ಕೃಷಿ ಕ್ಷೇತ್ರದಲ್ಲಿ ಅದಾಗಲೇ ಇದ್ದ ಸಮಸ್ಯೆಗಳನ್ನು ‘ಕೊರೊನಾ’ ಎತ್ತಿ ತೋರಿಸುತ್ತಿದೆ
ಕೊರೊನಾ ವೈರಸ್ ಸೋಂಕಿನ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು ಸೊರಗಿವೆ. ಅಲ್ಪ ಸ್ವಲ್ಪ ಉಸಿರಾಡಲು ಅವಕಾಶ ಸಿಕ್ಕಿದ್ದ ಕೃಷಿ ಕ್ಷೇತ್ರದ ಮೇಲೂ ಬಹುದೊಡ್ಡ ಪೆಟ್ಟು ಬಿದ್ದಿದೆ. ಆ ಬಗ್ಗೆ ಚರ್ಚಿಸಿ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಈಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತ ಸಂಘಟನೆಗಳ ಮುಖಂಡರುಗಳ ಸಭೆ ಕರೆದಿದ್ದರು. ಅನೇಕ ಕೃಷಿ ಚಿಂತಕರು, ರೈತ ಮುಖಂಡರು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರೆಲ್ಲರನ್ನು ಒನ್ ಇಂಡಿಯಾ ಸಂಪರ್ಕಿಸಿ ಅವರ ಸಲಹೆ ಸೂಚನೆಗಳ ಸರಣಿಯನ್ನು ಪ್ರಕಟಿಸುತ್ತಿದೆ. ಅದರ ಎರಡನೇ ಕಂತು ಇಲ್ಲಿದೆ...
Recommended Video
ರೈತ ಮುಖಂಡರು ಹಾಗೂ ಸುಸ್ಥಿರ ಅಭಿವೃದ್ಧಿ ಕೇಂದ್ರ ಅಮೃತಭೂಮಿ ಮುಖ್ಯಸ್ಥರಾದ ಚುಕ್ಕಿ ನಂಜುಂಡಸ್ವಾಮಿ ಒನ್ ಇಂಡಿಯಾಗೆ ನೀಡಿದ ಸಂದರ್ಶನದ ಸಾರಾಂಶವನ್ನು ಸರ್ಕಾರದ ಗಮನಕ್ಕೆ ಮತ್ತು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.
ಕೃಷಿ ಬಿಕ್ಕಟ್ಟುಗಳನ್ನು ಪರಿಹರಿಸಲು ಸರ್ಕಾರ ಏನೆಲ್ಲಾ ಮಾಡಬೇಕು?
ಚುಕ್ಕಿ ನಂಜುಂಡಸ್ವಾಮಿ ಮಾತು...
ಕೃಷಿ ಬಿಕ್ಕಟ್ಟು ಕೊರೊನಾ ಲಾಕ್ ಡೌನ್ ನಿಂದ ಉದ್ಭವಿಸಿರುವುದೇನಲ್ಲ. ಕೃಷಿ ಕ್ಷೇತ್ರದಲ್ಲಿ ಅದಾಗಲೇ ಇದ್ದ ಸಮಸ್ಯೆಗಳನ್ನು ‘ಕೊರೊನಾ' ಎತ್ತಿ ತೋರಿಸುತ್ತಿದೆ ಅಷ್ಟೇ. ಇದೀಗ ಬಿಕ್ಕಟ್ಟು ಬಿಗಡಾಯಿಸಿದೆ. ಈ ಸಂದರ್ಭವನ್ನು ಇಡೀ ಕೃಷಿ ವ್ಯವಸ್ಥೆಯ ಬಗ್ಗೆ ಮರುಪರಿಶೀಲನೆ ಮಾಡೋಕೆ ಬಳಸಿಕೊಳ್ಳಬೇಕು ನಾವು. ಲಾಕ್ ಡೌನ್ ನಲ್ಲಿ, ಏನು ರೈತರು ಬೆಳೆದ ಹಣ್ಣು ತರಕಾರಿಗಳಿಗೆ ಮಾರ್ಕೆಟ್ ಸಿಗದೇ ಹೋಯಿತೋ, ಅದಕ್ಕೆ ಮುಂಚೆಯೂ ಇಂಥದ್ದೇ ಸಂದರ್ಭಗಳನ್ನು ರೈತರು ಎದುರಿಸುತ್ತಿದ್ದರು. ಬೆಳೆದ ಹಣ್ಣು ತರಕಾರಿಗಳನ್ನು ರಸ್ತೆಗೆ ಸುರಿಯೋದು, ಹೊಲಗಳಲ್ಲೇ ಅವುಗಳನ್ನು ಕೊಚ್ಚಿ ಬಿಸಾಡೋದನ್ನು ನಾವೆಲ್ಲಾ ನೋಡಿಯೇ ಇದ್ದೇವೆ. ಅಂಥ ಪರಿಸ್ಥಿತಿ ಇದೀಗ ಎಲ್ಲರಿಗೂ ಕಾಣುವ ಹಾಗಾಗಿದೆ.
ಪರಿಸರ ಸ್ನೇಹಿ ವಿಧಾನ ಬಳಸಿ ಕೃಷಿಯಲ್ಲಿ ಕೀಟ ಮತ್ತು ರೋಗ ನಿರ್ವಹಣೆ
ಸ್ಥಳೀಯ ಅಗತ್ಯತೆಗಳಿಗೆ ಬೆಳೆ ಬೆಳೆಯೋದು ಉತ್ತಮ
ನಾನು ವಾಸವಿರುವ ಚಾಮರಾಜನಗರ ಜಿಲ್ಲೆಯದ್ದೇ ಉದಾಹರಣೆ ತಗೊಳೋದಾದ್ರೆ, ಇಲ್ಲಿನ ರೈತರು ನೂರಾರು ಟನ್ ಎಲೆಕೋಸು ಬೆಳೀತಿದಾರೆ. ಇವರು ಅವಲಂಬಿಸಿರುವ ಮಾರ್ಕೆಟ್ ಕೇರಳ ಮತ್ತು ತಮಿಳುನಾಡಿನದ್ದು. ಅಲ್ಲಿನ ಮಾರುಕಟ್ಟೆ ಬಗ್ಗೆ ಸರಿಯಾದ ಗ್ರಹಿಕೆ ಇಲ್ಲಿನವರಿಗೆ ಇರೋದಿಲ್ಲ. ಬೆಳೆದು ಬೇಸ್ತು ಬೀಳ್ತಾರೆ. ಈಗ ಬಂದಿರುವಂಥ ಪರಿಸ್ಥಿತಿಯಲ್ಲಿ ಇನ್ನೂ ದೊಡ್ಡ ಸಮಸ್ಯೆಗಳಿಗೆ ಸಿಲುಕಿಕೊಳ್ತಾರೆ. ಹಾಗಾಗಿ ರೈತರು ಮೊದಲು ಸ್ಥಳೀಯ ಅಗತ್ಯತೆಗಳಿಗೆ ಬೆಳೆಗಳನ್ನು ಮಾಡಿಕೊಳ್ಳೋದು ಯಾವ ಕಾಲಕ್ಕೂ ಒಳ್ಳೆಯದು. ಜೊತೆಗೆ ಹಳ್ಳಿಗಳಲ್ಲೇ ಇರುವ ಹುಡುಗ ಹುಡುಗಿಯರ ಮನವೊಲಿಸಿ ಇವುಗಳ ಮೌಲ್ಯವರ್ಧನೆ ಮಾಡಬಹುದಾದ ಸಾಧ್ಯತೆಗಳ ಬಗ್ಗೆ ಅವರಿಗೆ ತರಬೇತಿ ಕೊಡಬೇಕು. ಅವರೆಲ್ಲರನ್ನು ಇದ್ದೂರಿನಲ್ಲಿಯೇ ಕೆಲಸದಲ್ಲಿ ತೊಡಗುವ ಹಾಗೆ ಪುಟ್ಟ ಕೈಗಾರಿಕೆಗಳನ್ನು ತರಬೇಕು. ಮಾರುಕಟ್ಟೆಯೂ ಸ್ಥಳೀಯವಾಗಿಯೇ ಇರುವಂತೆ ಮಾಡಿದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧ್ಯ. ಅಂಥದೊಂದು rearrangement ಆಗಬೇಕಿದೆ.
food mile ಹೆಚ್ಚಾದಷ್ಟೂ ಸಮಸ್ಯೆಗಳು ಹೆಚ್ಚು
ಹಿಂದೆ ನಮ್ಮ ತಂದೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು "ನಮ್ದು" ಅನ್ನೋ ಕಾರ್ಯಕ್ರಮ/ಯೋಜನೆಯನ್ನು ರೂಪಿಸಿದ್ರು. ಆ ಯೋಜನೆಯ ಉದ್ದೇಶ ಮತ್ತು ವ್ಯಾಪ್ತಿ ಬಹಳ ದೊಡ್ಡದಿದೆ. ಒಂದೇ ವಾಕ್ಯದಲ್ಲಿ ಅರ್ಥ ಮಾಡಿಸೋದಾದ್ರೆ. ರೈತ ಬೆಳೆದ ಬೆಳೆ ಮೊದಲು ಅಲ್ಲಿನ ಗ್ರಾಮದ ಗ್ರಾಹಕರಿಗೆ ತಲುಪಬೇಕು ನಂತರ ಮುಂದಿನ ಊರು, ಹೋಬಳಿ ಹೀಗೆ ಮುಂದುವರಿಯಬೇಕು. ಆದರೆ ವಾಸ್ತವದಲ್ಲಿ, ಇಲ್ಲಿ ಬೆಳೆದ ಬೆಳೆ ನೂರಾರು ಮೈಲಿ ದೂರದ ಮಾರುಕಟ್ಟೆಗೆ ಸಾಗಿಸಿ ಮತ್ತದೇ ಉತ್ಪನ್ನವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡುವುದು ಚಾಲ್ತಿಯಲ್ಲಿರುವ ಅಭ್ಯಾಸ. ಈ ರೀತಿ ಆಹಾರ ಸಂಚರಿಸುವುದನ್ನು food mile ಎಂದು ಹೇಳುತ್ತೇವೆ. food mile ಹೆಚ್ಚಾದಷ್ಟೂ ಸಮಸ್ಯೆಗಳು ಹೆಚ್ಚು. ಕಡಿಮೆ ಇದ್ದಲ್ಲಿ ಸಮಸ್ಯೆಗಳೂ ಕಡಿಮೆ. ಯೂರೋಪ್ ನ ಕೆಲವು ದೇಶಗಳಲ್ಲಿ ಈಗಾಗಲೇ zero food mile ಚಳವಳಿ ಆರಂಭವಾಗಿದೆ. ದೂರದಲ್ಲೆಲ್ಲೋ ಬೆಳೆದ ಆಹಾರ ಪದಾರ್ಥವನ್ನು ಅಲ್ಲಿನ ಜನ ಕೊಳ್ಳುವುದಿಲ್ಲ. ಅಲ್ಲಿಯೇ ಸ್ಥಳೀಯ ಆಹಾರ ಪದಾರ್ಥಗಳನ್ನು ಕೊಳ್ಳುವ ಮೂಲಕ ಸ್ಥಳೀಯ ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಇಂಥ ಮಾದರಿಗಳ ಬಗ್ಗೆ ಸರ್ಕಾರಗಳು ಗಮನಹರಿಸಬೇಕು.
ಆಲೂಗಡ್ಡೆ ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
ಕೃಷಿ ಮತ್ತು ಆಹಾರ ಭದ್ರತೆಯನ್ನು ಬೇರೆ ಬೇರೆ ನೋಡಲು ಸಾಧ್ಯವೇ?
ಬೆಳೆದ ಬೆಳೆಗೆ, ವಿಶೇಷವಾಗಿ ಆಹಾರ ಬೆಳೆಗಳಿಗೆ ಮಾರುಕಟ್ಟೆ ಇಲ್ಲ ಅನ್ನೋದು ಒಂದು ಸಮಸ್ಯೆಯಾದರೆ, ಎಷ್ಟೋ ಜನಕ್ಕೆ ಆಹಾರ ಸಿಗುತ್ತಿಲ್ಲ ಅನ್ನೋದು ಮತ್ತೊಂದು ಸಮಸ್ಯೆ. ಕೃಷಿ ಮತ್ತು ಆಹಾರ ಭದ್ರತೆಯನ್ನು ಬೇರೆ ಬೇರೆ ಆಗಿ ನೋಡಲು ಸಾಧ್ಯವೇ? ಮೊದಲು ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನಹರಿಸಬೇಕು. ಅದಕ್ಕೆ ಕೊರೊನಾ ಬಿಕ್ಕಟ್ಟಿನ ಸಂದರ್ಭ ಸರ್ಕಾರಗಳ ಕಣ್ತೆರೆಸುವಂತಾದರೆ ಒಳ್ಳೆಯದು. ಇನ್ನು ನಗರಗಳಿಗೆ ವಲಸೆ ಬಂದಿದ್ದ ಯುವಕರು ಹಳ್ಳಿಗಳಿಗೆ ವಾಪಸ್ ಹೋಗಿರುವವರನ್ನು ಅಲ್ಲಿಯೇ ಉಳಿಯುವಂತೆ ಮಾಡಲು ಸರ್ಕಾರ "ಸಮುದಾಯ ಕೃಷಿ" ಯನ್ನು ಪ್ರೋತ್ಸಾಹಿಸಬೇಕು. ಇಡೀ ಗ್ರಾಮದ ಜನರು ಒಟ್ಟಾಗಿ (ಅಗತ್ಯವಿದ್ದವರು) ಸಹಕಾರಿ ಮಾದರಿಯಲ್ಲಿ ಕೃಷಿ ಚಟುವಟಿಕೆ ಆರಂಭಿಸಿದರೆ ಒಳ್ಳೆಯದು. ಅದಕ್ಕೆ ಸರ್ಕಾರ ಅಗತ್ಯ ಹಣಕಾಸಿನ ನೆರವು ನೀಡಬೇಕು.
ಕೃಷಿ ಕ್ಷೇತ್ರ ಎಂದರೆ ಸದಾ ಸಮಸ್ಯೆಗಳ ಕೂಪ ಎನ್ನುವಂತಾಗದೆ ಇದೊಂದು ಭರವಸೆಯ ಕ್ಷೇತ್ರವಾಗಿ ಮಾಡುವತ್ತ ಸರ್ಕಾರ ಚಿಂತನೆ ನಡೆಸಲಿ. ಅದಕ್ಕಾಗಿ ತಜ್ಞರ task force ರಚಿಸುವುದು ಸೂಕ್ತ.
(ರೈತ
ಮುಖಂಡರು,
ಅಮೃತ
ಭೂಮಿ
ಸುಸ್ಥಿರ
ಅಭಿವೃದ್ಧಿ
ಕೇಂದ್ರದ
ಅಧ್ಯಕ್ಷರು)
ಸರಣಿ
ಮುಂದುವರೆಯುವುದು...