ಆರ್ಸಿಬಿ ಫೈನಲ್ ಮ್ಯಾಚ್ ನೋಡಲು ಲಂಡನ್ನಿಂದ ಬಂದು, ಮರಳುವಾಗ ಭಾರತಕ್ಕೊಂದು ಲವ್ ಲೆಟರ್ ಬರೆದ ಮಹಿಳೆ
ಆರ್ಸಿಬಿ ಫೈನಲ್ ಮ್ಯಾಚ್ ನೋಡುವ ಸಲುವಾಗಿ ಎರಿಕಾ ಮೋರಿಸ್ ಮೂರು ದಿನಗಳ ಪ್ರವಾಸ ಮಾಡಿಕೊಂಡು ಯುಕೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದಾಗ, ಒಳ್ಳೆಯ ಮ್ಯಾಚ್ ನೋಡುವ ನಿರೀಕ್ಷೆ ಮಾತ್ರ ಅವರಲ್ಲಿ ಇದ್ದದು. ಆದರೆ ಮ್ಯಾಚ್ ಮುಗಿಸಿಕೊಂಡು ವಾಪಾಸಾಗುವ ಹೊತ್ತಿಗೆ ಅವರು ಮ್ಯಾಚ್ ಬಿಟ್ಟು ಬೇರೆಯದ್ದೇ ನೆನಪುಗಳ ಬುತ್ತಿ ಕಟ್ಟಿಕೊಂಡು ವಿಮಾನ ಏರಿದ್ದಾರೆ. ಇದೇ ಮೊದಲ ಬಾರಿಗೆ ಭೇಟಿ ನೀಡಿದ ಅಪರಿಚಿತ ದೇಶದಲ್ಲಿ ತನಗೆ ಸಿಕ್ಕ ಸ್ವಾಗತ ಆತಿಥ್ಯಕ್ಕೆ ಬೆರಗಾಗಿ ಹೋಗಿದ್ದಾರೆ.
ಎರಿಕಾ ಮೋರಿಸ್ ಹರ್ಟ್ಫೋರ್ಡ್ಶೈರ್ನ ಕ್ರಿಕೆಟ್ ಪ್ರೇಮಿ. ಇವರು ಭಾರತ್ಕೆ ಭೇಟಿ ನೀಡಿದ ವೇಳೆ ತನಗಾದ ಅನುಭವದ ಬಗ್ಗೆ X ಖಾತೆಯಲ್ಲಿ ಬರೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟವನ್ನು ನೋಡುವ ಸಲುವಾಗಿ 4,275 ಮೈಲು (ಸುಮಾರು 6,880 ಕಿಮೀ) ದಾಟಿ ಬಂದಿರುವುದನ್ನು ಹೇಳಿಕೊಂಡಿದ್ದಾರೆ. RCB ಗುಜರಾತ್ ಟೈಟಾನ್ಸ್ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿ, ಸತತ ಎರಡನೇ ಐಪಿಎಲ್ ಟ್ರೋಫಿ ಗೆದ್ದಿರುವುದು ತನ್ನ ಪ್ರಯಾಣದ ನೆನಪನ್ನು ಇನ್ನಷ್ಟು ಸಿಹಿಯಾಗಿಸಿದೆ ಎಂದು ಹೇಳಿದ್ದಾರೆ. ತಾನು ಮರಳಿ ತನ್ನೂರು ಸೇರಿದರೂ ಭಾರತದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

"ಕೇವಲ 3 ದಿನಗಳ ಹಿಂದೆ ಒಂಟಿಯಾಗಿ ಭಾರತಕ್ಕೆ ಪ್ರಯಾಣ ಬೆಳೆಸಿದೆ. ಅಲ್ಲಿದ್ದದ್ದು ಕೇವಲ 72 ಗಂಟೆಗಳ ಕಾಲ ಮಾತ್ರ. ಈ ಪ್ರವಾಸದಲ್ಲಿ ದಣಿವು, ನಿದ್ರೆಯ ಕೊರತೆ ಮತ್ತು ಹಿಂದೆಂದೂ ಭೇಟಿ ನೀಡದ ದೇಶಕ್ಕೆ ತೆರಳುತ್ತಿರುವ ಆತಂಕ ಎಲ್ಲವೂ ಸೇರಿತ್ತು. ಆದರೆ ಇಲ್ಲಿಗೆ ಬಂದ ನಂತರ ಸಿಕ್ಕ ಅನುಭವ ಎಲ್ಲಾ ನಿರೀಕ್ಷೆಗಳನ್ನು ಮೀರಿತ್ತು. ಕ್ರಿಕೆಟ್ಗಿಂತ ಬಹಳ ಹೆಚ್ಚಿನದ್ದನ್ನು ನಾನು ಭಾರತದಲ್ಲಿ ಕಂಡುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಭಾರತದಲ್ಲಿ ತಾನು ಇದ್ದಷ್ಟೂ ಸಮಯ ಅಪರಿಚಿತರು ಪದೇ ಪದೇ ಸಹಾಯ ಮಾಡಲು ಹೇಗೆ ಮುಂದೆ ಬಂದರು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು, ಸಲಹೆಗಳನ್ನು ನೀಡುವುದು, ಸರಿಯಾದ ಸ್ಥಳಗಳನ್ನು ಸುರಕ್ಷಿತವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವವರೆಗೆ ಹೇಗೆ ಸಹಾಯ ಮಾಡಿದರು ಎನ್ನುವುದರ ಬಗ್ಗೆ ಬರೆದುಕೊಂಡಿದ್ದಾರೆ.
ಮ್ಯಾಚ್ ಟಿಕೆಟ್ಗಳನ್ನು ವ್ಯವಸ್ಥೆ ಮಾಡಲು ಸಹಾಯ ಮಾಡಿದ ಮತ್ತು ಪ್ರಯಾಣದ ಸಮಯದಲ್ಲಿ ತನಗೆ ಸಹಾಯ ಮಾಡಿದ ಇಬ್ಬರು ಆರ್ಸಿಬಿ ಅಭಿಮಾನಿಗಳಿಗೆ ಅವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರಲ್ಲಿ ಒಬ್ಬರು ಊಟಕ್ಕೆ ಮನೆಗೆ ಆಹ್ವಾನಿಸಿರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಮ್ಯಾಚ್ ನೋಡಲು ಬಂದವಳಿಗೆ ಇಂಥ ಸುಂದರ ಅನುಭವ ಗಳನ್ನು ಕಟ್ಟಿ ಕೊಟ್ಟ ನಿಮಗೆ ಕೃತಜ್ಞತೆ ಎಂದು ಬರೆದಿದ್ದಾರೆ.
ಇನ್ನು ಕ್ರಿಕೆಟ್ ಬಗ್ಗೆ ಮಾತನಾಡುತ್ತಾ, "ಆರ್ಸಿಬಿ ಸುತ್ತಲಿನ ಗದ್ದಲ, ಉತ್ಸಾಹ, ಬಣ್ಣ, ಶಕ್ತಿಯನ್ನು ನೋಡುತ್ತಿದ್ದರೆ ಮ್ಯಾಚ್ ಅನ್ನುವುದಕ್ಕಿಂತ ಬದುಕಿನ ಮತ್ತು ಉಸಿರಾಟದ ಭಾಗವಾಗಿರುವಂತೆ ಭಾಸವಾಯಿತು ಎಂದು ಹೇಳಿದ್ದಾರೆ.
ಪ್ರವಾಸದ ಅಂತ್ಯದ ವೇಳೆಗೆ, ಪಂದ್ಯದ ದಿನದ ಅನುಭವಕ್ಕಿಂತ ಹೆಚ್ಚಿನದ್ದನ್ನು ತೆಗೆದುಕೊಂಡು ಹಿಂತಿರುಗುತ್ತಿರುವುದಾಗಿ ಹೇಳಿದ್ದಾರೆ. ಯಾವುದೋ ಒಂದು ಅನುಭವವನ್ನು ಬೆನ್ನಟಿಕೊಂಡು ಭಾರತಕ್ಕೆ ಭೇಟಿ ನೀಡುತ್ತದ್ದೇನೆ ಎಂದು ಭಾವಿಸಿದ್ದೆ. ಆದರೆ ನನ್ನ ಜೀವದ ಒಂದು ಭಾಗವನ್ನು ಅಲ್ಲಿಯೇ ಬಿಟ್ಟು ಬಂದಿರುವುದಾಗಿ ಈಗ ಅನ್ನಿಸುತ್ತಿದೆ ಎಂದು ಮನದ ತೊಳಲಾಟವನ್ನು ಬಣ್ಣಿಸಿದ್ದಾರೆ. ಇದು ಭಾರತಕ್ಕೆ ವಿದಾಯವಲ್ಲ, ಮತ್ತೊಮ್ಮೆ ಭೇಟಿಯಾಗುವ ಭರವಸೆಯೊಂದಿಗೆ ಹಿಂದಿರುಗುವುದಾಗಿ ಪೋಸ್ಟ್ಗೆ ಸಹಿ ಹಾಕಿದ್ದಾರೆ.
ಆ ಪೋಸ್ಟ್ ಮಾಡಿದಾಗಿನಿಂದ ಆನ್ಲೈನ್ನಲ್ಲಿ ಅನೇಕರ ಹೃದಯಗಳನ್ನು ಗೆದ್ದಿದೆ. ಕ್ರಿಕೆಟ್ ಅಭಿಮಾನಿಯಾಗಿ ಅವರ ಸಮರ್ಪಣೆ ಮತ್ತು ನಮ್ಮ ದೇಶಕ್ಕೆ ಅವರು ನೀಡಿರುವ ಸಣ್ಣ ಭೇಟಿಯ ವೇಳೆ ಅನುಭವಿಸಿದ ಆತ್ಮೀಯತೆಯನ್ನು ಅನೇಕರು ಶ್ಲಾಘಿಸಿದ್ದಾರೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications