ಅಕ್ಕ ಸಮ್ಮೇಳನದ ಕಾರ್ಯದರ್ಶಿ ಧನಂಜಯ ಕೆಂಗಯ್ಯ ಸಂದರ್ಶನ
ಅಮೆರಿಕದ ನ್ಯೂ ಜೆರ್ಸಿ ರಾಜ್ಯದ ಅಟ್ಲಾಂಟಿಕ್ ಸಿಟಿಯಲ್ಲಿ ನಡೆಯಲಿರುವ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಸಿದ್ಧತೆ ಕೂಡ ಅಷ್ಟೇ ಭರದಿಂದ ಸಾಗಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಜಾಗತಿಕ ಕನ್ನಡದ ಹಬ್ಬ ಯಶಸ್ವಿಯಾಗಲೆಂದು ನೂರಾರು ಸ್ವಯಂಸೇವಕ ಕನ್ನಡಿಗರು ಅಹರ್ನಿಶಿ ದುಡಿಯುತ್ತಿದ್ದಾರೆ.
ಈ ಹಬ್ಬ ಆಯೋಜನಗೊಳಿಸಲು ಹಲವಾರು ಮುಖ್ಯ ಸಮಿತಿಗಳನ್ನು ರಚಿಸಲಾಗಿದ್ದು, ಪ್ರಚಾರ (publicity), ಧನ ಸಂಗ್ರಹಣೆ, ಮಾರ್ಕೆಟಿಂಗ್ ಸಮಿತಿಗಳೂ ಕನ್ನಡಾಂಬೆಯ ಸೇವೆಯಲ್ಲಿ ನಿರತವಾಗಿವೆ. ಈ ತಂಡಗಳ ಕಾರ್ಯವೈಖರಿ ಮತ್ತು ನಿಭಾವಣೆಯ ಸವಾಲುಗಳ ಬಗ್ಗೆ ಈ ತಂಡಗಳ ಮುಂದಾಳತ್ವ ವಹಿಸಿರುವ ಧರ್ಮದರ್ಶಿ ಮಂಡಳಿ(Board of Trustees)ಯ ಸದಸ್ಯ, ಅಕ್ಕ ಸಮ್ಮೇಳನದ ಕಾರ್ಯದರ್ಶಿಯಾಗಿರುವ ಧನಂಜಯ ಕೆಂಗಯ್ಯ ಅವರೊಡನೆ ಒಂದು ಸಂವಾದ. [ಅಕ್ಕ ಸಮ್ಮೇಳನದ ಸೂತ್ರಧಾರಿ ಶರತ್ ಭಂಡಾರಿ ಸಂದರ್ಶನ]
ಪವನ್ : ಧನಂಜಯ ಅವರೆ ನಿಮ್ಮ ಸಮಯಕ್ಕೆ ಧನ್ಯವಾದಗಳು! ಮೊದಲನೆಯದಾಗಿ ನೀವು ಅಕ್ಕ ಪ್ರಚಾರ, ಧನ ಸಂಗ್ರಹ, ಅಕ್ಕ ಸಮ್ಮೇಳನದ ಕಾರ್ಯದರ್ಶಿ ಹಾಗು ಮಾರ್ಕೆಟಿಂಗ್ ಸಮಿತಿಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೀರ. ಅದಕ್ಕಾಗಿ ಅಭಿನಂದನೆಗಳು!
ಧನಂಜಯ : ಧನ್ಯವಾದಗಳು
ಪವನ್ : ಮೊದಲು ಪ್ರಚಾರದ (Publicity) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಈ ಒಂಭತ್ತನೆಯ ಅಕ್ಕ ಸಮ್ಮೇಳನದ ಪ್ರಚಾರಕ್ಕೆ ಯಾವ ಯೋಜನೆಗಳನ್ನು ಹಾಕಿ ಕೊಂಡಿದ್ದೀರ ಹಾಗು ಅವುಗಳನ್ನು ಹೇಗೆ ಕಾರ್ಯರೂಪಕ್ಕೆ ತರುತಿದ್ದೀರ?
ಧನಂಜಯ : ನಾವು ನಮ್ಮ ಪ್ರಚಾರವನ್ನು ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದೀವಿ. ಎಲ್ಲಾ ಕನ್ನಡ ಕೂಟಗಳ ಡೇಟಾಬೇಸ್ ಗಳನ್ನು ಬಳಸಿದ್ದೀವಿ. ಈ ಕೂಟಗಳ ಅಧ್ಯಕ್ಷರುಗಳನ್ನ ಒಟ್ಟುಗೂಡಿಸಿ ಅವರೊಡನೆ ಚರ್ಚಿಸಿ ಎಲ್ಲ ಸದಸ್ಯರನ್ನು ಹೇಗೆ ತಲುಪಬೇಕು ಎಂದು ಯೋಜನೆ ಹಾಕಿಕೊಂಡಿದ್ದೀವಿ. ಸಂಪರ್ಕ ಮಾಹಿತಿಗಳನ್ನು ಸಂಗ್ರಹಿಸಿದ್ದೀವಿ.['ಅಕ್ಕ' ಕಾರ್ಯನಿರ್ವಾಹಕ ಸಮಿತಿ ಜೊತೆ ಸಂದರ್ಶನ]
ಪವನ್ : ನೀವು ಪ್ರಚಾರಕ್ಕಾಗಿ ಯಾವ ಮಾಧ್ಯಮಗಳನ್ನು ಬಳಸಿದ್ದೀರಿ? ಹೇಗೆ ಬಳಸಿದ್ದೀರಿ?
ಧನಂಜಯ : ನಾವು ಎಲ್ಲಾ ಮಾಧ್ಯಮಗಳನ್ನು ಬಳಸಿದ್ದೀವಿ. ಪತ್ರಿಕೆಗಳಲ್ಲಿ ಅಕ್ಕ ಸಮ್ಮೇಳನದ ಬಗ್ಗೆ ಮಾಹಿತಿಗಳನ್ನು ಕೊಟ್ಟಿದ್ದೀವಿ. Whatsapp groupಗಳನ್ನ ಬಳಸಿದ್ದೀವಿ, ಫೇಸ್ ಬುಕ್ ಪುಟವನ್ನ ಮಾಡಿದ್ದೀವಿ.
ಪವನ್ : ನಿಮ್ಮ ಅಭಿಪ್ರಾಯದಲ್ಲಿ, ಈ ರೀತಿಯ ಒಂದು ದೊಡ್ಡ ಉತ್ಸವಕ್ಕೆ ಪ್ರಚಾರದ ಪಾತ್ರ ಏನು?
ಧನಂಜಯ : ನಾವು ಎಷ್ಟೇ ದೊಡ್ಡ ಉತ್ಸವ ಮಾಡಿದರೂ, ಅದಕ್ಕೆ ಮುಖ್ಯ ಎಂದರೆ ಜನರು ಬರಬೇಕು, ಭಾಗವಹಿಸಬೇಕು. ಜನ ಬಂದಷ್ಟೂ ಕಳೆ. ಜನ ಮರಳೋ ಜಾತ್ರೆ ಮರಳೋ ಅಂತ ಹೇಳುತ್ತಾರಲ್ಲ ಹಾಗೆ. ಪ್ರಚಾರಕ್ಕಾಗಿಯೇ : Creative Media, Video, Social Media, ಜಾಲತಾಣ ತಂಡಗಳಿವೆ.
Mobile Apps ಮಾಡಿದ್ದೀವಿ, ಜಾಲತಾಣಗಳನ್ನ ಮಾಡಿದ್ದೀವಿ. ಹಲವಾರು ಸ್ವಯಂಸೇವಕರು ವಿವಿಧ ರೀತಿಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ಸತ್ಯ ಪ್ರಸಾದ್, ನೀವು (ಪವನ್ ನಾಗರಾಜ್) ಪತ್ರಿಕೆಗಳಲ್ಲಿ ಅಂಕಣ ಬರೆದಿದ್ದೀರ, ಅನುಪಮ ಬೆನಕಟ್ಟಿ ಅವರು ಪ್ರಚಾರ ವಿಡಿಯೋಗಳನ್ನ ಮಾಡಿದ್ದಾರೆ, ಅರುಣ್ ಕುಮಾರ್ ಮತ್ತು ಗಗನ್ ಜಾಲತಾಣವನ್ನ ನಿರ್ಮಾಣ ಮಾಡಿದ್ದಾರೆ, ಪ್ರಶಾಂತ್ ಹಾಗು ಹರಿದಾಸ್ ಅವರುಗಳು ಕರಪತ್ರ ವಿನ್ಯಾಸ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಚಾರದ ಚೇರ್ ಆಗಿರುವ ಸುರೇಶ್ ಕೃಷ್ಣಯ್ಯ ಅವರೊಂದಿಗೆ ರವಿ ಬೋರೇಗೌಡ, ಸುಬ್ಬು ಪದ್ಮನಾಭ್ ಹಾಗು ಲಕ್ಷ್ಮಿ ರಾವ್ ಇವರುಗಳು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ.
ಪವನ್ : ಈಗ ಧನ ಸಂಗ್ರಹಣದ ಬಗ್ಗೆ ಮಾತನಾಡೋಣ. ಇದರಲ್ಲಿ ನೀವು ಯಾವ ರೀತಿಯ ಸವಾಲುಗಳನ್ನ ಎದುರಿಸಿದ್ದೀರ? ಅವುಗಳನ್ನ ಹೇಗೆ ನಿಭಾಯಿಸಿದ್ದೀರ?[ಪ್ರಪ್ರಥಮ ಬಾರಿಗೆ ಅಕ್ಕ ಸಮ್ಮೇಳನದಲ್ಲಿ ಒಂದು ದಿನದ ನೋಂದಾವಣಿ!]
ಧನಂಜಯ : ನಮ್ಮ ಕಾರ್ಯಕ್ರಮದ ಒಟ್ಟು ಬಜೆಟ್ 1.2 ಮಿಲಿಯನ್ ಡಾಲರ್ ಗಳು. ಈ ಮೊತ್ತವನ್ನ ಸಂಗ್ರಹಿಸಲು ವಾಣಿಜ್ಯೋದ್ಯಮಿಗಳನ್ನ ಮತ್ತು ಇಂಡಿವಿಜುಯಲ್ ಡೋನರ್ ಗಳನ್ನ ಸಂಪರ್ಕಿಸಿ ಅಕ್ಕದ ವಿವಿಧ ಪ್ಯಾಕೇಜ್ ಗಳನ್ನ ವಿವರಿಸಿದೆವು. ಉದಾಹರಣೆಗೆ, ಅಕ್ಕ ಸ್ಮರಣ ಸಂಚಿಕೆ ಆಗಿರಬಹುದು, ಸಾಹಿತ್ಯ ಸಮಿತಿ ಆಗಿರಬಹುದು, ಆಧ್ಯಾತ್ಮಿಕ ಸಮಿತಿ ಆಗಿರಬಹುದು, ಡಿನ್ನರ್ ಫೋರಮ್ ಆಗಿರಬಹುದು. ಹೀಗೆ ಪ್ರತ್ಯೇಕ ವಿಭಾಗಕ್ಕೆ ಧನ ಸಹಾಯ ಮಾಡಿದ್ದಾರೆ.
ಸಮ್ಮೇಳನದ ನೋಂದಣಿಯಿಂದ, ಮತ್ತು ಮಾರಾಟಗಾರರ ಬೂತುಗಳಿಂದಲೂ ಸಹ ಆದಾಯವಾಗಿದೆ. ಅದಲ್ಲದೆ ನಮ್ಮ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೂ ಎಂದಿನಂತೆ ಆರ್ಥಿಕ ಸಹಕಾರ ಸಿಕ್ಕಿದೆ. ಇವರಿಗೆಲ್ಲಾ ನನ್ನ ಧನ್ಯವಾದಗಳು. ಇಂತ ಒಂದು ದೊಡ್ಡ ಕೆಲಸವನ್ನ ನಿಭಾಯಿಸುವುದಕ್ಕೆ ಸ್ವತ: ಅಕ್ಕ ಅಧ್ಯಕ್ಷ ರಾಜ್ ಪಾಟಿಲ್ ಮತ್ತು ಸುರೇಶ್ ಆರ್ಯ ಹಾಗು ಚಂದ್ರು ಆರಾಧ್ಯ ಅವರುಗಳು ಬಹಳಷ್ಟು ಕೆಲಸ ಮಾಡಿದ್ದಾರೆ.
ಪವನ್ : ಕಡೆಯದಾಗಿ ಕನ್ನಡಿಗರಿಗೆ ಅಕ್ಕ ಸಮ್ಮೇಳನದ ಪ್ರಚಾರ ಮತ್ತು ಧನ ಸಂಗ್ರಹಣೆಯ ಸಮಿತಿಯ ಪರವಾಗಿ ನಿಮ್ಮ ಸಂದೇಶ ಏನು?
ಧನಂಜಯ : ನಮ್ಮ ಈ ಸಮ್ಮೇಳನದ ಹಿಂದೆ ನೂರಾರು ಜನರ ಶ್ರಮ ಇದೆ. ಸುಮಾರು 500 ಸ್ವಯಂಸೇವಕರು ಒಂದು ವರ್ಷದಿಂದ ದುಡಿಯುತ್ತಲಿದ್ದಾರೆ. ಇವರೆಲ್ಲ ಕೇವಲ ಕನ್ನಡ ಮತ್ತು ಕನ್ನಡಿಗರ ಮೇಲಿನ ಪ್ರೀತಿಯಿಂದ ಪರಿಶ್ರಮ ಪಡುತ್ತಲಿದ್ದಾರೆ. ಇದು ಕನ್ನಡಿಗರ ಹಬ್ಬ. ಎಲ್ಲಾ ಕನ್ನಡಿಗರು ಬರಬೇಕು, ಉತ್ಸಾಹದಿಂದ ಭಾಗವಹಿಸಬೇಕು, ನಮ್ಮೆಲ್ಲ ಕಾರ್ಯಕ್ರಮಗಳನ್ನು ನೋಡಬೇಕು. ಅಟ್ಲಾಂಟಿಕ್ ಸಿಟಿಗೆ ಬನ್ನಿ. ಅಕ್ಕ ಸಮ್ಮೇಳನವನ್ನು ಯಶಸ್ವಿಯಾಗಿಸಿ.