ಎಲ್ಲೆಲ್ಲೂ ಲಾಕ್ಡೌನ್ ವದಂತಿ; ಕೇಂದ್ರ ಸರ್ಕಾರ ನಿಜಕ್ಕೂ ಹೇಳಿರುವುದೇನು?
ನವದೆಹಲಿ, ಮಾರ್ಚ್ 23: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾದ ಬೆನ್ನಲ್ಲೇ 2020ರ ಮಾರ್ಚ್ 25ರಂದು ರಾಷ್ಟ್ರಾದ್ಯಂತ ಮೊದಲ ಬಾರಿ ಲಾಕ್ಡೌನ್ ಘೋಷಿಸಲಾಗಿತ್ತು. ರೈಲ್ವೆ, ವಿಮಾನ, ರಸ್ತೆ ಸಾರಿಗೆಗಳನ್ನು ಸಂಪೂರ್ಣ ನಿರ್ಬಂಧಿಸಿ ಅತಿ ಅಗತ್ಯ ವಸ್ತು ಖರೀದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.
ಇದಾಗಿ ಸರಿಯಾಗಿ ಒಂದು ವರ್ಷದ ಹೊತ್ತಿಗೆ ಮತ್ತದೇ ಪರಿಸ್ಥಿತಿ ಮರುಕಳಿಸುತ್ತಿದೆ. ಕೆಲವು ತಿಂಗಳುಗಳಿಂದ ಕೊರೊನಾ ಪ್ರಕರಣಗಳು ಇಳಿಕೆಯಾಗಿ ಇನ್ನೇನು ನಿಟ್ಟುಸಿರು ಬಿಡಬೇಕೆನ್ನುವಷ್ಟರಲ್ಲಿ ಮತ್ತೆ ಕೊರೊನಾ ಪ್ರಕರಣಗಳಲ್ಲಿ ದಿಢೀರನೆ ಏರಿಕೆ ಕಂಡು ಆತಂಕ ಮೂಡಿಸಿದೆ. ಕೆಲವು ರಾಜ್ಯಗಳು ಸ್ಥಳೀಯವಾಗಿ ಲಾಕ್ಡೌನ್ ಕೂಡ ಹೇರಿವೆ. ಈ ನಡುವೆ ದೇಶದಲ್ಲಿ ಮತ್ತೆ ಕಳೆದ ವರ್ಷದಂತೆ ಲಾಕ್ಡೌನ್ ವಿಧಿಸಲಾಗುತ್ತದೆಯೇ ಎಂಬ ವದಂತಿಯೂ ಹರಡುತ್ತಿದೆ. ಆದರೆ ಇದಕ್ಕೆ ಕೇಂದ್ರ ಏನು ಹೇಳುತ್ತಿದೆ? ಮುಂದೆ ಓದಿ...

ಯಾವುದೇ ಕಾರಣಕ್ಕೂ ರಾಷ್ಟ್ರಾದ್ಯಂತ ಲಾಕ್ಡೌನ್ ಇಲ್ಲ
ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದು ಹೌದಾದರೂ ಪ್ರಸ್ತುತ ರಾಷ್ಟ್ರಾದ್ಯಂತ ಲಾಕ್ಡೌನ್ ಹೇರುವ ಯಾವುದೇ ಆಲೋಚನೆ ಇಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಸದ್ಯಕ್ಕೆ ಹೊಸ ಕೊರೊನಾ ಪ್ರಕರಣಗಳನ್ನು ಪತ್ತೆ ಹಚ್ಚಿ, ಹರಡುವಿಕೆ ತಡೆಯುವುದರಲ್ಲಿ ಸರ್ಕಾರ ಚಿತ್ತ ನೆಟ್ಟಿದ್ದು, ಯಾವುದೇ ಕಾರಣಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ಲಾಕ್ಡೌನ್ ಹೇರುವುದಿಲ್ಲ ಎಂದು ತಿಳಿಸಿದೆ.

ಯಾವುದರ ಮೇಲೂ ನಿರ್ಬಂಧ ಇರುವುದಿಲ್ಲ
ಸೋಂಕು ಹೆಚ್ಚಾದ ಸ್ಥಳಗಳನ್ನು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗುತ್ತದೆ. ಆದರೆ ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಎಲ್ಲಾ ಚಟುವಟಿಕೆಗಳಿಗೂ ಅವಕಾಶ ನೀಡಲಾಗುತ್ತದೆ. ರೈಲು, ವಿಮಾನ, ಮೆಟ್ರೋ ರೈಲು, ಶಾಲೆ, ಉನ್ನತ ಶಿಕ್ಷಣ ಸಂಸ್ಥೆಗಳು, ಹೋಟೆಲ್, ರೆಸ್ಟೊರೆಂಟ್ ಗಳು, ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ಗಳು, ಯೋಗ ಕೇಂದ್ರಗಳು, ಉದ್ಯಾನಗಳು, ಜಿಮ್ಗಳು ಯಾವುದರ ಮೇಲೂ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಿದೆ.

ಸಾರಿಗೆ ಸಂಚಾರಕ್ಕೆ ಅಡ್ಡಿಯಿಲ್ಲ
ಆದರೆ ಈ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುವಾಗ ಕೊರೊನಾ ಮಾರ್ಗಸೂಚಿ ಅನುಸರಿಸುವ ಕುರಿತು ನಿಗಾ ವಹಿಸಬೇಕಾಗುತ್ತದೆ ಎಂದು ಕೇಂದ್ರ ಎಚ್ಚರಿಕೆ ನೀಡಿದೆ. ಅಂತರರಾಜ್ಯ, ಅಂತಾರಾಜ್ಯ ಸಾರಿಗೆ ಮೇಲೂ ಯಾವುದೇ ನಿರ್ಬಂಧ ಇರುವುದಿಲ್ಲ. ಸರಕು ಸಾರಿಗೆಗೆ ಅಡ್ಡಿಯಿಲ್ಲ. ಆದರೆ ಸಾರಿಗೆ ಸಂಬಂಧ ಕೊರೊನಾ ನಿಯಮಾವಳಿಗಳನ್ನು ಅನುಸರಿಸಬೇಕಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಸ್ತುತ ಟ್ರ್ಯಾಕಿಂಗ್, ಟೆಸ್ಟಿಂಗ್ ಅಷ್ಟೇ ಮುಖ್ಯ
ಸದ್ಯಕ್ಕೆ ಕೊರೊನಾ ಟ್ರ್ಯಾಕಿಂಗ್, ಟೆಸ್ಟಿಂಗ್ ಮೇಲೆ ನಿಗಾ ವಹಿಸುವುದು ಅತ್ಯವಶ್ಯಕವಾಗಿದೆ ಎಂದಿರುವ ಕೇಂದ್ರ, ಕೆಲವು ಜಿಲ್ಲೆಗಳಲ್ಲಿ, ಪ್ರದೇಶಗಳಲ್ಲಿ ಮಾತ್ರ ರಾಜ್ಯ ಸರ್ಕಾರದ ಮಟ್ಟದಲ್ಲಿ ಲಾಕ್ಡೌನ್ ಹೇರಬಹುದು. ಈ ನಿರ್ಧಾರವನ್ನು ರಾಜ್ಯಗಳಿಗೆ ಬಿಡಲಾಗಿದೆ. ಪರಿಸ್ಥಿತಿ ಅವಲೋಕಿಸಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದೆ. ಕೇಂದ್ರವು ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೋಂಕಿನ ಕುರಿತು ಪ್ರತಿ ಕ್ಷಣವೂ ನಿಗಾ ವಹಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.












Click it and Unblock the Notifications