Bengaluru Vehicle: ಬೆಂಗಳೂರಲ್ಲಿ ಈ ರೀತಿ ವಾಹನ ನಿಲ್ಲಿಸುವವರ ಮೇಲೆ ಕ್ರಮ: ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ
Bengaluru Vehicle: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆಯ ನಂತರ ಇದೀಗ ಬೀದಿಬದಿ ವಾಹನಗಳ / ಬಿಡಾಡಿ ವಾಹನಗಳ ಜಪ್ತಿಗೆ ಸರ್ಕಾರ ಮುಂದಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ನಗರ ಪಾಲಿಕೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವರಾಹಿ ದೇವಸ್ಥಾನದ ಬಳಿ ಬಿಡಾಡಿ ವಾಹನಗಳ ಟೋಯಿಂಗ್ ಕಾರ್ಯಕ್ಕೆ ಗಾಂಧಿನಗರದ ಎಂ.ಡಿ ಬ್ಲಾಕ್ನ ವಿರಾಹಿ ದೇವಸ್ಥಾನದ ಬಳಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಸಾಂಕೇತಿಕವಾಗಿ ಚಾಲನೆ ನೀಡಿದ್ದಾರೆ. ಅಸ್ತ್ರಂ ತಂತ್ರಾಂಶದದಲ್ಲಿ ಈವರೆಗೆ ಗುರುತಿಸಿರುವ ಬಿಡಾಡಿ ವಾಹನಗಳ ಮಾಹಿತಿಯನ್ನು ಸಹ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸರ್ಕಾರ ಸಹ ಹಂಚಿಕೊಂಡಿದೆ. ಈ ಮೂಲಕ ಸಂಚಾರಿ ಪೊಲೀಸರು ಗುರುತಿಸಿರುವ ಸಂಖ್ಯೆಯು 2751 ಹಾಗೂ ಸಾರ್ವಜನಿಕರು ಗುರುತಿರುವ ಸಂಖ್ಯೆ 1498 ಆಗಿದೆ. ಒಟ್ಟು ಬಿಡಾಡಿ ವಾಹನಗಳ ಸಂಖ್ಯೆಯು 4249 ಆಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ 1034 ವಾಹನಗಳಿಗೆ ನೋಟಿಸ್ಗಳನ್ನು ಅಂಟಿಸಲಾಗಿದ್ದು, 72 ವಾಹನಗಳ ಮಾಲಿಕರು ದಂಡ ಪಾವತಿಸಿ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ ಎಂದೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು, ರಸ್ತೆ ಸಾರ್ವಜನಿಕರ ಆಸ್ತಿ. ಆದರೆ, ಕೆಲವರು ರಸ್ತೆಬದಿಯಲ್ಲೇ ತಮ್ಮ ವಾಹನಗಳನ್ನು ನಿಲುಗಡೆಗೊಳಿಸಿ ವರ್ಷಗಳೇ ಕಳೆದರೂ ಅಲ್ಲಿಂದ ತೆಗೆಯದೆ, ರಸ್ತೆಗಳನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ವರ್ತಿಸುವುದು ಸರಿಯಲ್ಲ. ಇದರಿಂದ ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ತೊಂದರೆ. ಕೃತಕ ಟ್ರಾಫಿಕ್ ಸಮಸ್ಯೆಯೂ ತಲೆದೋರುತ್ತಿದೆ. ಹೀಗಾಗಿ ಕಳೆದ ಹತ್ತು ದಿನಗಳ ಹಿಂದೆಯೇ ಇಂತಹ ವಾಹನಗಳ ತೆರವಿಗೆ ಸ್ಟಿಕ್ಕರ್ ಅಭಿಯಾನ ಆರಂಭಿಸಲಾಗಿತ್ತು. ಸ್ಟಿಕ್ಕರ್ ಅಂಟಿಸಿಯೂ ಮಾಲೀಕರು ತಮ್ಮ ವಾಹನಗಳನ್ನು ತೆರವುಗೊಳಿಸದ ಕಾರಣ ಜುಲೈ 18ರ ಶನಿವಾರ ವಾಹನಗಳ ಟೋಯಿಂಗ್ಗೆ ಅಧಿಕೃತ ಚಾಲನೆ ನೀಡಲಾಗಿದೆ ಎಂದಿದ್ದಾರೆ.
ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ, ಸುದೀರ್ಘ ವರ್ಷದಿಂದ ಬೀದಿಬದಿ ವಾಹನಗಳನ್ನು ನಿಲ್ಲಿಸಿರುವ ವಾಹನಗಳ ಒತ್ತುವರಿ ತೆರವು ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದೀಗ ಅಧಿಕೃತವಾಗಿ ವಾಹನಗಳ ಒತ್ತುವರಿ ತೆರವು ಕಾರ್ಯಾಚರಣೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ವಾಹನಗಳನ್ನು ನಿಲ್ಲಿಸಿರುವವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಈ ವೇಳೆ ಸ್ಥಳೀಯ ಶಾಸಕರಾದ ದಿನೇಶ್ ಗುಂಡೂರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಜಿ. ಜಗದೀಶ್, ಹೆಚ್ಚುವರಿ ಆಯುಕ್ತರಾದ ವೆಂಕಟಾ ಚಲಪತಿ, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications