ಗಂಡ-ಹೆಂಡ್ತಿ ಜಗಳ ಕಾಮನ್, ಆಗಲೇ ಬಾರದು ಅಂತಿದ್ರೆ ಈ ಏಳು ಸೂತ್ರ ಫಾಲೋ ಮಾಡಿ ಪ್ಲೀಸ್
ಮದುವೆ ಎಂದರೆ ಕೇವಲ ಇಬ್ಬರು ವ್ಯಕ್ತಿಗಳು ಒಂದಾಗುವುದಲ್ಲ. ಬದಲಾಗಿ ಜೀವನದುದ್ದಕ್ಕೂ ಎಲ್ಲಾ ಪರಿಸ್ಥಿತಿಗಳಲ್ಲಿಯೂ ಪರಸ್ಪರ ಜೊತೆಯಾಗಿ ಹೆಜ್ಜೆ ಹಾಕುವ ಪವಿತ್ರ ಬಂಧ. ಮದುವೆ ಗಂಡು ಮತ್ತು ಹೆಣ್ಣು ಇಬ್ಬರ ಜೀವನದಲ್ಲಿಯೂ ಬಹಳ ಪ್ರಾಮುಖ್ಯತೆ ಪಡೆದಿದೆ. ಮದುವೆ ಅಂದರೆ ಕೇವಲ ಸಂತೋಷ ಅಲ್ಲ, ನಂತರ ಬರುವ ಎಲ್ಲಾ ಜವಾಬ್ದಾರಿಗಳು, ಸಂತೋಷಗಳು, ಕಷ್ಟಗಳು ಮತ್ತು ಸವಾಲುಗಳನ್ನು ಒಟ್ಟಿಗೆ ಎದುರಿಸಬೇಕಾಗುತ್ತದೆ. ಪರಸ್ಪರ ಗೌರವ, ಪ್ರೀತಿ, ವಿಶ್ವಾಸ ಮತ್ತು ತಿಳುವಳಿಕೆ ಇದ್ದರೆ ಮಾತ್ರ ಸಂತೋಷದ ದಾಂಪತ್ಯ ಜೀವನವನ್ನು ಅನುಭವಿಸಬಹುದು.
ಪರಸ್ಪರ ಬೆಂಬಲವಾಗಿ ನಿಲ್ಲುವುದು:
ನಮ್ಮ ಭಾರತೀಯ ವಿವಾಹ ವ್ಯವಸ್ಥೆಯಲ್ಲಿ ಸಪ್ತಪದಿಗೆ ಹೆಚ್ಚಿನ ಮಹತ್ವವಿದೆ. ಮದುವೆ ದಿನ ಇಡುವ ಏಳು ಹೆಜ್ಜೆ ಏಳೇಳು ಜನ್ಮದ ಸಂಬಂಧವನ್ನು ಸಂಕೇತಿಸುತ್ತದೆ ಎನ್ನಲಾಗಿದೆ. ಈ ಏಳು ಹೆಜ್ಜೆಗಳು ಪತಿ ಮತ್ತು ಪತ್ನಿ ತಮ್ಮ ಜೀವನದುದ್ದಕ್ಕೂ ಅನುಸರಿಸಬೇಕಾದ ಕೆಲವು ಪ್ರಮುಖ ಮೌಲ್ಯಗಳನ್ನು ಒತ್ತಿ ಹೇಳುತ್ತವೆ. ಅದರಲ್ಲಿ ಮೊದಲನೆಯದ್ದು, ಸುಖವಿರಲಿ ನೋವಿರಲಿ ಇಬ್ಬರೂ ಒಟ್ಟಿಗೆ ಹಂಚಿಕೊಳ್ಳಬೇಕು. ಜೀವನದಲ್ಲಿ ಕಷ್ಟ ಎದುರಾದಾಗ ಪರಸ್ಪರ ಬೆಂಬಲವಾಗಿ ನಿಲ್ಲಬೇಕು. ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ನೇರವಾಗಿ ಹೇಳಿದರೆ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆ:
ಹಣಕಾಸಿನ ವಿಷಯಗಳಲ್ಲಿ ಪಾರದರ್ಶಕತೆ ಕೂಡಾ ಬಹಳ ಮುಖ್ಯ. ಗಂಡ ಹೆಂಡತಿ ಆದಾಯ, ಖರ್ಚು ಮತ್ತು ಉಳಿತಾಯದಂತಹ ವಿಷಯಗಳಲ್ಲಿ ಪರಸ್ಪರ ಪ್ರಾಮಾಣಿಕರಾಗಿರಬೇಕು. ಅದೇ ರೀತಿ, ಮಕ್ಕಳನ್ನು ಬೆಳೆಸುವುದು ಇಬ್ಬರ ಜವಾಬ್ದಾರಿ. ಹಾಗಾಗಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಪರಸ್ಪರ ಚರ್ಚಿಸಿ ತೆಗೆದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಇಬ್ಬರೂ ಸೇರಿ ಕಲಿಸಬೇಕು.
ಕ್ಷಮಿಸುವ ಗುಣ:
ದಾಂಪತ್ಯದಲ್ಲಿ ಸ್ನೇಹವೂ ಬಹಳ ಮುಖ್ಯ. ಅಭಿಪ್ರಾಯ ವ್ಯತ್ಯಾಸಗಳು ಮತ್ತು ಸಣ್ಣ ಜಗಳಗಳು ಗಂಡ ಹೆಂಡತಿ ಮಧ್ಯೆ ಸಹಜ. ಆದರೆ, ಆ ಸಣ್ಣ ಮುನಿಸು, ಜಗಳ ಹೆಮ್ಮರವಾಗಲು ಬಿಡಬಾರದು. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಮುನ್ನಡೆಯಬೇಕು. ಪರಸ್ಪರ ವಾದಗಳಿಗೆ ಇಳಿಯದೆ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಆಗ ಬಾಂಧವ್ಯ ಗಟ್ಟಿಯಾಗಿರುತ್ತದೆ.
ಬದಲಿಸುವ ಪ್ರಯತ್ನ ಬೇಡ:
ದಂಪತಿಗಳು ಬೇರೆ ಬೇರೆ ಕುಟುಂಬದಿಂದ ಬಂದವರಾಗಿರುತ್ತಾರೆ. ಹಾಗಾಗಿ ಅವರ ಹಿನ್ನೆಲೆ ಕೂಡಾ ಭಿನ್ನವಾಗಿರುತ್ತದೆ. ನಡೆದುಕೊಳ್ಳುವ ರೀತಿ, ಹವ್ಯಾಸ, ಎಲ್ಲದರಲ್ಲಿಯೂ ವ್ಯತ್ಯಾಸವಿರುತ್ತದೆ. ಆದ್ದರಿಂದ, ಇಬ್ಬರ ಅಭಿರುಚಿಗಳು ಮತ್ತು ಆಲೋಚನೆಗಳು ಭಿನ್ನವಾಗಿರುತ್ತವೆ. ಅಂತಹ ಸಂದರ್ಭಗಳಲ್ಲಿ, ಪರಸ್ಪರರನ್ನು ಬದಲಾಯಿಸಲು ಪ್ರಯತ್ನಿಸುವುದಕ್ಕಿಂತ ಒಬ್ಬರು ಮತ್ತೊಬ್ಬರ ನಡವಳಿಕೆಯನ್ನು ಗೌರವಿಸುವುದು ಅವಶ್ಯಕ. ವೈವಿಧ್ಯತೆಯಲ್ಲಿ ಏಕತೆ ಯಶಸ್ವಿ ದಾಂಪತ್ಯ ಜೀವನದ ಪ್ರಮುಖ ಲಕ್ಷಣವಾಗಿದೆ.
ಯಾರೊಂದಿಗೂ ಹೋಲಿಸಬಾರದು:
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಗಂಡ-ಹೆಂಡತಿಯ ನಡುವೆ ಉತ್ತಮ ಸಂಬಂಧ ಅಗತ್ಯ. ಪರಸ್ಪರರ ಆರೋಗ್ಯವನ್ನು ನೋಡಿಕೊಳ್ಳಬೇಕು. ಅಲ್ಲದೆ, ದಂಪತಿಗಳ ನಡುವೆ ಅನಗತ್ಯ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಬಾರದು. ಯಾವತ್ತೂ ಸಂಗಾತಿಯನ್ನು ತನ್ನ ಹೆತ್ತವರೊಂದಿಗೆ ಅಥವಾ ಬೇರೆ ಯಾರೊಂದಿಗೂ ಹೋಲಿಸದೆ ತನ್ನ ಪರಿಸ್ಥಿತಿಗೆ ಅನುಗುಣವಾಗಿ ಸಂತೋಷದಿಂದ ಬದುಕಬೇಕು.
ಮನಸ್ಸಿನ ಮಾತನ್ನು ಹೇಳಿಬಿಡಿ:
ಗಂಡ ಹೆಂಡತಿ ನಡುವೆ ಉತ್ತಮ ಸಂವಹನ ಇರಬೇಕು. ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕು. ಮನಸ್ಸಿನ ಮಾತನ್ನು ಪರಸ್ಪರ ಹೇಳಿಕೊಳ್ಳುವುದರಿಂದ ತಪ್ಪು ತಿಳುವಳಿಕೆ ಮೂಡುವುದೇ ಇಲ್ಲ. ನಿನ್ನದು ನನ್ನದು ಎನ್ನುವ ಭೇದ ಇಲ್ಲದೆ, ನಮ್ಮದು ಎಂದು ಪ್ರೀತಿ, ವಾತ್ಸಲ್ಯದಿಂದ ಮುಂದುವರೆದರೆ ಭಿನ್ನಾಭಿಪ್ರಾಯಗಳಿಗೆ ಜಾಗ ಇರುವುದಿಲ್ಲ. ಹೀಗಿದ್ದರೆ ಎದುರಾಗುವ ಸಮಸ್ಯೆಗಳು ಬಹಳ ಬೇಗನೆ ಪರಿಹಾರವೂ ಆಗುವುದು. ಇದೇ ಕಾರಣಕ್ಕೆ ಮದುವೆಗೆ ಮೊದಲು ಸಮಾಲೋಚನೆ ನಡೆಸುವ ಅಗತ್ಯವನ್ನು ತಜ್ಞರು ಒತ್ತಿ ಹೇಳುತ್ತಾರೆ. ಇದು ವೈವಾಹಿಕ ಜೀವನದ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡುತ್ತದೆ. ಜೊತೆಗೆ ಸಂತೋಷದ ಕುಟುಂಬ ಜೀವನಕ್ಕೆ ಅಡಿಪಾಯ ಹಾಕುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications