Bengaluru Second Airport: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಡಿಕೆಶಿ ಟಾಪ್ 5 ಯೋಜನೆಗಳು
Bengaluru Second Airport: ಡಿಕೆ ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಡಿಕೆಶಿ ಅವರು ಮುಖ್ಯಮಂತ್ರಿ ಆಗುತ್ತಿರುವ ಬೆನ್ನಲ್ಲೇ ಅವರ ಕನಸಿನ ಯೋಜನೆಗಳು ಚರ್ಚೆಯ ಮುನ್ನೆಲೆಗೆ ಬಂದಿವೆ. ಅದರಲ್ಲೂ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಹಾಗೂ ಬ್ರ್ಯಾಂಡ್ ಬೆಂಗಳೂರು ಯೋಜನೆಗಳು ಹೆಚ್ಚು ಚರ್ಚೆ ಆಗುತ್ತಿವೆ. ಡಿಕೆ ಶಿವಕುಮಾರ್ ಅವರು ಜೂನ್ 3ರ ಬುಧವಾರ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಂಗಳೂರು ಕೇಂದ್ರೀತ ಯೋಜನೆಗಳ ಚರ್ಚೆ ವಿಷಯ ಜೋರಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರು ಹಲವು ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಿದ್ದಾರೆ. ಇನ್ನು ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ಮತ್ತೆ ಚರ್ಚೆಯಾಗುತ್ತಿದೆ. ಬೆಂಗಳೂರು ದಕ್ಷಿಣದಲ್ಲಿ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಡಿ.ಕೆ ಶಿವಕುಮಾರ್ ಅವರು ಒಲವು ತೋರಿದ್ದರು. ಇದೀಗ ಮುಖ್ಯಮಂತ್ರಿಯಾದ ನಂತರ ಇದನ್ನು ಕಾರ್ಯರೂಪಕ್ಕೆ ತರುವ ಸಾಧ್ಯತೆ ಇದೆ.

ಉಪಮುಖ್ಯಮಂತ್ರಿಯಾಗಿ ತಮ್ಮ ಮೂರು ವರ್ಷಗಳ ಅಧಿಕಾರ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು ಸುರಂಗ ರಸ್ತೆಗಳು, ಬಿಡದಿ ಸಮಗ್ರ ಟೌನ್ಶಿಪ್ ಯೋಜನೆ, ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಗ್ಗೆ ಪ್ರಸ್ತಾಪಿಸಿದ್ದರು. ಇನ್ನು ಈ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಸಿದ್ಧತೆಗಳು ಸಹ ನಡೆದಿವೆ. ಇದರೊಂದಿಗೆ ಕರ್ನಾಟಕದ ಪ್ರಮುಖ ಮೇಕೆದಾಟು ಅಣೆಕಟ್ಟು ಯೋಜನೆ ಸಹ ಜಾರಿ ಆಗುವ ಸಾಧ್ಯತೆ ಇದೆ.
ಡಿಕೆಶಿ ಕನಸಿನ ಕೂಸು ಬಿಡದಿ ಟೌನ್ಶಿಪ್ 18,000 ಕೋಟಿ ರೂ. ಯೋಜನೆ
ಡಿ.ಕೆ ಶಿವಕುಮಾರ್ ಅವರ ಮತ್ತೊಂದು ಮಹಾತ್ವಾಕಾಂಕ್ಷಿ ಯೋಜನೆ ಎಂದರೆ ಅದು ಬಿಡದಿ ಟೌನ್ಶಿಪ್ ಯೋಜನೆ. ಶಿವಕುಮಾರ್ ಅವರ ನಗರ ವಿಸ್ತರಣಾ ಯೋಜನೆಯಡಿಯಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಸ್ತಾಪಗಳಲ್ಲಿ ಇದು ಒಂದಾಗಿದೆ. ಬೆಂಗಳೂರಿನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಬಿಡದಿ ಬಳಿ 7,000 ಎಕರೆ ವಿಸ್ತೀರ್ಣದ ಬಿಡದಿ ಟೌನ್ಶಿಪ್ ಅಭಿವೃದ್ಧಿ ಯೋಜನೆ ರೂಪಿಸಿಕೊಳ್ಳಲಾಗಿದೆ. ಇತ್ತೀಚೆಗೆ ಕರ್ನಾಟಕ ಸಚಿವ ಸಂಪುಟವು ಈ ಯೋಜನೆಗೆ ಸುಮಾರು 18,000 ಕೋಟಿ ರೂ. ಮೊತ್ತದ ಅನುದಾನಕ್ಕೆ ಅನುಮೋದನೆ ನೀಡಿದೆ. ಇದು ವಸತಿ ವಲಯಗಳು, ಕೈಗಾರಿಕಾ ಸಮೂಹಗಳು, ವಾಣಿಜ್ಯ ಜಿಲ್ಲೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಧುನಿಕ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಒಳಗೊಂಡಿದೆ.
ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯೂ ಸಹ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಕಳೆದ ದಶಕದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರೀ ಒತ್ತಡವನ್ನು ಅನುಭವಿಸಿದೆ. ಈಗ ವಾರ್ಷಿಕವಾಗಿ 40 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುತ್ತದೆ. ಟರ್ಮಿನಲ್ 2 ಮತ್ತು ಭವಿಷ್ಯದ ವಿಸ್ತರಣೆಗಳು ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದ್ದರೂ, ಎರಡನೇ ವಿಮಾನ ನಿಲ್ದಾಣದ ಕುರಿತು ಚರ್ಚೆಗಳು ತೀವ್ರಗೊಂಡಿವೆ.
ಕನಕಪುರ, ನೆಲಮಂಗಲ ಮತ್ತು ಶಿರಾ ಚರ್ಚೆಯಲ್ಲಿರುವ ಸಂಭಾವ್ಯ ಸ್ಥಳಗಳಲ್ಲಿ ಸೇರಿವೆ. ಲಂಡನ್, ಟೋಕಿಯೊ ಮತ್ತು ನ್ಯೂಯಾರ್ಕ್ನಂತಹ ಪ್ರಮುಖ ಜಾಗತಿಕ ನಗರಗಳು ಆರ್ಥಿಕ ಬೆಳವಣಿಗೆ ಮತ್ತು ಪ್ರಾದೇಶಿಕ ಸಂಪರ್ಕವನ್ನು ಬೆಂಬಲಿಸಲು ಬಹು ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತವೆ. ಹೀಗಾಗಿ ಬೆಂಗಳೂರಿಗೂ ಹೆಚ್ಚು ವಿಮಾನ ನಿಲ್ದಾಣಗಳ ಅವಶ್ಯಕತೆ ಇದೆ ಎನ್ನುವ ವಾದವಿದೆ. ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರದಲ್ಲಿ ನಿರ್ಮಾಣ ಮಾಡಬೇಕು ಎನ್ನುವುದು ಡಿಕೆಶಿ ಅವರ ಕನಸಾಗಿದೆ.
ಬೆಂಗಳೂರು ಸುರಂಗ ರಸ್ತೆ ಯೋಜನೆ
ಡಿಕೆ ಶಿವಕುಮಾರ್ ಅವರು ಉದ್ದೇಶಿಸಿರುವ ಪ್ರಮುಖ ಯೋಜನೆಗಳಲ್ಲಿ ಬೆಂಗಳೂರು ಸುರಂಗ ರಸ್ತೆ ಯೋಜನೆಯೂ ಒಂದು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ಗೆ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶವಾಗಿದೆ. ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ 16.57 ಕಿ.ಮೀ ಉದ್ದದ ಸುರಂಗ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಪ್ರಸ್ತಾಪಿತ ಈ ಬೃಹತ್ ಯೋಜನೆಗೆ ಅಂದಾಜು 17,698 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಗ್ರೂಪ್ ಅತಿ ಕಡಿಮೆ ಬಿಡ್ ಅಂದರೆ 22,267 ಕೋಟಿ ರೂ. ಬಿಡ್ ಸಲ್ಲಿಸಿದೆ. ಈ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದ್ದರೂ ಡಿ.ಕೆ ಶಿವಕುಮಾರ್ ಅವರು ಈ ಯೋಜನೆಯಿಂದ ಹಿಂದೆ ಸರಿದಿಲ್ಲ. ಇದು ಸಹ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.
ಮೇಕೆದಾಟು ಯೋಜನೆ
ಡಿಕೆಶಿ ಅವರು ಅಧಿಕಾರಕ್ಕೆ ಬರುವುದಕ್ಕಿಂತಲೂ ಮುಂಚೆಯಿಂದಲೂ ಚರ್ಚೆಯಾಗುತ್ತಿರುವ ಯೋಜನೆಗಳಲ್ಲಿ ಮೇಕೆದಾಟು ಯೋಜನೆ ಪ್ರಮುಖವಾಗಿದೆ. ಮೇಕೆದಾಟು ಜಲಾಶಯ ಯೋಜನೆಯು ಕರ್ನಾಟಕದ ಅತ್ಯಂತ ಪ್ರಮುಖ ಯೋಜನೆಯಾಗಿದೆ. ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಮತ್ತು ಜಲವಿದ್ಯುತ್ ಉತ್ಪಾದಿಸಲು ರಾಮನಗರ ಜಿಲ್ಲೆಯ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ.












Click it and Unblock the Notifications