹಾನಿಗೊಳಿಸಿದ್ದರು.
ಇದೇ ವೇಳೆ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಅವಿಶ್ವಾಸ ನಿರ್ಣಯದ ಮೇಲೆ ಭಾಷಣ ಮಾಡಿದ ನಂತರ ಈ ಕರೆಗಳು ಬರುತ್ತಿವೆ ಎಂದು 'ಜೀ ನ್ಯೂಸ್' ವರದಿ ಮಾಡಿದೆ.












Click it and Unblock the Notifications