ಬಡವರ ಮೇಲೇಕೆ ತೆರಿಗೆ?: ಲೋಕಸಭೆಯಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ವಿಪಕ್ಷಗಳ ಆಕ್ರೋಶ
ನವದೆಹಲಿ, ಮಾರ್ಚ್ 23: ಲೋಕಸಭೆಯಲ್ಲಿ ಮಂಗಳವಾರ ಹಣಕಾಸು ಮಸೂದೆ 2021ರ ಕುರಿತಾದ ಚರ್ಚೆಯ ವೇಳೆ ಕೇಂದ್ರ ಬಜೆಟ್ನ ಘೋಷಣೆಗಳು ಹಾಗೂ ಪೆಟ್ರೋಲ್ ಬೆಲೆ ಏರಿಕೆ ವಿಚಾರಗಳ ವಿರುದ್ಧ ವಿರೋಧಪಕ್ಷಗಳು ತೀವ್ರ ಕೋಲಾಹಲ ಸೃಷ್ಟಿಸಿದವು. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಮತ್ತು ತೈಲ ಬೆಲೆಗಳ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಿದರೆ, ತೈಲ ಬೆಲೆಯನ್ನು ಹೆಚ್ಚಿಸುತ್ತಲೇ ಹೋದರೆ ರೈತರ ಆದಾಯ ದುಪ್ಪಟ್ಟಾಗುವುದಿಲ್ಲ ಎಂದು ಶಿವಸೇನಾ ಕಿಡಿಕಾರಿತು.
'ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಲೇ ಇದೆ. ದೇಶದಲ್ಲಿ ಸೃಷ್ಟಿಯಾಗುವ ಶೇ 73ರಷ್ಟು ಸಂಪತ್ತು ಶೇ 1ರಷ್ಟು ಜನರಿಗೆ ಹೋಗುತ್ತಿದೆ ಎಂದು ನಿಮ್ಮದೇ ದಾಖಲೆಗಳು ತಿಳಿಸುತ್ತಿವೆ. ನೀವು ಶ್ರೀಮಂತರಿಗೆ ತೆರಿಗೆ ವಿನಾಯಿತಿಗಳನ್ನು ನೀಡಿದ್ದೀರಿ. ಆದರೆ ಬಡವರ ಮೇಲೆ ತೆರಿಗೆ ವಿಧಿಸುತ್ತಿದ್ದೀರಿ. ಪೆಟ್ರೋಲ್ ಮತ್ತು ಡೀಸೆಲ್ಗಳು ಏಕೆ ಪ್ರತಿದಿನವೂ ಹೆಚ್ಚಳವಾಗುತ್ತಿವೆ? ನೀವು ಎಲ್ಲದರ ಮೇಲೆಯೂ ಸೆಸ್ ಹೆಚ್ಚಿಸುತ್ತಿದ್ದು, ಅದೆಲ್ಲವೂ ಕೇಂದ್ರದ ಖಜಾನೆಗೇ ಹೋಗುತ್ತಿದೆ. ಇದರಿಂದ ರಾಜ್ಯಗಳಿಗೆ ಸಹಾಯವಾಗುತ್ತಿಲ್ಲ. ಜಿಎಸ್ಟಿ ಪರಿಹಾರದ ಬಾಕಿಯನ್ನೂ ನೀಡಿಲ್ಲ. ದಯವಿಟ್ಟು ಅದನ್ನಾದರೂ ಮಾಡಿ. ರಾಜ್ಯಗಳು ಸಂಕಷ್ಟದಲ್ಲಿವೆ' ಎಂದು ಪಂಜಾಬ್ನ ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಹೇಳಿದರು.
ಶಾಕಿಂಗ್: ಹೀಗಿದೆಯಾ ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂದಿನ ಗುಟ್ಟು?
'ಒಂದು ಕಡೆ ನೀವು ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳುತ್ತಿದ್ದೀರಿ. ಇನ್ನೊಂದು ಕಡೆ ಕೃಷಿ ಸೆಸ್ ಹೆಸರಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸುತ್ತಿದ್ದೀರಿ. ರೈತರ ಉತ್ಪಾದನೆ ಹೆಚ್ಚುತ್ತಿರುವಂತೆ ನೀವು ಸಾಗಾಣಿಕೆ ವೆಚ್ಚದಲ್ಲಿ ಅವರಿಂದ ವಸೂಲಿ ಮಾಡುತ್ತೀರಿ. ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನೀವು ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿಲ್ಲ' ಎಂದು ಶಿವಸೇನಾದ ಸಂಸದ ವಿನಾಯಕ್ ರಾವತ್ ಆರೋಪಿಸಿದರು.
'ಎಲ್ಪಿಜಿ ದರವನ್ನು ಹೆಚ್ಚಿಸಲಾಗಿದೆ. ಜನರು ಈಗ ಮತ್ತೆ ಕಟ್ಟಿಗೆಗಳನ್ನು ಬಳಸಲು ಶುರುಮಾಡಿದ್ದಾರೆ. ಜನರು ಅಡುಗೆಗಾಗಿ ಮತ್ತಷ್ಟು ಉರುವಲು ಬಳಸಿ ಕಾಯಿಲೆ ಬೀಳಬೇಕೆಂದು ಸರ್ಕಾರ ಬಯಸಿದೆಯೇ?' ಎಂದು ರಾವತ್ ಕಿಡಿಕಾರಿದರು.