ನೀವು ಸ್ವಾತಂತ್ರ್ಯ ಹೋರಾಟಕ್ಕೆ ಜೈಲಿಗೆ ಹೋಗಿರಲಿಲ್ಲ: ಡಿ.ಕೆ.ಶಿವಕುಮಾರ್ ಮಾತಿಗೆ ಎಚ್.ಡಿ.ಕುಮಾರಸ್ವಾಮಿ ಕೆಂಡ
ಬಿಡದಿ ಟೌನ್ಶಿಪ್ ಯೋಜನೆ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಕುರಿತು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಗ್ದಾಳಿ ಈಗ ವೈಯಕ್ತಿಕ ಕೆಸರೆರಚಾಟಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಟೀಕೆಗಳಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಜೈಲು ವಾಸ ಹಾಗೂ ಪೊರಕೆ ಹೇಳಿಕೆಯನ್ನು ಉಲ್ಲೇಖಿಸಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆ ನೆನಪಿಸಿರುವ ಅವರು, ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಇತಿಹಾಸ ಹಾಗೂ ಇತ್ತೀಚಿನ ಹೇಳಿಕೆಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ವಾಭಿಮಾನಕ್ಕಾಗಿ ಪ್ರಧಾನಿ ಹುದ್ದೆ ತ್ಯಜಿಸಿದ ಕುಟುಂಬ ನಮ್ಮದು
ತಮ್ಮ ಕುಟುಂಬದ ಸ್ವಾಭಿಮಾನವನ್ನು ಎತ್ತಿಹಿಡಿದಿರುವ ಕುಮಾರಸ್ವಾಮಿ, ದೇಶದ ಹೆಮ್ಮೆಯ ಕನ್ನಡಿಗರಾದ ಎಚ್.ಡಿ.ದೇವೇಗೌಡರು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿ ಬಂದವರು ಎಂದು ಹೇಳಿಕೊಂಡಿದ್ದಾರೆ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಾಯಕರು ಏನೆಲ್ಲ ಸಂಚು ರೂಪಿಸುತ್ತಿದ್ದಾರೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ ಎಂದಿದ್ದಾರೆ.

ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರ ಜೈಲು ವಾಸದ ಇತಿಹಾಸ ಕೆದಕಿರುವ ಹೆಚ್ಡಿಕೆ, ಜೈಲಿಗೆ ಹೋಗಿ ಬಂದಿದ್ದನ್ನೇ ದೇಶದ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವ ಶಿವಕುಮಾರ್ ಅವರೇ, ನೀವು ಜೈಲಿಗೆ ಹೋಗಿದ್ದು ಯಾವುದೇ ಸ್ವಾತಂತ್ರ್ಯ ಹೋರಾಟಕ್ಕಲ್ಲ ಎಂದು ಲೇವಡಿ ಮಾಡಿದ್ದಾರೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಕಲೆಕ್ಷನ್ ಆಡಳಿತ ಮತ್ತು ಕಪಟ ನಾಟಕವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಡಿ.ಕೆ.ಶಿವಕುಮಾರ್ ನೀಡಿದ್ದ "ಪೊರಕೆ" ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಜವಾಬ್ದಾರಿಯುತ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು "ಬನ್ನಿ, ನನಗೆ ಪೊರಕೆಯಲ್ಲಿ ಹೊಡೆಯಿರಿ" ಎಂದು ಮಾತನಾಡುವುದು ಅತ್ಯಂತ ಕೀಳು ಮಟ್ಟದ ರಾಜಕೀಯ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಾಮಾನ್ಯ ಜ್ಞಾನ ಇರುವವರೂ ಸಹ ಸಾರ್ವಜನಿಕವಾಗಿ ಇಷ್ಟು ಕೀಳಾಗಿ ಮಾತನಾಡುವುದಿಲ್ಲ ಎಂದಿರುವ ಕುಮಾರಸ್ವಾಮಿ, ಇಂತಹ ಬೇಜವಾಬ್ದಾರಿ ಮಾತುಗಳಿಂದಾಗಿ ಕಾಂಗ್ರೆಸ್ ಸರ್ಕಾರದ ಕೈಯಲ್ಲಿ ಇಡೀ ಕರ್ನಾಟಕ ರಾಜ್ಯದ ಘನತೆ ಹರಾಜಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಮ್ಮ ಅವಧಿಯಲ್ಲಿ ಡಿಎಲ್ಎಫ್ ವ್ಯವಹಾರ ನಡೆದಿದೆ ಎಂಬ ಡಿಕೆಶಿ ಆರೋಪವನ್ನು ದಿನಾಂಕ ಮತ್ತು ದಾಖಲೆಗಳ ಸಮೇತ ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ. ಈ ವ್ಯವಹಾರ ನಡೆದಿದ್ದು ತಮ್ಮ ಅಧಿಕಾರಾವಧಿಯಲ್ಲಿ ಅಲ್ಲ, ಬದಲಿಗೆ ರಾಜ್ಯಪಾಲರ ಆಡಳಿತದಲ್ಲಿದ್ದಾಗ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಸಿಎಂ ಆಗಿದ್ದಾಗ ಅಂದರೆ ಆಗಸ್ಟ್ 1, 2007ರಂದೇ ವಿಧಾನಸಭೆಯಲ್ಲಿ ಈ ಯೋಜನೆ ನಿಲ್ಲಿಸುವುದಾಗಿ ಘೋಷಿಸಿದ್ದಾಗಿ ನೆನಪಿಸಿದ್ದಾರೆ.
ಅದಾದ ಬಳಿಕ ಅಕ್ಟೋಬರ್ 9, 2007ರಂದು ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನವೆಂಬರ್ನಲ್ಲಿ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿದ್ದಾಗ ಈ ಹಣಕಾಸಿನ ವ್ಯವಹಾರ ನಡೆದಿದೆ ಎಂದು ಸಾಕ್ಷಿ ಒದಗಿಸಿದ್ದಾರೆ. ಸತ್ಯ ಮರೆಮಾಚಿ ಸುಳ್ಳು ಹರಡುವ ನೀಚ ರಾಜಕೀಯವನ್ನು ಬಿಟ್ಟು, ಮೊದಲು ರೈತರ ಹಿತ ಕಾಯುವ ಕೆಲಸ ಮಾಡಿ ಎಂದು ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್ ಅವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.












Click it and Unblock the Notifications