Vande Bharat; ಕೇರಳ-ಬೆಂಗಳೂರು ನಡುವೆ ಈ ವಂದೇ ಭಾರತ್ ರೈಲು ಓಡಲ್ಲ!
ಬೆಂಗಳೂರು, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹಲವು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದರು. ಆದರೆ ಬೆಂಗಳೂರು-ಕೇರಳ ನಡುವೆ ಸಂಪರ್ಕಿಸುವ ಬಹು ಬೇಡಿಕೆಯ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿಲ್ಲ, ಇದು ಜನರ ನಿರಾಸೆಗೆ ಕಾರಣವಾಗಿದೆ.
ದೇಶದ ಬಹು ಬೇಡಿಕೆಯ ವಂದೇ ಭಾರತ್ ರೈಲು ಮಾರ್ಗದಲ್ಲಿ ಕರ್ನಾಟಕದ ಬೆಂಗಳೂರು ಮತ್ತು ಕೇರಳದ ಎರ್ನಾಕುಲಂ ಸಂಪರ್ಕಿಸುವ ರೈಲು ಮಾರ್ಗವು ಸೇರಿದೆ. ಈ ಮಾರ್ಗದಲ್ಲಿ ಮಾರ್ಚ್ 12ರಿಂದ ರೈಲು ಸಂಚಾರ ಆರಂಭವಾಗಲಿದೆ ಎಂಬ ಸುದ್ದಿ ಇತ್ತು.

ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ನಡೆಸಲು ಭಾರತೀಯ ರೈಲ್ವೆ ಬೋಗಿಯನ್ನು ಸಹ ಹಂಚಿಕೆ ಮಾಡಿತ್ತು. ಆದರೆ ಕೊನೆ ಕ್ಷಣದಲ್ಲಿ ಈ ಬೋಗಿಗಳು ತಿರುವನಂತಪುರಂ ವಿಭಾಗದಿಂದ ವಾಪಸ್ ಹೋಗಿದ್ದು, ಬೆಂಗಳೂರು-ಎರ್ನಾಕುಲಂ ರೈಲು ಕನಸಾಗಿಯೇ ಉಳಿದಿದೆ.
ಬಹು ಬೇಡಿಕೆಯ ಮಾರ್ಗ: ನರೇಂದ್ರ ಮೋದಿ ಮಂಗಳವಾರ ಮೈಸೂರು-ಎಂಜಿಆರ್ ಚೆನ್ನೈ ಮಾರ್ಗದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ಏಪ್ರಿಲ್ ತನಕ ಬೆಂಗಳೂರಿನಿಂದ ಈ ರೈಲು ಸಂಚಾರ ನಡೆಸಲಿದೆ. ಬಳಿಕ ಮೈಸೂರಿಗೆ ವಿಸ್ತರಣೆಯಾಗಲಿದೆ.
ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ಓಡಿಸಲು ನೀಡಲಾಗಿದ್ದ ಬೋಗಿಯನ್ನು ಒಂದು ವಾರದ ಹಿಂದೆ ಮೈಸೂರು-ಚೆನ್ನೈ ಮಾರ್ಗದಲ್ಲಿ ಓಡಿಸಲು ವಾಪಸ್ ಪಡೆಯಲಾಗಿದೆ. ಈ ಕುರಿತು ಎರ್ನಾಕುಲಂ ಸಂಸದರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ಗೆ ಪತ್ರವನ್ನು ಸಹ ಬರೆದಿದ್ದರೆ.
ಈಗ ಹೊಸ ಬೋಗಿಗಳು ಹಂಚಿಕೆಯಾಗುವ ತನಕ ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ನಡೆಸುವುದಿಲ್ಲ. ಮಂಗಳವಾರ ತಿರುವನಂತಪುರಂ-ಕಾಸರಗೋಡು ನಡುವಿನ ವಂದೇ ಭಾರತ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ಸಹ ವಿಸ್ತರಣೆ ಮಾಡಲಾಗಿದೆ.
"ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ಓಡಿಸಲು ಕೊಚುವೇಲಿಗೆ ತರಲಾಗಿದ್ದ ವಂದೇ ಭಾರತ್ ರೈಲು ಬೋಗಿಯನ್ನು ವಾಪಸ್ ತೆಗೆದುಕೊಂಡು ಹೋಗಲಾಗಿದೆ. ದೇಶದ ಯಾವುದೇ ಮಾರ್ಗದಲ್ಲಿ ರೈಲು ಓಡಿಸಲು ನಮ್ಮ ವಿರೋಧವಿಲ್ಲ. ಆದರೆ ಬಂದಿರುವ ಬೋಗಿಯನ್ನು ವಾಪಸ್ ತೆಗೆದುಕೊಂಡು ಹೋಗುವುದು ಈ ಭಾಗದ ಜನರಿಗೆ ಮಾಡುವ ಅನ್ಯಾಯವಾಗಿದೆ" ಎಂದು ಎರ್ನಾಕುಲಂ ಸಂಸದ ಹೈಬಿ ಈಡನ್ ರೈಲ್ವೆ ಸಚಿವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
"ಎರ್ನಾಕುಲಂ-ಬೆಂಗಳೂರು ರೈಲು ಮಾರ್ಗ ಎಷ್ಟು ಪ್ರಮುಖ ಎಂದು ಅಂಕಿ ಸಂಖ್ಯೆಗಳ ಸಮೀಕ್ಷೆಯೇ ಹೇಳುತ್ತಿದೆ. ರೈಲ್ವೆ ಸಚಿವರಿಗೆ, ಅಧಿಕಾರಿಗಳಿಗೆ ಈಗಲೂ ಸಾಕಷ್ಟು ಸಮಯವಿದೆ. ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಸಂಸದ ಹೈಬಿ ಈಡನ್ ಆಗ್ರಹಿಸಿದ್ದಾರೆ.
"ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲಿ ಓಡಬೇಕಿದ್ದ ವಂದೇ ಭಾರತ್ ರೈಲು ಮೈಸೂರಿಗೆ ಹೋಗುವುದಲ್ಲಿ ಬಿಜೆಪಿ ನಾಯಕರ ಕೈವಾಡವಿದೆ. ಈ ಘಟನೆ ಹೇಗೆ ಕೇಂದ್ರ ಸರ್ಕಾರ ಕೇರಳವನ್ನು ಕಡೆಗಣಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ" ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು-ಎರ್ನಾಕುಲಂ ರೈಲು ಬೋಗಿ ವಾಪಸ್ ಹೋಗಿರುವ ಕುರಿತು ರೈಲ್ವೆ ಸಚಿವರ ಲಿಖಿತವಾಗಿ ಸ್ಪಷ್ಟನೆ ನೀಡಬೇಕು. ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ರೈಲನ್ನು ಎರ್ನಾಕುಲಂಗೆ ವಿಸ್ತರಣೆ ಮಾಡಬೇಕು. ಇಲ್ಲವೇ ಗೋವಾ-ಮಂಗಳೂರು ನಡುವಿನ ರೈಲನ್ನು ಕೊಯಿಕ್ಕೋಡ್ ಅಥವ ಎರ್ನಾಕುಲಂಗೆ ವಿಸ್ತರಣೆ ಮಾಡಬೇಕು ಎಂದು ಸಂಸದರು ಬೇಡಿಕೆ ಇಟ್ಟಿದ್ದಾರೆ.
ಎರ್ನಾಕುಲಂ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿರ್ವಹಣೆಗೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಬೋಗಿಗಳು ಸಹ ಆಗಮಿಸಿದ್ದವು. ಆದರೆ ಕೊನೆಯ ಕ್ಷಣದಲ್ಲಿ ಬೋಗಿಗಳನ್ನು ವಾಪಸ್ ತೆಗೆದುಕೊಂಡು ಹೋಗಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಈಗಾಗಲೇ ಒಂದು ವಂದೇ ಭಾರತ್ ರೈಲು ಸಂಚಾರ 2022ರ ನವೆಂಬರ್ನಲ್ಲಿ ಆರಂಭವಾಗಿದೆ. ಈಗ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಚೆನ್ನೈ ನಡುವಿನ ಹೊಸ ವಂದೇ ಭಾರತ್ ರೈಲನ್ನು ಮೈಸೂರು ತನಕ ವಿಸ್ತರಣೆ ಮಾಡಲಾಗಿದೆ.
ಆದರೆ ಮೈಸೂರು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿರ್ವಹಣೆಗೆ ಬೇಕಾದ ಮೂಲ ಸೌಲಭ್ಯ ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಆದ್ದರಿಂದ ಏಪ್ರಿಲ್ನಿಂದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಚೆನ್ನೈ ನಡುವಿನ ಹೊಸ ವಂದೇ ಭಾರತ್ ರೈಲು ಮೈಸೂರು ತನಕ ಸಂಚಾರ ನಡೆಸಲಿದೆ.












Click it and Unblock the Notifications