ಲಡಾಖ್ ಪ್ರಸ್ತುತ ಸ್ಥಿತಿ ತುಂಬಾ ಗಂಭೀರವಾಗಿದೆ: ಸಚಿವ ಜೈ ಶಂಕರ್
ನವದೆಹಲಿ, ಸೆಪ್ಟೆಂಬರ್ 08: ಲಡಾಖ್ನಲ್ಲಿರುವ ಪ್ರಸ್ತುತ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ತಿಳಿಸಿದ್ದಾರೆ. ಸ್ನೇಹ ಸಂಬಂಧಕ್ಕಾಗಿ ಗಡಿ ಸಂಬಂಧವನ್ನು ಕಳೆದುಕೊಳ್ಳಲು ಖಂಡಿತ ಸಾಧ್ಯವಿಲ್ಲ. ಈ ಬಗ್ಗೆ ನಾನು ಈ ಹಿಂದೆಯೇ ಹೇಳಿದ್ದೆ. ಆದರೆ ದುರಾದೃಷ್ಟಾವಶಾತ್ ಈ ಘಟನೆ ನಡೆದು ಹೋಗಿದೆ.
ಲಡಾಖ್ ಸಮಸ್ಯೆ ತಂಬಾ ಗಂಭೀರವಾದದ್ದು, ಈ ಬಗ್ಗೆ ತುಂಬಾ ಆಳವಾದ ರಾಜತಾಂತ್ರಿಕ ಚರ್ಚೆ ಅಗತ್ಯವಿದೆ. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಲ್ಪಿಸದಿದ್ದರೆ, ಉಳಿದ ಇತರೆ ಸಂಬಂಧಗಳು ಕೂಡ ಅದೇ ಹಾದಿಯಲ್ಲೇ ಮುಂದುವರಿಯುತ್ತವೆ, ಏಕೆಂದರೆ ಸ್ಪಷ್ಟವಾಗಿ ಶಾಂತಿ ಮತ್ತು ನೆಮ್ಮದಿ ಸಂಬಂಧಕ್ಕೆ ಆಧಾರವಾಗಿದ್ದು, ಶಾಂತಿ ಸ್ಥಾಪನೆಯಿಂದ ಮಾತ್ರ ಪ್ರಾದೇಶಿಕ ಸಮೃದ್ಧಿ ಸಾಧ್ಯ.
ನಾವು ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿಲ್ಲ: ಭಾರತ ಸ್ಪಷ್ಟನೆ
ಚೀನಾ ವಿದೇಶಾಂಗ ಸಚಿವರೊಂದಿಗೆ ತುಂಬಾ ಮುಖ್ಯವಾದ ಚರ್ಚೆ ನಡೆಯಲಿದೆ. ಗಂಭೀರ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ. ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಗುರುವಾರ ಪರಿಹಾರ ದೊರಕುವ ಆಶಾವಾದವೊಂದು ಗೋಚರಿಸುತ್ತಿದೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಚೀನಾದ ವಿದೇಶ ಮಂತ್ರಿ ವಾಂಗ್ ಯಿ ಅವರು ರಷ್ಯಾದಲ್ಲಿ ಸಭೆ ಸೇರಿ ಈ ಕುರಿತು ಮಾತುಕತೆ ನಡೆಸಲಿದ್ದಾರೆ.
ಮಾಸ್ಕೋಗೆ ತೆರಳಲಿರುವ ಜೈ ಶಂಕರ್
ಜೈಶಂಕರ್ ಅವರು ಮಂಗಳವಾರ ಸಂಜೆ ಮಾಸ್ಕೋದಲ್ಲಿ ಇಳಿಯಲಿದ್ದಾರೆ. ಅವರ ಜತೆಗೆ ಗುರುವಾರ ನಿಗದಿಯಾಗಿರುವ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ರಾತ್ರಿ ಮಾಸ್ಕೋಗೆ ಆಗಮಿಸುವುದಾಗಿ ಚಿನಾದ ವಾಂಗ್ ಯಿ ಅವರು ಖಚಿತಪಡಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರ ವಿಚಾರ
ಈ ನಡುವೆ, ಲಡಾಖ್ ಸಂಘರ್ಷ ಹಾಗೂ ದಕ್ಷಿಣ ಚೀನಾ ಸಮುದ್ರ ವಿಚಾರವನ್ನು ಇಟ್ಟು ಕೊಂಡು ಚೀನಾದಲ್ಲಿ ರಾಷ್ಟ್ರೀಯ ಭಾವ ಉದ್ದೀಪನಗೊಳಿಸಲು ಕಮ್ಯುನಿಸ್ಟ್ ಪಕ್ಷದ ಸರ್ಕಾರ ಪ್ರಯತ್ನಿಸಿತ್ತು. ಅದರಿಂದ ಪ್ರಯೋಜನವಾಗಿಲ್ಲ. ಹೀಗಾಗಿ ಚೀನಾ ನಿಲುವು ಬದಲಾಗಿದೆ ಎಂದೂ ಹೇಳಲಾಗುತ್ತಿದೆ.
ಸೇನೆ ಹಿಂತೆಗೆಸುವ ಪ್ರಯತ್ನ
ಇನ್ನು ಈ ಬಹುಮುಖ್ಯ ಚರ್ಚೆ ವೇಳೆ ಗಡಿಯ ಮುಂಚೂಣಿ ಪ್ರದೇಶಗಳಿಂದ ಸೇನೆ ಹಿಂತೆಗೆದುಕೊಳ್ಳುವ ಮೂಲಕ ಸಂಘರ್ಷದ ವಾತಾವರಣ ತಗ್ಗಿಸಲು ಉಭಯ ದೇಶಗಳು ಮುಂದಾಗುವ ಸಾಧ್ಯತೆ ಇದೆ. ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಚೀನಾದ ರಕ್ಷಣಾ ಸಚಿವ ವೆ ಫೆಂಗೆ ಅವರ ನಡುವೆ ಕಳೆದ ಶುಕ್ರವಾರ ಮುಖಾಮುಖಿ ಮಾತುಕತೆ ನಡೆದಿತ್ತಾದರೂ, ಬಿಕ್ಕಟ್ಟಿಗೆ ಮಂಗಳವಾಡುವಂತಹ ಫಲಪ್ರದ ಬೆಳವಣಿಗೆ ನಡೆದಿರಲಿಲ್ಲ. ಗಡಿಯಲ್ಲಿ ಕಳೆದ ಮೇ ತಿಂಗಳಿನಿಂದ ಸಂಘರ್ಷ ಇದೆ.
50 ವರ್ಷಗಳ ಮೊದಲ ಬಾರಿಗೆ ಯೋಧರು ಬಲಿ
ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ಉಭಯ ದೇಶಗಳ ಯೋಧರು ಘರ್ಷಣೆಗೆ ಬಲಿಯಾಗಿದ್ದಾರೆ. ಹಲವು ಸುತ್ತಿನ ಮಾತುಕತೆ ನಡೆದರೂ ಬಿಕ್ಕಟ್ಟು ಇತ್ಯರ್ಥವಾಗಿಲ್ಲ. ಈ ನಡುವೆ, ಆ.29 - 30ರಂದು ಚೀನಾ ಪಡೆಗಳು ಮತ್ತೆ ಭಾರತದತ್ತ ನುಗ್ಗಲು ಯತ್ನಿಸಿದಾಗ ಭಾರತೀಯರು ಹಿಮ್ಮೆಟ್ಟಿಸಿದ ಬೆಳವಣಿಗೆ ಬಳಿಕ ಗಡಿಯಲ್ಲಿ ಯುದ್ದ ಸದೃಶ ವಾತಾವರಣ ಕಂಡುಬರುತ್ತಿದೆ.