ಕೇರಳ-ಬೆಂಗಳೂರು ನಡುವೆ ಓಡಲಿದೆ ಕೆಎಸ್ಆರ್ಟಿಸಿ ಐಷಾರಾಮಿ ಬಸ್
ಬೆಂಗಳೂರು, ಏಪ್ರಿಲ್ 22: ಕೇರಳ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು ನಡುವೆ ಐಷಾರಾಮಿ ಬಸ್ ಸಂಚಾರ ಆರಂಭವಾಗಲಿದೆ. ಕೇರಳ ಮುಖ್ಯಮಂತ್ರಿಗಳು, ಸಚಿವರ ಪ್ರವಾಸಕ್ಕಾಗಿ ಖರೀದಿ ಮಾಡಿದ್ದ ಬಸ್ ಈಗ ಜನರ ಬಳಕೆಗೆ ಸಿಗಲಿದೆ.
ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) 2023ರಲ್ಲಿ 'ನವ ಕೇರಳ ಸಭೆ' ರಾಜ್ಯ ಪ್ರವಾಸಕ್ಕೆ ಖರೀದಿ ಮಾಡಲಾಗಿದ್ದ ಐಷಾರಾಮಿ ಬಸ್ ಅನ್ನು ಕರ್ನಾಟಕ ಮತ್ತು ಕೇರಳ ನಡುವೆ ಓಡಿಸಲಿದೆ. ಈ ಕುರಿತು ಕಾಗದ ಪತ್ರ ವ್ಯವಹಾರವೂ ಮುಕ್ತಾಯವಾಗುತ್ತಾ ಬಂದಿದೆ.

2023ರಲ್ಲಿ ಕೇರಳ ಮುಖ್ಯಮಂತ್ರಿಗಳು ಮತ್ತು ಸಚಿವರು ಜನರ ಅಹವಾಲು ಸ್ವೀಕಾರ ಮಾಡಲು 'ನವ ಕೇರಳ ಸಭೆ' ಹೆಸರಿನ ರಾಜ್ಯ ಪ್ರವಾಸ ಕೈಗೊಂಡಿದ್ದರು. ಇದಕ್ಕೆ ಬಳಕೆ ಮಾಡಿದ್ದ ಬೆಂಜ್ ಕಂಪನಿಯ ಐಷಾರಾಮಿ ಬಸ್ ಅನ್ನು ಈಗ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ಮರು ವಿನ್ಯಾಸ ಮಾಡಲಾಗಿದೆ.
ಯಾವ ಮಾರ್ಗದಲ್ಲಿ ಸಂಚಾರ?: ಸುಮಾರು 1.05 ಕೋಟಿ ರೂ. ಬೆಲೆಯ ಐಷಾರಾಮಿ ಬಸ್ ಇದಾಗಿದೆ. ಇದನ್ನು ಕೆಎಸ್ಆರ್ಟಿಸಿ ಬೆಂಗಳೂರು-ತಿರುವನಂತಪುರಂ ಅಥವ ಬೆಂಗಳೂರು-ಕೊಯಿಕ್ಕೋಡ್ ಮಾರ್ಗದಲ್ಲಿ ವಿಶೇಷ ದರದಲ್ಲಿ ಓಡಿಸಲಿದೆ. ಯಾವ ಮಾರ್ಗ ಎಂದು ಕೆಲವೇ ದಿನಗಳಲ್ಲಿ ತಿಳಿಯಲಿದೆ.
'ನವ ಕೇರಳ ಸಭೆ' ಹೆಸರಿನ ರಾಜ್ಯ ಪ್ರವಾಸ ಮುಗಿದ ಬಳಿಕ ಬಸ್ ಅನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೀಡಲಾಗಿದೆ. ಕರ್ನಾಟಕ ಮೂಲದ ಬಸ್ ವಿನ್ಯಾಸ ಕಂಪನಿ ಈ ಬಸ್ ಅನ್ನು ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಮರು ವಿನ್ಯಾಸಗೊಳಿಸಿದೆ. ಕೇರಳ ಸಾರಿಗೆ ಇಲಾಖೆಯ ಒಪ್ಪಿಗೆ ಬಳಿಕ ಈ ಬಸ್ ಸಂಚಾರ ಆರಂಭವಾಗಲಿದೆ.
ಕೇರಳ ಸರ್ಕಾರ 'ನವ ಕೇರಳ ಸಭೆ' ಹೆಸರಿನ ರಾಜ್ಯ ಪ್ರವಾಸಕ್ಕೆ ಐಷಾರಾಮಿ ಬಸ್ ಖರೀದಿ ಮಾಡಿದ್ದು ರಾಜ್ಯದಲ್ಲಿ ಟೀಕೆಗೆ ಒಳಗಾಗಿತ್ತು. ಕೆಲವು ದಿನಗಳ ಪ್ರವಾಸಕ್ಕಾಗಿ ಜನರ ತೆರಿಗೆ ಹಣದಿಂದ ಬಸ್ ಖರೀದಿ ಮಾಡಲಾಗಿದೆ ಎಂದು ಟೀಕಿಸಲಾಗಿತ್ತು. ಆದ್ದರಿಂದ ಈಗ ಬಸ್ ಅನ್ನು ಜನರ ಸಂಚಾರಕ್ಕೆ ಉಪಯೋಗ ಮಾಡಲಾಗುತ್ತಿದೆ.
25 ಸೀಟಿನ ಈ ಬಸ್ ಶೌಚಾಲಯ ವ್ಯವಸ್ಥೆ ಹೊಂದಿದೆ. ಪ್ರಯಾಣದ ಸಂದರ್ಭದಲ್ಲಿ ಲಘು ಉಪಹಾರ, ಕುಡಿಯುವ ನೀರು ನೀಡುವಂತೆ ಈಗ ವಿನ್ಯಾಸಗೊಳಿಸಲಾಗುತ್ತಿದೆ. ದೂರ ಪ್ರಯಾಣದ ಮಾರ್ಗದಲ್ಲಿ ಆಕರ್ಷಕ ದರದಲ್ಲಿ ಈ ಬಸ್ ಓಡಿಸಿ, ನಿಗಮಕ್ಕೂ ಸಹ ಆದಾಯ ಸಂಗ್ರಹ ಮಾಡಲು ಕೆಎಸ್ಆರ್ಟಿಸಿ ಮುಂದಾಗಿದೆ.
ಈ ಬಸ್ ಖರೀದಿ ಮಾಡಲು ಕೆಎಸ್ಆರ್ಟಿಸಿಯೇ ಹಣ ನೀಡಿತ್ತು. ಈಗ ಪ್ರಯಾಣಿಕರ ಸಂಚಾರಕ್ಕೆ ತಕ್ಕಂತೆ ಮರು ವಿನ್ಯಾಸಗೊಳಿಸಲು ಸಹ ಅದೇ ವೆಚ್ಚ ಭರಿಸುತ್ತಿದೆ. ಈ ಬಸ್ ಪ್ರಯಾಣ ದರ ಮತ್ತು ಯಾವ ಮಾರ್ಗದಲ್ಲಿ ಓಡಿಸಬೇಕು ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ.












Click it and Unblock the Notifications