ನ್ಯೂಜೆರ್ಸಿಯಲ್ಲಿ ಅರಳುಮಲ್ಲಿಗೆಯಾದ ದಾಸ ಸಾಹಿತ್ಯ
ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಶ್ರೀಕೃಷ್ಣ ವೃಂದಾವನದ ಆಸ್ಥಾನ ವಿದ್ವಾಂಸರೆಂದು ಅರಳುಮಲ್ಲಿಗೆಯವರನ್ನು ಗೌರವಿಸಿ, ಅವರಿಗೆ ವಿದ್ಯಾಕಲ್ಪತರು ಎಂಬ ಪ್ರಶಸ್ತಿ ನೀಡಿ ಅನುಗ್ರಹಿಸಿದ ಶ್ರೀಪಾದರು, ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯ ಶ್ರೇಷ್ಠ ಮೌಲ್ಯಗಳನ್ನು ತಲುಪಿಸುವ ಕಾರ್ಯವನ್ನು ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಮಾಡುವ ಮೂಲಕ ಅರಳುಮಲ್ಲಿಗೆಯವರು ಸಂಕ್ರಮಣ ಕಾಲದ ಸಾಂಸ್ಕೃತಿಕ ಹರಿಕಾರರಾಗಿದ್ದಾರೆ ಎಂದರು.
ಟೊರೊಂಟೋ, ಒಟ್ಟಾವ, ಡೆಟ್ರಾಯಿಟ್, ಅರಿಜೋನಾ, ಕ್ಯಾಲಿಫೋರ್ನಿಯಾ, ಚಿಕಾಗೋ, ಬಾಸ್ಟನ್, ಕೊಲರಾಡೋಗಳಲ್ಲಿ ತಮ್ಮ ದಾಸ ಸಾಹಿತ್ಯ, ವಿಷ್ಣುಸಹಸ್ರನಾಮ ಹಾಗೂ ಭಾಗವತ ಸಪ್ತಾಹ ಪ್ರವಚನಗಳನ್ನು ಯಶಸ್ವಿಯಾಗಿ ಪೂರೈಸಿ ನ್ಯೂಜೆರ್ಸಿಗೆ ಆಗಮಿಸಿದ ಅರಳುಮಲ್ಲಿಗೆಯವರ ಉಪನ್ಯಾಸಗಳನ್ನು ಒಂದು ವಾರಗಳ ಕಾಲ ನ್ಯೂಜೆರ್ಸಿಯ ಶ್ರೀ ಕೃಷ್ಣವೃಂದಾವನದಲ್ಲಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಪೂಜ್ಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥಸ್ವಾಮಿಗಳು ವಹಿಸಿದ್ದರು. ಶ್ರೀಪಾದರು ಟೊರೊಂಟೋ, ಲಾಸ್ ಏಂಜಲೀಸ್, ಫಿನಿಕ್ಸ್, ಹ್ಯೂಸ್ಟನ್ ಗಳಲ್ಲಿ ತಮ್ಮ ಧರ್ಮಶ್ರದ್ಧೆಯ ಸಂಸ್ಥೆಗಳನ್ನು ಪ್ರಾರಂಭ ಮಾಡಿ, ನ್ಯೂಜೆರ್ಸಿಯಲ್ಲಿ ಶ್ರೀಕೃಷ್ಣವೃಂದಾವನದಂತಹ ಮಹತ್ವದ ಬೃಹತ್ ದೇಗುಲವನ್ನು ನಿರ್ಮಾಣ ಮಾಡಿ ಅಮೆರಿಕಾದ ಭಕ್ತ ಜನತೆಗೆ ಬಹುದೊಡ್ಡ ರೀತಿಯಲ್ಲಿ ಉಪಕರಿಸಿದ್ದಾರೆ ಎಂದು ಅರಳು ಮಲ್ಲಿಗೆಯವರು ನುಡಿದರು.
ಶ್ರೀಪಾದರು ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶ್ರೀ ಕೃಷ್ಣವೃಂದಾವನ ಪಡೆದ ನ್ಯೂಜೆರ್ಸಿಯು ಈಗ ನಿಜವಾದ ಅರ್ಥದಲ್ಲಿ ಉದ್ಯಾನನಗರಿಯಾಗಿದೆ. ಕೃಷ್ಣಭಕ್ತರ ನಗರವಾಗುತ್ತಿದೆ. ಭಾರತದ ಸಾಂಪ್ರದಾಯಿಕ ಧಾರ್ಮಿಕ ವಾತಾವರಣದ ಸಂಭ್ರಮವು ನ್ಯೂಜೆರ್ಸಿಯಲ್ಲಿ ಕಾಣುವಂತೆ ಪರಿಣಾಮಕಾರಿಯಾಗಿ ಕೆಲಸಮಾಡುತ್ತಿರುವ ಶ್ರೀಕೃಷ್ಣವೃಂದಾವನವು ಅನ್ನದಾಸೋಹ ಹಾಗೂ ಜ್ಞಾನ ದಾಸೋಹ ಇವೆರಡಕ್ಕೂ ಮಹತ್ವ ನೀಡಿ ಕಾರ್ಯೋನ್ಮುಖವಾಗಿದೆ ಎಂದರು. ಏಳು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಹಿಂದೂ ಯೂನಿವರ್ಸಿಟಿ ಆಫ್ ಅಮೆರಿಕಾದ ನಿರ್ದೇಶಕರಾದ ಡಾ| ಎಂ.ಜಿ.ಪ್ರಸಾದ್ ಮುಂತಾದ ಅನೇಕ ಗಣ್ಯರು ಭಾಗವಹಿದ್ದರು.