ಜ್ಞಾನವಾಪಿ ವಿವಾದ: 'ಶಿವಲಿಂಗ' ಕಾರ್ಬನ್ ಡೇಟಿಂಗ್ ಬೇಡ ಎಂದ ವಾರಣಾಸಿ ಕೋರ್ಟ್
ವಾರಣಾಸಿ ಅಕ್ಟೋಬರ್ 14: ಜ್ಞಾನವಾಪಿ ಮಸೀದಿಯ ವಝುಖಾನಾ ಅಥವಾ ಜಲಾಶಯದಲ್ಲಿ ಪತ್ತೆಯಾದ ಶಿವಲಿಂಗ ಎಂದು ಹೇಳಿಕೊಳ್ಳುವ ರಚನೆಯ ಕಾರ್ಬನ್ ಡೇಟಿಂಗ್ಗೆ ಒತ್ತಾಯಿಸಿ ಹಿಂದೂ ಕಡೆಯವರು ಸಲ್ಲಿಸಿದ ಮನವಿಯನ್ನು ವಾರಣಾಸಿ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಮೇ 16 ರಂದು ಸರ್ವೆ ಕಾರ್ಯದ ವೇಳೆ ಮಸೀದಿಯ ವಝೂಖಾನಾ ಅಥವಾ ಜಲಾಶಯದಲ್ಲಿ ಕಂಡುಬಂದ "ಶಿವಲಿಂಗ" ಆಸ್ತಿಯ ಭಾಗವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಶಿವಲಿಂಗದಂತಹ ರಚನೆಯ ಕಾರ್ಬನ್ ಡೇಟಿಂಗ್ ಮತ್ತು ಇತರ ವೈಜ್ಞಾನಿಕ ಪರೀಕ್ಷೆಗೊಳಪಡಿಸಲು ಹಿಂದೂ ಕಡೆಯವರು ಒತ್ತಾಯಿಸಿದ್ದರು.
ದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಚಕ್ರಗಳು ಜಾಮ್
ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ಶಾಸ್ತ್ರದ ವಸ್ತು ಅಥವಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ವಯಸ್ಸನ್ನು ಕಂಡುಹಿಡಿಯುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಆದರೆ ಹಿಂದೂ ಕಡೆಯವರು ಸಲ್ಲಿಸಿದ್ದ ಕಾರ್ಬನ್ ಡೇಟಿಂಗ್ ಅರ್ಜಿಯನ್ನು ಜ್ಞಾನವಾಪಿ ಮಸೀದಿ ಸಮಿತಿ ವಿರೋಧಿಸಿತ್ತು.
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿ ಜ್ಞಾನವಾಪಿ ಮಸೀದಿ ಇದೆ. ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೆಡವಲ್ಪಟ್ಟ ಹಿಂದೂ ರಚನೆಯ ಒಂದು ಭಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ವಾದವನ್ನು ಪುನರುಜ್ಜೀವನಗೊಳಿಸುವ ಅರ್ಜಿಯನ್ನು ವಾರಣಾಸಿ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗುತ್ತಿದೆ.
ಕಳೆದ ತಿಂಗಳು, ಐದು ಹಿಂದೂ ಮಹಿಳೆಯರಲ್ಲಿ ನಾಲ್ಕು ಅರ್ಜಿದಾರರು "ಶಿವಲಿಂಗ" ರಚನೆ ಕುರಿತು "ವೈಜ್ಞಾನಿಕ ತನಿಖೆ" ಕೋರಿ ಮನವಿ ಸಲ್ಲಿಸಿದರು. ಅದರ ವಯಸ್ಸನ್ನು ನಿರ್ಧರಿಸುವುದು ಅಗತ್ಯ ಎಂದು ಅವರು ವಾದಿಸಿದರು. ಹಿಂದೂ ದೇವತೆಗಳ ಪುರಾತನ ವಿಗ್ರಹಗಳು ಮಸೀದಿಯೊಳಗೆ ಇವೆ ಎಂದು ಮಹಿಳೆಯರು ಹೇಳಿಕೊಂಡಿದ್ದಾರೆ.
ಆದರೆ ಮಸೀದಿ ಸಮಿತಿಯು ವೈಜ್ಞಾನಿಕ ತನಿಖೆಯನ್ನು ವಿರೋಧಿಸಿತು. ವೈಜ್ಞಾನಿಕ ತನಿಝೆಯಿಂದ ವಿಗ್ರಹಕ್ಕೆ ಹಾನಿಯಾಗುತ್ತದೆ ಎಂಬುದು ಮಸೀದಿ ಸಮಿತಿಯ ವಾದವಾಗಿದೆ. ಜೊತೆಗೆ ಪ್ರಕರಣ ಮಸೀದಿಯೊಳಗಿನ ದೇಗುಲದಲ್ಲಿ ಪೂಜೆ ಮಾಡುವ ಬಗ್ಗೆ ಹೊರತು, ಶಿವಲಿಂಗದಂತಿರುವ ರಚನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿತು. "ಶಿವಲಿಂಗ" ಎಂದು ಕರೆಯಲ್ಪಡುವ ವಸ್ತುವು ವಾಸ್ತವವಾಗಿ "ಕಾರಂಜಿ" ಎಂದು ಮಸೀದಿ ಸಮಿತಿಯ ವಾದವಾಗಿದೆ.
ಕಳೆದ ವಾರ, "ಶಿವಲಿಂಗ" ವನ್ನು ಪ್ರಕರಣದ ಭಾಗವಾಗಿ ಮಾಡಬಹುದೇ ಮತ್ತು ವೈಜ್ಞಾನಿಕ ತನಿಖೆಗೆ ಆದೇಶಿಸಬಹುದೇ ಎಂದು ನ್ಯಾಯಾಲಯ ಕೇಳಿದೆ. ಹಿಂದೂ ಮಹಿಳೆಯರ ಪರ ವಕೀಲರಾದ ವಿಷ್ಣು ಶಂಕರ್ ಜೈನ್ ಅವರು, ಮಸೀದಿಯಲ್ಲಿ ಸಿಕ್ಕ ವಸ್ತು ಶಿವಲಿಂಗದ ರಚನೆಯಾಗಿದೆ ಎಂದು ವಾದಿಸಿದ್ದಾರೆ. ಹೀಗಾಗಿ ವೈಜ್ಞಾನಿಕ ತನಿಖೆಗಾಗಿ ಆಯೋಗಕ್ಕೆ ಆದೇಶ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಹೇಳುವ ನಿಯಮವನ್ನು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ ಎಂದು ಅವರು ಹೇಳಿದರು.
ಸೆಪ್ಟೆಂಬರ್ 12 ರಂದು, ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಮಸೀದಿ ಸಂಕೀರ್ಣದೊಳಗೆ ವರ್ಷಪೂರ್ತಿ ಪೂಜೆಗೆ ಅನುಮತಿ ಕೋರಿ ಹಿಂದೂ ಮಹಿಳೆಯರು ಮಾಡಿದ ಮನವಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಮಸೀದಿ ಸಮಿತಿ ವಾದಿಸಿದೆ.