ನಾವು ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿಲ್ಲ: ಭಾರತ ಸ್ಪಷ್ಟನೆ
ನವದೆಹಲಿ, ಸೆಪ್ಟೆಂಬರ್ 08: ಭಾರತೀಯ ಸೇನೆಯು ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಅಕ್ರಮವಾಗಿ ವಾಸ್ತವಿಕ ನಿಯಂತ್ರಣ ರೇಖೆ ಉಲ್ಲಂಘಿಸಿಲ್ಲ ಎಂದು ಭಾರತೀಯ ಸೇನೆಯು ಚೀನಾಗೆ ಪ್ರತ್ಯುತ್ತರ ನೀಡಿದೆ.
ಪೂರ್ವ ಲಡಾಖ್ನ ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಭಾರತ-ಚೀನಾ ಪಡೆಗಳ ಮಧ್ಯ ಸೋಮವಾರ ರಾತ್ರಿ ಗುಂಡಿನ ಚಕಮಕಿ ನಡೆದಿದೆ.
ಭಾರತೀಯ ಸೇನಾ ಸಿಬ್ಬಂದಿ ನಡೆಸಿದ ಎಚ್ಚರಿಕೆ ದಾಳಿ ಪ್ರತಿಯಾಗಿ ಕ್ರಮ ಕೈಗೊಳ್ಳಬೇಕಾಯಿತು ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಹೇಳಿತ್ತು.

ಆದರೆ ಇದಕ್ಕೆ ಭಾರತವು ತಕ್ಕ ಉತ್ತರವನ್ನು ನೀಡಿದ್ದು, ನಾವು ನೈಜ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ.ಪೀಪಲ್ಸ್ ಲಿಬರೇಷನ್ ಆರ್ಮಿಯು ಎಲ್ಎಸಿಯಲ್ಲಿ ನಮ್ಮ ಸೇನೆ ಇದ್ದಲ್ಲಿಗೆ ಬರಲು ಯತ್ನ ನಡೆಸಿತ್ತು, ಅದನ್ನು ತಡೆದಿದ್ದಕ್ಕೆ ನಮ್ಮ ವಿರುದ್ಧ ಫೈರಿಂಗ್ ಮಾಡಿದೆ. ಅವರ ಉದ್ದೇಶ ನಮ್ಮ ಸೈನಿಕರನ್ನು ಹೆದರಿಸುವುದಾಗಿತ್ತು ಎಂಬುದು ತಿಳಿದುಬಂದಿದೆ.
ಪ್ಯಾಂಗಾಂಗ್ ಸರೋವರದ ಬಳಿ ಚೀನಾ ಸೇನೆ ಮತ್ತೊಮ್ಮೆ ಯಥಾಸ್ಥಿತಿ ಉಲ್ಲಂಘಿಸುವ ಪ್ರಯತ್ನ ಮಾಡಿದೆ. ಆದರೆ ಚೀನಾದ ಕಡೆಯಿಂದ ಇಂತಹದೊಂದು ದುಸ್ಸಾಹಸವನ್ನು ಅಂದಾಜಿಸಿದ್ದ ಯೋಧರು ಈ ಯತ್ನವನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಭಾರತದ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಆಗಸ್ಟ್ 31 ರಂದು ತಿಳಿಸಿದ್ದರು.
ಇತ್ತೀಚೆಗಷ್ಟೇ ಭಾರತ ಮತ್ತು ಚೀನಾ ಗಡಿಯಲ್ಲಿ ಸೈನಿಕರ ನಡುವೆ ಸಂಘರ್ಷ ಉಂಟಾಗಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆ ಮರೆಯುವ ಮುನ್ನವೇ ಮತ್ತೊಮ್ಮೆ ಚೀನಾದ ಸೇನೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದೆ ಎಂಬ ಆತಂಕಕಾರಿ ಮಾಹಿತಿಗಳು ಕೇಳಿಬರುತ್ತಿವೆ. ಈಗಾಗಲೇ ಚೀನಾದ ಸೇನೆ ಗಡಿಯಲ್ಲಿ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿದೆ ಎಂಬ ಬಗ್ಗೆ ದಟ್ಟವಾದ ಅನುಮಾನಗಳು ಮೂಡಿವೆ.
ಇದೇ ವೇಳೆ ಈಗ ಭಾರತೀಯ ಸೇನೆಯಿಂದಲೇ ಚೀನಾ ಸೇನೆ ಪಂಗೊಗನ್ ಸರೋವರದ ದಕ್ಷಿಣ ಭಾಗದ ಬಳಿ ಮತ್ತೆ ಒಳನುಸುಳುವ ಪ್ರಯತ್ನ ಮಾಡುತ್ತಿದೆ ಎಂದು ಗೊತ್ತಾಗಿದೆ.
ಚೀನಾ ಸೇನೆ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಈಗ ಗಡಿ ಗಸ್ತಿನಲ್ಲಿ ನಿಯೋಜಿತರಾಗಿರುವ ಸೈನಿಕರಿಗೆ ಸೂಚನೆ ನೀಡಲಾಗಿದೆ ಎಂದು ಭಾರತೀಯ ಸೇನಾ ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications