Breaking-'ಶಿವಲಿಂಗ' ನಿಂದನೆ: ಪ್ರೊಫೆಸರ್ ರತನ್ ಲಾಲ್ಗೆ ಜಾಮೀನು
ನವದೆಹಲಿ, ಮೇ 21: ಶಿವಲಿಂಗದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಕಾರಣಕ್ಕೆ ಬಂಧಿತರಾಗಿದ್ದ ಡೆಲ್ಲಿ ಯೂನಿರ್ಸಿಟಿಯ ಪ್ರೊಫೆಸರ್ ರತನ್ ಲಾಲ್ ಅವರಿಗೆ ಜಾಮೀನು ನೀಡಲಾಗಿದೆ. ನಿನ್ನೆ ಶುಕ್ರವಾರ ಸಂಜೆ ಉತ್ತರ ದೆಹಲಿಯ ಸೈಬರ್ ಠಾಣೆ ಪೊಲೀಸರು ರತನ್ ಲಾಲ್ ಅವರನ್ನು ಬಂಧಿಸಿದ್ದರು. ಇಂದು ಶನಿವಾರ ಮಧ್ಯಾಹ್ನ ಕೋರ್ಟ್ಗೆ ಹಾಜರುಪಡಿಸಲಾಯಿತು. ನ್ಯಾಯಾಲಯದಿಂದ ಅವರಿಗೆ ಜಾಮೀನು ಮಂಜೂರಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆ:
ಇದಕ್ಕೆ ಮುನ್ನ, ಪ್ರೊಫೆಸರ್ ರತನ್ ಲಾಲ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ವಿವಿ ವಿದ್ಯಾರ್ಥಿಗಳು ಇಂದು ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಡೆಲ್ಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಹೊರಗೆ ಹಲವು ವಿದ್ಯಾರ್ಥಿಗಳು ಸೇರಿ ಫ್ರೊಫೆಸರ್ ಬಂಧನ ಕ್ರಮವನ್ನು ಬಲವಾಗಿ ಖಂಡಿಸಿದರು.
ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿದೆ ಎನ್ನಲಾದ 'ಶಿವಲಿಂಗ'ದ ಬಗ್ಗೆ ಡೆಲ್ಲಿ ಯೂನಿವರ್ಸಿಟಿಯ ಹಿಂದೂ ಕಾಲೇಜಿನ ಪ್ರೊಫೆಸರ್ ರತನ್ ಲಾಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಎನಿಸುವ ರೀತಿಯಲ್ಲಿ ಬರೆದಿದ್ದರೆನ್ನಲಾಗಿದೆ. ಈ ಕಾರಣಕ್ಕೆ ನಿನ್ನೆ ಶುಕ್ರವಾರ ಅವರನ್ನು ಬಂಧಿಸಲಾಗಿತ್ತು.

ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ನೀಡಿದ ದೂರಿನ ಆಧಾರದ ಮೇಲೆ ರತನ್ ಲಾಲ್ ಮೇಲೆ ಕ್ರಮ ಕೈಗೊಳ್ಳಲಾಗಿತ್ತು. ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆ ಇತ್ಯಾದಿ ನೆಲೆಯಲ್ಲಿ ವಿವಿಧ ಗುಂಪುಗಳ ಮಧ್ಯೆ ದ್ವೇಷ ಬೆಳೆಸುವುದಕ್ಕೆ ಸಂಬಂಧಿಸಿದ ಸೆಕ್ಷನ್ 153A ಮತ್ತು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆ ಕೆಣಕುವುದಕ್ಕೆ ಸಂಬಂಧಿಸಿದ ಸೆಕ್ಷನ್ 295A ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜ್ಞಾನವಾಪಿ ಮಸೀದಿ ಕಾಂಪ್ಲೆಕ್ಸ್ನಲ್ಲಿ ಶಿವಲಿಂಗ ಪತ್ತೆಯಾಗಿರುವುದು ಬಹಳ ಕೋಮುಸೂಕ್ಷ್ಮ ವಿಷಯವಾಗಿದೆ. ಈ ವಿಚಾರ ಕೋರ್ಟ್ ಮೆಟ್ಟಿಲಿನಲ್ಲಿದೆ. ಹೀಗಿರುವಾಗ ಇದರ ಬಗ್ಗೆ ಅವಹೇಳನ ಮಾಡುವುದು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆಣಕಲೆಂದೇ ಮಾಡಿದಂತಿದೆ ಎಂದು ವಕೀಲ ವಿನೀತ್ ಜಿಂದಾಲ್ ತಮ್ಮ ದೂರಿನಲ್ಲಿ ಆರೋಪಿಸಿದ್ಧಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications