ರೇವಣ್ಣ ಗೆಲುವಿನ ಓಟಕ್ಕೆ ಮಹಿಳೆಯರ ಬ್ರೇಕ್
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಎಸ್.ಜಿ. ಅನುಪಮಾ ಮತ್ತು ಕೆಜೆಪಿಯಿಂದ ಎಚ್.ಎಲ್. ಯಮುನಾ ಅಖಾಡಕ್ಕೆ ಧುಮುಕಿದ್ದಾರೆ. ಈ ಇಬ್ಬರು ಮಹಿಳಾ ಮಣಿಗಳ ನಡುವೆ ರೇವಣ್ಣ ಸ್ಪರ್ಧಿಸಬೇಕಾಗಿದೆ. ಮೂವರೂ ನಾಮಪತ್ರ ಸಲ್ಲಿಸಿದ್ದು, ಹೋರಾಟಕ್ಕೆ ಅಖಾಡ ಸಿದ್ಧವಾಗಿ ನಿಂತಿದೆ.
ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ಧವೇ ರಾಜಕಾರಣ ಮಾಡಿದ್ದ ಮಾಜಿ ಸಚಿವ ದಿವಂಗತ ಜಿ. ಪುಟ್ಟಸ್ವಾಮಿ ಗೌಡರ ಸೊಸೆ ಕಾಂಗ್ರೆಸ್ ಅಭ್ಯರ್ಥಿ ಅನುಪಮಾ. ಉತ್ಸಾಹದಿಂದಲೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಅನುಪಮಾ 2008ರ ಚುನಾವಣೆಯಲ್ಲಿಯೂ ರೇವಣ್ಣ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿ 49,842 ಮತಗಳನ್ನು ಪಡೆದಿದ್ದರು.
ರೇವಣ್ಣಗೆ 77,448 ಮತ ಪಡೆದು ಗೆಲುವು ಸಾಧಿಸಿದ್ದರು. ಆದ್ದರಿಂದ ಅನುಪಮಾ ಅವರನ್ನು ಸಾಮಾನ್ಯವಾಗಿ ಪರಿಗಣಿಸುವಂತಿಲ್ಲ. ರೇವಣ್ಣ ಎದುರು ಸ್ಪರ್ಧಿಸಿ ಅನುಭವ ವಿರುವ ಅನುಮಮಾ ದಬ್ಬಾಳಿಕೆ, ದೌರ್ಜನ್ಯ ತಡೆಯಲು ನನ್ನನ್ನು ಗೆಲ್ಲಿಸಿ ಎಂದು ಹೇಳುತ್ತಾ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ.
ಕೆಜೆಪಿಯೂ ಪ್ರಭಾವಿ : ಕೆಜೆಪಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಮುನಾ ಅವರನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ರೇವಣ್ಣನವರಿಗೆ ಮತ್ತೊಂದು ಶಾಕ್ ನೀಡಿದ್ದಾರೆ. ತಾಲೂಕಿನ ಹರಿಹರಪುರ ಗ್ರಾಮದ ಯಮುನಾ ಅವರಿಗೆ ಹತ್ತಾರು ವರ್ಷಗಳ ರಾಜಕೀಯ ಅನುಭವವಿದೆ.
ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿರದಿದ್ದರೂ ಯಡಿಯೂರಪ್ಪ ಕರೆದು ಬಿ ಫಾರಂ ನೀಡಿದ್ದಾರೆ ಚುನಾವಣಾ ಅಖಾಡಕ್ಕೆ ಕರೆತಂದಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಆನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ ಯಮುನಾ, ರೇವಣ್ಣನವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವುದು ಖಂಡಿತ.
ರೇವಣ್ಣ ಹೊಸ ತಂತ್ರ : ತಮ್ಮ ವಿರುದ್ಧ ಮಹಿಳಾ ಮಣಿಗಳು ಸ್ಪರ್ಧಿಸಿರುವುದಿಂದ ರೇವಣ್ಣ ಹೆಚ್ಚು ಎಚ್ಚರಿಕೆಯಿಂದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಬಹಿರಂಗ ಚುನಾವಣೆ ಸಭೆಗಳಲ್ಲಿ ಕಾಂಗ್ರೆಸ್ ಮತ್ತು ಕೆಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಅವರು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಹೇಳಿ ಟೀಕೆ ಮಾಡುತ್ತಿಲ್ಲ. ಇದರಿಂದ ಮಹಿಳೆಯರ ಮತ ಗಿಟ್ಟಿಸಬಹದು ಎಂಬ ತಂತ್ರವೂ ಅಡಗಿದೆ.
ಭವಾನಿಯೇ ಸ್ಟಾರ್ ಕ್ಯಾಂಪೇನರ್ : ಮಹಿಳಾ ಮಣಿಗಳ ವಿರುದ್ಧ ರೇವಣ್ಣ ಸ್ಪರ್ಧಿಸಬೇಕಾಗಿರುವುದರಿಂದ ಚುನಾವಣಾ ಪ್ರಚಾರಕ್ಕೆ ರೇವಣ್ಣ ಪತ್ನಿ ಭವಾನಿ ಅವರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಪತ್ನಿಯೊಂದಿಗೇ ಮನೆ ಮನೆಗೆ ತೆರಳಿ ರೇವಣ್ಣ ಮತ ಕೇಳುತ್ತಿದ್ದಾರೆ. 2004 ಮತ್ತು 2008 ಚುನಾವಣೆಯಲ್ಲಿ ಗೆದ್ದಿರುವ ರೇವಣ್ಣನವರು ಈ ಚುನಾವಣೆ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ