ಕೇರಳ ಪ್ರವಾಹ: ಯುಎಇ ನೆರವು ಕೇಂದ್ರ ತಿರಸ್ಕರಿಸಿದ್ದೇಕೆ ಗೊತ್ತೇ?
ನವದೆಹಲಿ, ಆಗಸ್ಟ್ 22: ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಜಗತ್ತಿನ ಮೂಲೆ ಮೂಲೆಗಳಿಂದ ನೆರವು ಹರಿದುಬರುತ್ತಿವೆ. ಆದರೆ, ಕೇಂದ್ರ ಸರ್ಕಾರವು ವಿದೇಶಗಳಿಂದ ಬರುವ ಆರ್ಥಿಕ ಸಹಾಯವನ್ನು ಒಪ್ಪಿಕೊಳ್ಳದಿರುವ ದೀರ್ಘಕಾಲದ ನೀತಿಗೆ ಬದ್ಧವಾಗಿರಲು ತೀರ್ಮಾನಿಸಿದೆ.
ಬೇರೆ ದೇಶಗಳಿಂದ ಯಾವುದೇ ರೀತಿಯ ಹಣಕಾಸು ನೆರವನ್ನು ವಿನಮ್ರತೆಯಿಂದ ನಿರಾಕರಿಸುವಂತೆ ಜಗತ್ತಿನಾದ್ಯಂತ ಇರುವ ತನ್ನ ರಾಯಭಾರಿಗಳಿಗೆ ನಿರ್ದೇಶನ ನೀಡಿರುವ ಕೇಂದ್ರ ಸರ್ಕಾರ, ಈ ಸವಾಲನ್ನು ಎದುರಿಸಲು ಆಂತರಿಕ ಪ್ರಯತ್ನಗಳ ಮೇಲೆಯೇ ಅವಲಂಬಿತವಾಗಲು ನಿರ್ಧರಿಸಿದೆ.
ಪ್ರವಾಹಕ್ಕೆ ಸಿಲುಕಿದ ಜನರು ಮತ್ತು ಪ್ರದೇಶಗಳಿಗೆ ಅಗತ್ಯವಿರುವ ನೆರವು ನೀಡಲು ದೇಶದ ಜನತೆ ಹಾಗೂ ಸರ್ಕಾರವು ಈಗ ಸಮರ್ಥವಾಗಿದೆ ಎಂಬುದನ್ನು ಆಯಾ ದೇಶಗಳಿಗೆ ಮನವರಿಕೆ ಮಾಡುವಂತೆ ರಾಯಭಾರಿಗಳಿಗೆ ಸೂಚಿಸಲಾಗಿದೆ.

ಹಿಂದೆಯೂ ತಿರಸ್ಕರಿಸಲಾಗಿತ್ತು
2004ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಪತ್ತು ನೆರವು ನೀತಿಯನ್ನು ರಚಿಸಿದ್ದರು. ಅದರ ಬಳಿಕ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ವಿದೇಶಗಳ ಹಣಕಾಸಿನ ನೆರವನ್ನು ಸ್ವೀಕರಿಸುತ್ತಿಲ್ಲ.
ಅರಬ್ ಸಂಯುಕ್ತ ಒಕ್ಕೂಟ ಮತ್ತು ಮಾಲ್ಡೀವ್ಸ್ ಸರ್ಕಾರಗಳು ಭಾರತಕ್ಕೆ ಹಣಕಾಸಿನ ನೆರವು ನೀಡಲು ಮುಂದೆ ಬಂದಿದ್ದವು. 2013ರಲ್ಲಿ ಉತ್ತರಾಖಂಡದಲ್ಲಿ ಪ್ರವಾಹ, 2005ರಲ್ಲಿ ಕಾಶ್ಮೀರ ಭೂಕಂಪ ಹಾಗೂ 2014ರ ಕಾಶ್ಮೀರ ಪ್ರವಾಹಕ್ಕೆ ರಷ್ಯಾ, ಅಮೆರಿಕ ಮತ್ತು ಜಪಾನ್ನ ನೆರವನ್ನು ಭಾರತ ವಿನಮ್ರತೆಯಿಂದ ತಿರಸ್ಕರಿಸಿತ್ತು.
'ಪರಿಸ್ಥಿತಿಗಳನ್ನು ಸ್ವತಃ ನಾವೇ ನಿಭಾಯಿಸುವಷ್ಟು ನಾವು ಸಮರ್ಥರಿದ್ದೇವೆ ಎನಿಸುತ್ತದೆ. ಅಗತ್ಯವಿದ್ದರೆ ಅವರ ನೆರವು ಪಡೆದುಕೊಳ್ಳುತ್ತೇವೆ ಎಂದು 2004ರ ಡಿಸೆಂಬರ್ನಲ್ಲಿ ಮನಮೋಹನ್ ಸಿಂಗ್ ಹೇಳಿಕೆ ನೀಡಿದ್ದರು.

ಅದಕ್ಕೂ ಮೊದಲು ಸ್ವೀಕರಿಸಲಾಗಿತ್ತು
ಅದಕ್ಕೂ ಮುನ್ನ 1991ರಲ್ಲಿ ಉತ್ತರಾಕಾಶಿ ಭೂಕಂಪ, 1993ರ ಲಾತೂರ್ ಭೂಕಂಪ, 2001ರ ಗುಜರಾತ್ ಭೂಕಂಪ, 2002ರ ಬಂಗಾಳ ಚಂಡಮಾರುತ ಮತ್ತು 2004ರ ಜುಲೈನಲ್ಲಿ ಸಂಭವಿಸಿದ ಬಿಹಾರ ಪ್ರವಾಹದ ಸಂದರ್ಭಗಳಲ್ಲಿ ಭಾರತವು ವಿದೇಶಗಳಿಂದ ಆರ್ಥಿಕ ನೆರವನ್ನು ಸ್ವೀಕರಿಸಿತ್ತು.

ಸುನಾಮಿ ಅಪ್ಪಳಿಸಿದಾಗಲೂ...
ಇದನ್ನು ಭಾರತದ ನೀತಿಯನ್ನಾಗಿ ಅಳವಡಿಸಿಕೊಳ್ಳಲಾಗಿತ್ತು. ಅಂದಿನಿಂದಲೂ ಭಾರತವು ವಿದೇಶಿ ಸರ್ಕಾರಗಳಿಂದ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಿಲ್ಲ. 2004ರಲ್ಲಿ ಸುನಾಮಿಯು ತಮಿಳುನಾಡಿನ ಕರಾವಳಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸಿ 12 ಸಾವಿರಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡು ಆರು ಲಕ್ಷ ಜನರನ್ನು ನಿರ್ವಸಿತರನ್ನಾಗಿ ಮಾಡಿದ ಘಟನೆಯ ವೇಳೆಯೂ ಹಣಕಾಸಿನ ನೆರವನ್ನು ಸ್ವೀಕರಿಸಿರಲಿಲ್ಲ.

ನೆರವು ಬೇಡ ಎನ್ನಲು ಕಾರಣಗಳೇನು?
ಮೂಲಗಳ ಪ್ರಕಾರ ನೀತಿಯನ್ನು ಅಳವಡಿಸಿಕೊಳ್ಳಲು ಎರಡು ಕಾರಣಗಳಿವೆ. ಈ ರೀತಿಯ ವಿಪತ್ತುಗಳನ್ನು ಎದುರಿಸಲು ಭಾರತ ಶಕ್ತವಾಗಿದೆ ಎನ್ನುವುದನ್ನು ಭಾರತ ಸರ್ಕಾರ ನಂಬಿದೆ. ಮತ್ತು ಯಾವುದೇ ಒಂದು ದೇಶದಿಂದ ನೆರವನ್ನು ಒಪ್ಪಿಕೊಳ್ಳುವುದರಿಂದ ಇತರೆ ದೇಶಗಳ ಪರಿಹಾರದ ಸಹಾಯ ಹಸ್ತಕ್ಕೂ ಮುಕ್ತವಾಗುವ ಮುಲಾಜಿಗೆ ಸಿಗಬೇಕಾಗುತ್ತದೆ. ಆಗ ಕೆಲವೊಂದು ದೇಶಗಳ ನೆರವನ್ನು ಮಾತ್ರ ತಿರಸ್ಕರಿಸುವುದು ರಾಜತಾಂತ್ರಿಕ ಕಾರಣಗಳಿಂದ ಕಷ್ಟವಾಗುತ್ತದೆ.
ಅಲ್ಲದೆ, ಇದು ಭಾರತವು ಆರ್ಥಿಕವಾಗಿ ಸಾಕಷ್ಟು ಪ್ರಬಲವಾಗಿದೆ ಎನ್ನುವುದನ್ನು ಸೂಚಿಸುತ್ತದೆ ಮತ್ತು ಸಂತ್ರಸ್ತ ದೇಶಗಳಿಗೂ ನೆರವು ನೀಡುವಷ್ಟು ಶಕ್ತವಾಗಿದೆ ಎಂಬುದನ್ನು ತೋರಿಸುತ್ತದೆ.

ವಿದೇಶಿ ಸರ್ಕಾರಗಳಿಗೆ ಸೀಮಿತ
ಆದರೆ, ಈ ನೀತಿಯು ವಿದೇಶಿ ಸರ್ಕಾರಗಳಿಗೆ ಸೀಮಿತವಾಗಿದೆ. ಇದು ಖಾಸಗಿ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ. ಅನಿವಾಸಿ ಭಾರತೀಯರು ಹಾಗೂ ವಿಪತ್ತು ನಿರ್ವಹಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಎನ್ಜಿಓಗಳ ನೆರವನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ನಾವು ಸಮರ್ಥರಿದ್ದೇವೆ
'ತುರ್ತು ಅಗತ್ಯಗಳಿಗೆ ಅಗತ್ಯವಿರುವಷ್ಟು ಸ್ಪಂದಿಸಲು ನಾವು ಸಾಕಷ್ಟು ಸಮರ್ಥರಿದ್ದೇವೆ. ಹೀಗಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ವಿಚಾರದಲ್ಲಿ ನಾವು ಈ ನೀತಿಯನ್ನು ಸಾಮಾನ್ಯವಾಗಿ ಪಾಲಿಸುತ್ತಿದ್ದೇವೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಈ ಹಿಂದೆಯೂ ವಿವಿಧ ಕಾರಣಗಳಿಂದ ನಾವು ಈ ರೀತಿ ನೆರವುಗಳನ್ನು ಪಡೆದುಕೊಂಡಿರಲಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಸ್ಪಷ್ಟಪಡಿಸಿದ್ದಾರೆ.

ಯುಎಇ, ಮಾಲ್ಡೀವ್ಸ್ ನೆರವು
ಪ್ರವಾಹ ಪೀಡಿತ ಕೇರಳದ ಜನತೆಗೆ 700 ಕೋಟಿ ರೂ. ನೀಡುವುದಾಗಿ ಯುಎಇ ಪ್ರಕಟಿಸಿತ್ತು. ಮಾಲ್ಡೀವ್ಸ್ 35 ಲಕ್ಷ ನೆರವು ಘೋಷಿಸಿತ್ತು.
ತನ್ನ ಅಭಿವೃದ್ಧಿಯಲ್ಲಿ ಕೇರಳದ ಜನರು ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಅವರ ಸಂಕಷ್ಟದ ಸಂದರ್ಭದಲ್ಲಿ ನೆರವು ನೀಡುತ್ತಿರುವುದಾಗಿ ಯುಎಇ ಹೇಳಿತ್ತು.
ಯುಎಇ ಮತ್ತು ಮಾಲ್ಡೀವ್ಸ್ ಸರ್ಕಾರಗಳು ನೀಡಲು ಮುಂದಾಗಿದ್ದ ಆರ್ಥಿಕ ನೆರವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.












Click it and Unblock the Notifications