Devdutt Padikkal: ವಿರಾಟ್ ಕೊಹ್ಲಿ ಕ್ರೀಸ್ನಲ್ಲಿದ್ದರೆ ಸಾಕು, ನಮಗೆ ಅವರೇ ಧೈರ್ಯ: ಕನ್ನಡಿಗ ದೇವದತ್ ಪಡಿಕ್ಕಲ್
Devdutt Padikkal: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ನಡೆದ ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು. ಈ ಐತಿಹಾಸಿಕ ಗೆಲುವಿನ ಬಳಿಕ ಆರ್ಸಿಬಿ ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್ ಅವರು ತಂಡದ ಬೌಲಿಂಗ್ ವಿಭಾಗವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದೇ ವೇಳೆ ವಿರಾಟ್ ಕೊಹ್ಲಿ ಅವರ ಬಗ್ಗೆ ಮಹತ್ವದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಆರ್ಸಿಬಿಯ ಬೌಲರ್ಗಳು ಈ ಸೀಸನ್ ಆರಂಭದಿಂದಲೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು ತಂಡವು 2026ರ ಐಪಿಎಲ್ ಪ್ರಶಸ್ತಿ ಗೆಲ್ಲಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಭುವನೇಶ್ವರ್ ಕುಮಾರ್ 28 ವಿಕೆಟ್ ಪಡೆಯುವ ಮೂಲಕ ಸೀಸನ್ ಮುಗಿಸಿದರೆ, ರಸಿಖ್ ಸಲಾಮ್ ದಾರ್ 19 ವಿಕೆಟ್, ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ವುಡ್ 15 ವಿಕೆಟ್, ಕೃನಾಲ್ ಪಾಂಡ್ಯ 14 ವಿಕೆಟ್ ಪಡೆದು ಮಿಂಚಿದ್ದಾರೆ.

ಫೈನಲ್ನಲ್ಲಿ ಆರ್ಸಿಬಿ ಬೌಲರ್ಗಳ ಮೇಲುಗೈ
ಫೈನಲ್ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳು ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಗುಜರಾತ್ ಟೈಟಾನ್ಸ್ ತಂಡವನ್ನು 155/8 ರನ್ಗಳಿಗೆ ಕಟ್ಟಿಹಾಕಿದರು. ರಸಿಖ್ ಸಲಾಮ್ ದಾರ್ ಮೂರು, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್ವುಡ್ ತಲಾ ಎರಡು ವಿಕೆಟ್, ಕೃನಾಲ್ ಪಂಡ್ಯ ಅವರು ಒಂದು ವಿಕೆಟ್ ಕಿತ್ತು ಮಿಂಚಿದರು.
ಆರ್ಸಿಬಿ ಬೌಲಿಂಗ್ ಬಗ್ಗೆ ಮಾತನಾಡಿದ ದೇವದತ್ ಪಡಿಕ್ಕಲ್ ಅವರು, 'ಅವರ ಪ್ರದರ್ಶನ ನಿಜಕ್ಕೂ ನಂಬಲಸಾಧ್ಯವಾಗಿತ್ತು. ಅವರು ರೂಪಿಸುವ ಯೋಜನೆಗಳನ್ನು ಮೈದಾನದಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಾರೆ. ನಾನು ಕೆಲವು ಸಭೆಗಳಲ್ಲಿ ಭಾಗವಹಿಸಿದ್ದೇನೆ, ಅವರ ರಣತಂತ್ರಗಳು ಅತ್ಯಂತ ವಿವರವಾಗಿ ಮತ್ತು ನಿಖರವಾಗಿರುತ್ತವೆ,' ಎಂದು ಹೇಳಿದರು.
ಕೊಹ್ಲಿ ಬಗ್ಗೆ ಪಡಿಕ್ಕಲ್ ಹೇಳಿದ್ದೇನು?
ಫೈನಲ್ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ 75 ರನ್ ಗಳಿಸಿ ಅಜೇಯರಾಗಿ ಉಳಿಯುವ ಮೂಲಕ ಆರ್ಸಿಬಿ ಗೆಲುವಿಗೆ ಕಾರಣರಾದ ವಿರಾಟ್ ಕೊಹ್ಲಿ ಬಗ್ಗೆಯೂ ಪಡಿಕ್ಕಲ್ ಶ್ಲಾಘನೆ ವ್ಯಕ್ತಪಡಿಸಿದರು. 'ಮೈದಾನದಲ್ಲಿ ಪ್ರತಿ ಬಾರಿ ವಿಕೆಟ್ ಬಿದ್ದಾಗಲೂ ನಾನು ವೆಂಕಟೇಶ್ ಅಯ್ಯರ್ ಬಳಿ ಹೇಳುತ್ತಿದ್ದೆ ಎಲ್ಲಿಯವರೆಗೆ ಕೊಹ್ಲಿ ಕ್ರೀಸ್ನಲ್ಲಿ ಇರುತ್ತಾರೆಯೋ ಅಲ್ಲಿಯವರೆಗೆ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು. ಅವರು ಒಂದೇ ಕಡೆ ಸ್ಥಿರವಾಗಿ ನಿಂತಿಲ್ಲ. ಬದಲಿಗೆ ಸಮಯಕ್ಕೆ ತಕ್ಕಂತೆ ತಮ್ಮ ಆಟವನ್ನು ಬದಲಾಯಿಸಿಕೊಳ್ಳುತ್ತಾ ಮತ್ತು ಸುಧಾರಿಸಿಕೊಳ್ಳುತ್ತಾ ಬಂದಿದ್ದಾರೆ,' ಎಂದು ಹೇಳಿದರು.
ಜಿತೇಶ್ ಶರ್ಮಾ ಹೇಳಿದ್ದೇನು?
ಜಿತೇಶ್ ಶರ್ಮಾ ಅವರು ಮಾತನಾಡಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳುವ ಜರ್ನಿಯಲ್ಲಿ ತಂಡದ ನಾಯಕತ್ವ ಮತ್ತು ಸಹಾಯಕ ಸಿಬ್ಬಂದಿ ತೋರಿದ ಸಕಾರಾತ್ಮಕ ಮತ್ತು ಆತ್ಮವಿಶ್ವಾಸದ ವಾತಾವರಣವೇ ಪ್ರಮುಖ ಕಾರಣ ಎಂದು ಕ್ರೆಡಿಟ್ ನೀಡಿದ್ದಾರೆ.
'ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು ತಂಡದ ಮೈಂಡ್ಸೆಟ್ ಅನ್ನು ಕೇವಲ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಎನ್ನುವುದರಿಂದ, ಮತ್ತೊಮ್ಮೆ ಟ್ರೋಫಿಯನ್ನು ಬೆನ್ನಟ್ಟಿ ಗೆಲ್ಲುವುದು ಎಂದು ಬದಲಾಯಿಸಿದರು. ಇದು ಇಡೀ ತಂಡದಲ್ಲಿ ನಂಬಿಕೆಯನ್ನು ಹೆಚ್ಚಿಸಿತು,' ಜಿತೇಶ್ ಶರ್ಮಾ ಹೇಳಿದರು. ಇದೇ ವೇಳೆ ಅವರು ಆಟಗಾರರಿಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಿದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ದಿನೇಶ್ ಕಾರ್ತಿಕ್ ಸೇರಿದಂತೆ ಇಡೀ ಮ್ಯಾನೇಜ್ಮೆಂಟ್ ಅನ್ನು ಅವರು ಶ್ಲಾಘಿಸಿದರು.
'ತಂಡವು ಒಂದೊಂದೇ ಪಂದ್ಯದತ್ತ ಗಮನ ಹರಿಸುವ ತಂತ್ರಕ್ಕೆ ಬದ್ಧವಾಗಿತ್ತು ಮತ್ತು ನಿರೀಕ್ಷೆಗಳಿಗಿಂತ ಹೆಚ್ಚಾಗಿ ರಣತಂತ್ರಗಳ ಮೇಲೆ ಕೇಂದ್ರೀಕರಿಸಿತ್ತು. ಅಲ್ಲದೆ ಮುಂದಿನ ಸೀಸನ್ನಲ್ಲಿ ನಾವು ಮೂರನೇ ಬಾರಿಗೆ ಟ್ರೋಫಿ ಗೆಲ್ಲುವ ಗುರಿ ಹೊಂದಿದ್ದೇವೆ,' ಎಂದು ಜಿತೇಶ್ ಶರ್ಮಾ ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications