ನಟ ಶಿವರಾಜ್ಕುಮಾರ್ ಅಬ್ಬರದ ಪ್ರಚಾರ: ಒಬ್ಬ ಮಾಜಿ CM ಗೆದ್ರು, ಮತ್ತೊಬ್ಬರು ಮಕಾಡೆ ಮಲಗಿದ್ರು..!
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬಾರಿಯ ಎಲೆಕ್ಷನ್ ಪ್ರಚಾರದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರು ಭಾಗವಹಿಸಿದ್ದರು. ಪ್ರಮುಖವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಚಾರ ಮಾಡಿರುವ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಹಾಗಾದರೇ, ಶಿವರಾಜ್ಕುಮಾರ್ ಮತಭೇಟೆ ಮಾಡಿರುವ ಯಾವೆಲ್ಲ ಕದನಕಲಿಗಳು ಜಯಶಾಲಿಯಾಗಿದ್ದಾರೆಂದು ತಿಳಿಯೋಣ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಪರ ವರುಣ ಕ್ಷೇತ್ರದಲ್ಲಿ ಶಿವಣ್ಣ ಅಬ್ಬರದ ಪ್ರಚಾರ ಮಾಡಿದ್ದರು. ಇದೀಗ, ಪ್ರತಿಸ್ಪರ್ಧಿ ಬಿಜೆಪಿಯ ವಿ.ಸೋಮಣ್ಣ ಅವರನ್ನು ಸೋಲಿಸುವ ಮೂಲಕ ಸಿದ್ದು ಭರ್ಜರಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ರೇಸ್ ನಲ್ಲಿ ಇದ್ದಾರೆ.

ಆದರೆ, ಬಿಜೆಪಿಯಿಂದ ಬಂಡಾಯವೆಂದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಿವರಾಜ್ಕುಮಾರ್ ಪ್ರಚಾರ ಮಾಡಿದ್ದರೂ ಪರಾಭವಗೊಂಡಿದ್ದಾರೆ. ಸಹೋದರರೇ ಸ್ಪರ್ಧಿಸಿದ್ದ ಸೊರಬದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ, ಅವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಕುಮಾರ ಬಂಗಾರಪ್ಪ ಸೋತಿದ್ದಾರೆ.
ಶಿರಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ ಶಿವಣ್ಣ ಪ್ರಚಾರ ಮಾಡಿದ್ದು, ಸೋಲಿಲ್ಲದ ಸರದಾರ ವಿಶ್ವೇಶ್ವರ ಹೆಗಡೆ ಕಾಗೇರಿ ಪರಾಭವಗೊಂಡಿದ್ದಾರೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಮತಭೇಟೆ ಮಾಡಿದ್ರು, ಅಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗೆದ್ದಿದ್ದು, ಸಾಗರ ಅಭ್ಯರ್ಥಿ ಬೇಲೂರು ಗೋಪಾಲ ಕೃಷ್ಣ, ಶಿವಣ್ಣ ಅವರ ಪ್ರಚಾರದಿಂದ ಗೆಲುವು ಸಾಧಿಸಿದ್ದಾರೆ.
ಆದರೆ, ಕೆಲವೊಂದು ಕ್ಷೇತ್ರಗಳಲ್ಲಿ ಶಿವರಾಜ್ಕುಮಾರ್ ಪ್ರಚಾರಕ್ಕೂ ಅಲ್ಲಿನ ಮತದಾರರು ಸೊಪ್ಪು ಹಾಕಿಲ್ಲ. ಕಾರವಾರದ ಸತೀಶ್ ಕೃಷ್ಣ ಸೈಲ್, ಬೀದರ್ ದಕ್ಷಿಣದಿಂದ ಸ್ಪರ್ಧೆ ಮಾಡಿದ್ದ ಅಶೋಕ್ ಖೇಣಿ, ತೀರ್ಥಹಳ್ಳಿಯಿಂದ ಕಿಮ್ಮಾನೇ ರತ್ನಾಕರ್ ಸೋತಿದ್ದಾರೆ.












Click it and Unblock the Notifications