ನ್ಯೂಜೆರ್ಸಿ ವೃಂದಾವನದಲ್ಲಿ ವಾರ್ಷಿಕೋತ್ಸವ, ರಾಯರ ವರ್ಧಂತಿ
ನ್ಯೂಜೆರ್ಸಿನಯ ಎಡಿಸನ್ ನಲ್ಲಿರುವ ಶ್ರೀ ಕೃಷ್ಣ ವೃಂದಾವನ ಸಂಸ್ಥೆಯ 17ನೇ ವಾರ್ಷಿಕೋತ್ಸವ ಮತ್ತು ಶ್ರೀ ರಾಘವೇಂದ್ರ ವರ್ಧಂತಿ (ಜನುಮದಿನ) ಉತ್ಸವವನ್ನು ಮಾರ್ಚ್ 16ರಂದು ಶನಿವಾರದಂದು ಆಚರಿಸಲು ನಿರ್ಧರಿಸಿದೆ.
ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಈ ಕಾರ್ಯಕ್ರಮವನ್ನು ಶ್ರೀ ಕೃಷ್ಣ ವೃಂದಾವನ ಆಯೋಜಿಸಿದ್ದು, ವಾರ್ಷಿಕೋತ್ಸವದ ಅಂಗವಾಗಿ ಹಲವಾರು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅಂದು ಬೆಳಿಗ್ಗೆ 6.30 ಗಂಟೆಗೆ ಪುಣ್ಯಾಹ ವಚನ, ಪವಮಾನ ಹೋಮ, 108 ಕಳಶ ಪ್ರತಿಷ್ಠಾಪನೆ, ವೇದ ಪಾರಾಯಣ ನಡೆಯಲಿದೆ. 7.30ಕ್ಕೆ ಕೃಷ್ಣ ಮಂತ್ರ ಹೋಮ ಜರುಗಲಿದೆ. ನಂತರ ಪಂಚಾಮೃತ ಅಭಿಷೇಕ, ಮಹಾಪೂಜೆ ನಡೆಯಲಿದ್ದು, ಹನ್ನೆರಡು ಗಂಟೆಗೆ ರಾಘವೇಂದ್ರ ಅಷ್ಟೋತ್ತರ ಮತ್ತು ಮಹಾ ಮಂಗಳಾರತಿ ನೆರವೇರಲಿದೆ.

ಇವು ಮಧ್ಯಾಹ್ನದವರೆಗಿನ ಕಾರ್ಯಕ್ರಮಗಳಾದರೆ, ಸಂಜೆ 6 ಗಂಟೆಯಿಂದ ಒಂದೂವರೆ ಗಂಟೆಗಳ ಕಾಲ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ರಂಗ ಪೂಜೆ, ಪಲ್ಲಕ್ಕಿ ಉತ್ಸವ, ರಥೋತ್ಸವ ಮತ್ತು ಅಷ್ಟಾವಧಾನ ಸೇವೆ ನಡೆಯಲಿದೆ. 8 ಗಂಟೆ ಪ್ರಸಾದವನ್ನು ವಿನಿಯೋಗಿಸಲಾಗುವುದು.
ಮಾರ್ಚ್ ತಿಂಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಶ್ರೀ ಕೃಷ್ಣ ವೃಂದಾವನ ಹಮ್ಮಿಕೊಂಡಿದೆ. ಮಾರ್ಚ್ 17ರಂದು ಭಾನುವಾರ ಸಂಜೆ 6ರಿಂದ 7.30ರವರೆಗೆ 'ನಾದೋಪಾಸನ' ಕಾರ್ಯಕ್ರಮದಲ್ಲಿ ಅನಿರುದ್ಧ ಖಂಡ್ರಿಕಾ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಇರಲಿದೆ.
ಅದರ ಮುಂದಿನ ಭಾನುವಾರ, ಮಾರ್ಚ್ 24ರಂದು 'ನಾದೋಪಾಸನ' ಕಾರ್ಯಕ್ರಮದಲ್ಲಿ ಅಭಿರಾಮ್ ತ್ಯಾಗರಾಜನ್ ಮತ್ತು ತಂಡದವರಿಂದ ವಯೋಲಿನ್ ಸಂಗೀತ ಸುಧೆ ಹರಿಯಲಿದೆ. ಮಾರ್ಚ್ 31ರಂದು ಭಾನುವಾರ 'ನಾದೋಪಾಸನ' ಕಾರ್ಯಕ್ರಮದಲ್ಲಿ ವೀಣಾ ಮೋಹನ್ ಮತ್ತು ತಂಡದಿಂದ ಹರಿಕಥೆ (ಗಜೇಂದ್ರ ಮೋಕ್ಷ) ಇರಲಿದೆ.












Click it and Unblock the Notifications