ಶಿವಯೋಗದಿಂದ ಮೂರು ರಾಶಿಯವರ ಮೇಲಿರಲಿದೆ ಈಶ್ವರನ ಸಂಪೂರ್ಣ ಕೃಪೆ: ಸರ್ವ ಆಸೆಗಳೂ ಈಡೇರುವ ಕಾಲ
ಜ್ಯೋತಿಷ್ಯದಲ್ಲಿ, ತಿಥಿ, ನಕ್ಷತ್ರ ಮತ್ತು ವಾರಗಳ ಕೆಲವು ಸಂಯೋಜನೆಗಳನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಅಂತಹ ಒಂದು ಅಪರೂಪದ ಆಧ್ಯಾತ್ಮಿಕ ಯೋಗ ಇಂದು ರೂಪುಗೊಳ್ಳಲಿದೆ. ಇಂದು ತಿಂಗಳ ಶಿವರಾತ್ರಿ ಮಾತ್ರವಲ್ಲ, ಶಿವನಿಗೆ ತುಂಬಾ ಪ್ರಿಯವಾದ ಆರುದ್ರಾ ನಕ್ಷತ್ರ ಕೂಡಾ ಹೌದು. ಇಂದು ಶಿವರಾತ್ರಿ, ಆರುದ್ರಾ ನಕ್ಷತ್ರ ಮತ್ತು ಸೋಮವಾರ ಒಟ್ಟಿಗೆ ಬಂದಿರುವುದು ಇನ್ನಷ್ಟು ವಿಶೇಷವಾಗಿದೆ. ಈ ಶುಭ ಸಂಯೋಜನೆಯ ಸಮಯದಲ್ಲಿ ಶಿವನನ್ನು ಪೂಜಿಸುವುದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಪುಣ್ಯ ಫಲಗಳು ದೊರೆಯುತ್ತವೆ.
ಈ ದಿನ ಭಕ್ತರು ಶಿವನ ದೇವಸ್ಥಾನಕ್ಕೆ ಹೋಗಿ ಪಂಚಾಮೃತದಿಂದ ಅಭಿಷೇಕ ಮಾಡಿಸಬೇಕು. ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆ ಮತ್ತು ಬಿಳಿ ಹೂವುಗಳನ್ನು ಶಿವನಿಗೆ ಅರ್ಪಿಸಬೇಕು. ಇಂದು ಈ ರೀತಿ ಪೂಜೆ ಮಾಡುವುದರಿಂದ ಇಷ್ಟಾರ್ಥ ನೆರವೇರುತ್ತದೆ ಎನ್ನಲಾಗುತ್ತದೆ. ಅಲ್ಲದೆ ಇಂದು ಸಲ್ಲಿಸುವ ಪೂಜೆಗೆ ವಿಶೇಷ ಮಹತ್ವವಿದೆಯಂತೆ. ಶಿವನಿಗೆ ಪೂಜೆ ಸಲ್ಲಿಸುವಾಗ ಮಹಾಮೃತ್ಯುಂಜಯ ಮಂತ್ರ ಅಥವಾ ಓಂ ನಮಃ ಶಿವಾಯ ಮಂತ್ರವನ್ನು ಭಕ್ತಿಯಿಂದ ಪಠಿಸುವುದರಿಂದ ಮಾನಸಿಕ ಶಾಂತಿ ಮತ್ತು ಶಿವನ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನದಂದು ಮಾಡುವ ದಾನವು ವಿಶೇಷ ಮಹತ್ವದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ.
ಈ ಯೋಗದಿಂದ ಲಾಭ ಪಡೆಯುವ ರಾಶಿಗಳು :

ಮೇಷ ರಾಶಿ:
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಅಪರೂಪದ ಯೋಗದ ಪರಿಣಾಮವು ಮೇಷ ರಾಶಿಯವರಿಗೆ ವಿಶೇಷವಾಗಿ ಅನುಕೂಲಕರವಾಗಿದೆ ಎಂದು ಹೇಳಲಾಗುತ್ತದೆ. ಬಹುನಿರೀಕ್ಷಿತ ಅವಕಾಶಗಳು ಒಲಿದು ಬರುವುದು. ವಿದೇಶಕ್ಕೆ ತೆರಳುವ ಅವಕಾಶವೂ ಸಿಗುವುದು. ರಿಯಲ್ ಎಸ್ಟೇಟ್ ಅಥವಾ ಹೂಡಿಕೆ ವಲಯದಲ್ಲಿರುವವರಿಗೆ ಲಾಭದಾಯಕ ಸನ್ನಿವೇಶಗಳು ಎದುರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಬಾಕಿ ಇರುವ ಹಣಕಾಸಿನ ವಿಷಯಗಳು ಅಥವಾ ಕಾನೂನು ವಿಷಯಗಳು ಸಹ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುವ ಸಾಧ್ಯತೆಯಿದೆ.

ಮಿಥುನ ರಾಶಿ:
ಜ್ಯೋತಿಷಿಗಳು ಈ ಅವಧಿಯು ಮಿಥುನ ರಾಶಿಯವರಿಗೆ ಭರವಸೆಯ ಸಮಯ ಎಂದೇ ಹೇಳುತ್ತಾರೆ. ಉದ್ಯೋಗ ಹುಡುಕಲು ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ಹೊಸ ಪರಿಚಯಸ್ಥರು, ಆರ್ಥಿಕ ಅವಕಾಶಗಳು ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಯಾಗುವ ಸೂಚನೆಗಳಿವೆ. ಮನೆ ಅಥವಾ ಜಮೀನು ಖರೀದಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ದೀರ್ಘಕಾಲದವರೆಗೆ ಅವರನ್ನು ಕಾಡುತ್ತಿರುವ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತುಲಾ ರಾಶಿ:
ಈ ರಾಶಿಯವರಿಗೆ ಶಿವ ಯೋಗವು ವೃತ್ತಿಪರ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪ್ರಗತಿಯನ್ನು ತರುತ್ತದೆ. ಉನ್ನತ ಹುದ್ದೆಗಳನ್ನು ತಲುಪುವ ಅವಕಾಶಗಳು, ಜೊತೆಗೆ ಮನ್ನಣೆ, ಬಡ್ತಿ ಸಿಗುವ ಸಾಧ್ಯತೆ ಇದೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವ ಸೂಚನೆ ಇದೆ. ಕುಟುಂಬ ಜೀವನದಲ್ಲಿ ಶುಭ ಬೆಳವಣಿಗೆಗಳು ಕಂಡುಬರುತ್ತವೆ. ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ದಿನ ಏನು ಮಾಡಬೇಕು?:
ಮಾಸ ಶಿವರಾತ್ರಿಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ಶಿವನನ್ನು ಪೂಜಿಸುವುದು ಮತ್ತು ದಾನ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಬಿಳಿ ಬಟ್ಟೆಗಳನ್ನು ಧರಿಸುವುದು ಮತ್ತು ಹಾಲು, ಮೊಸರು, ಅಕ್ಕಿ ಮತ್ತು ಸಕ್ಕರೆಯಂತಹ ವಸ್ತುಗಳನ್ನು ದಾನ ಮಾಡುವುದು ಸಹ ಸಾಂಪ್ರದಾಯಿಕವಾಗಿ ಒಳ್ಳೆಯದು. ಭಗವಾನ್ ಕಾಲ ಭೈರವನನ್ನು ಭಕ್ತಿಯಿಂದ ಪೂಜಿಸುವುದರಿಂದ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ. ಮನಸ್ಸಿನ ಶಾಂತಿ, ಧೈರ್ಯ ಮತ್ತು ಆಧ್ಯಾತ್ಮಿಕ ಶಕ್ತಿ ಹೆಚ್ಚಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications