Jowar: ಏಪ್ರಿಲ್ 1ರಿಂದ ಬೆಂಬಲ ಬೆಲೆ ಸಹಿತ 'ಜೋಳ' ಖರೀದಿ: ಸರ್ಕಾರ
ಬಳ್ಳಾರಿ, ಮಾರ್ಚ್ 31: ರಾಜ್ಯ ಸರ್ಕಾರ ಬಿಳಿ ಜೋಳ ಬೆಳೆಗೆ ಬೆಂಬಲ ಬೆಲೆ ಘೋಷಿಸಿ ರೈತರಿಗೆ ಸಿಹಿ ಸುದ್ದಿ ನೀಡಿತ್ತು. ಇದೀಗ ನಾಳೆ ಸೋಮವಾರ ಏಪ್ರಿಲ್ 1 ಬಿಳಿ ಜೋಳ ಖರೀದಿ ಶುರುವಾಗುತ್ತಿದೆ. ಒಟ್ಟು ಒಂದು ಲಕ್ಷ ಮೆಟ್ರಿಕ್ ಟನ್ ನಷ್ಟು ಜೋಳ ಖರೀದಿಗೆ ಸರ್ಕಾರ ತಿರ್ಮಾನಿಸಿದೆ.
ರೈತರಿಂದ ನೇರವಾಗಿ ಎಫ್ಎಕ್ಯೂ ಗುಣಮಟ್ಟದ ಬಿಳಿ ಜೋಳವನ್ನು ಖರೀದಿಯನ್ನು ಸೋಮವಾರದಿಂದ ಆರಂಭಿಸಲಾಗುತ್ತಿದೆ. 2023-2024ರಲ್ಲಿ ಬೆಳೆದ ಜೋಳ ಬೆಳೆ ಇದಾಗಿದೆ. ರೈತರ ಇದರ ಸದುಪಯೋಗ ಮಾಡಿಕೊಳ್ಳುವಂತೆ ಬಳ್ಳಾರಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಜೋಳ ಖರೀದಿ ಬೆಲೆಯ ವಿವರ
ಸರ್ಕಾರ ಖರೀದಿ ಪ್ರಕ್ರಿಯೆ ಆರಂಭಿಸಿದೆ. ನೋಂದಣಿ ಮತ್ತು ಜೋಳ ಖರೀದಿ ಪ್ರಯೋಜನ ಪಡೆಯಬೇಕಿದೆ. ಸರ್ಕಾರ ಪ್ರತಿ ಕ್ವಿಂಟಾಲ್ ಮಾಲ್ದಂಡಿ ಬಿಳಿ ಜೋಳಕ್ಕೆ ಒಟ್ಟು 3,225 ಹಾಗೂ ಹೈಬ್ರಿಡ್ ಜೋಳಕ್ಕೆ 3,180 ರೂಪಾಯಿ ನಿಗದಿ ಮಾಡಿದೆ. ಜಿಲ್ಲೆಯಲ್ಲಿ ರೈತರಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಇವರು ಏಪ್ರಿಲ್ 30ರವರೆಗೆ ಒಂದು ತಿಂಗಳು ಪೂರ್ತಿ ಜೋಳ ಖರೀದಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮಾಹಿತಿಗೆ ರೈತರು ಖರೀದಿ ಕೇಂದ್ರಕ್ಕೆ ಸಂಪರ್ಕಿಸಿ
ಜಿಲ್ಲೆಯಲ್ಲಿ ರೈತರ ಜೋಳ ಖರೀದಿಗೆಂದೇ ಈಗಾಗಲೇ ಖರೀದಿ ಕೇಂದ್ರ ತೆರೆದಿದ್ದೇವೆ. ಈ ಕುರಿತು ಬಳ್ಳಾರಿ ತಾಲ್ಲೂಕಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮ (ಬಳ್ಳಾರಿ ಘಟಕ- ಮೊ.9900677875) ಹಾಗೂ ಕಂಪ್ಲಿಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮ (ಮೊ. 9740838910) ಅನ್ನು ಹಾಗೂ ನಿಮ್ಮ ಹತ್ತಿರ ಖರೀದಿ ಕೇಂದ್ರವನ್ನು ರೈತರು ಕೂಡಲೇ ಸಂಪರ್ಕಿಸಬೇಕು. ಜೋಳ ಮಾರಾಟ, ಖರೀದಿ ಕುರಿತು ಹೆಚ್ಚು ಮಾಹಿತಿ ಪಡೆಯಬೇಕು ಎಂದು ಹೇಳಿದರು.

ಸರ್ಕಾರ ಎಫ್ಎಕ್ಯೂ ಗುಣಮಟ್ಟದ ಬಿಳಿ ಖರೀದಿಗೆ ಕೆಲವು ಷರತ್ತು ವಿಧಿಸಿದೆ. ಹೀಗಾಗಿ ರೈತರು ತಾವೇ ಸ್ವಯಂ ಆಗಿ ಖರೀದಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ರೈತರ ಪ್ರತಿ ಎಕರೆಗೆ 20 ಕ್ವಿಂಟಾಲ್ನಂತೆ ರೈತನ ಜಮೀನಿಗೆ ತಕ್ಕಹಾಗೇ ಜೋಳ ಖರೀಸುವಂತೆ ಸರ್ಕಾರ ಸೂಚನೆ ನೀಡಿದೆ.
ಗುಣಮಟ್ಟ ಪರಿಶೀಲಿಸಿ ಖರೀದಿ
ಇನ್ನೂ ಜೋಳ ಖರೀದಿ ವೇಳೆ ನಿಯೋಜಿತ ಕೃಷಿ ಇಲಾಖೆ ಗುಣಮಟ್ಟ ಪರಿವೀಕ್ಷಕರು ಪರಿಶೀಲಿಸುತ್ತಾರೆ. ಬಳಿಕವೇ ಜೋಳ ಖರೀದಿ ಆಗಲಿದೆ. ರೈತರು ಸಾಗಾಣೆ ವೆಚ್ಚ ಭರಿಸಬೇಕು. ಇಲ್ಲಿ ನೀಡಿದ ಜೋಳಕ್ಕೆ ಪ್ರತಿಯಾಗಿ ಖರೀದಿ ಹಣವನ್ನು ಸರ್ಕಾರ ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಹಿಂಗಾರು ಕೈಕೊಟ್ಟ ಸಂದರ್ಭದಲ್ಲಿ ಅಲ್ಪ ಸ್ವಲ್ಪ ಜೋಳ ಬೆಳೆದ ರೈತರು ದಿಢೀರನೇ ಬೆಲೆ ಇಳಿಕೆಯಿಂದ ಕಂಗಾಲಾಗಿದ್ದರು. ಈ ಮಧ್ಯೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ, ಅದರಂತೆ ರೈತರಿಂದ ಇಂತಿಷ್ಟು ಕ್ವಿಂಟಾಲ್ ಜೋಳ ಖರೀದಿ ಮಾಡಲು ಆರಂಭಿಸಿದೆ. ಇದರಿಂದ ಆಯಾ ಜಿಲ್ಲೆಯ ಜೋಳ ಬೆಳೆಗಾರರಿಗೆ ಅನುಕೂಲವಾಗಲಿದೆ.
ಜೋಳ ಕೊಯ್ಲು ಮಾಡಿ ಮಾರಾಟಕ್ಕೆ ಕಾಯುತ್ತಿರುವವರಿಗೆ ಬಳ್ಳಾರಿ ಜಿಲ್ಲಾಧಿಕಾರಿ ಖುಷಿ ಸುದ್ದಿ ನೀಡಿದ್ದಾರೆ. ರೈತರು ಚೀಲ ತುಂಬುವುದು, ಸಾಗಾಣೆ ಕಾರ್ಯದಲ್ಲಿ ತೊಡಗಿದ್ದಾರೆ.












Click it and Unblock the Notifications