ದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಚಕ್ರಗಳು ಜಾಮ್
ಎರಡು ದಿನಗಳ ಹಿಂದೆ ಜಾನುವಾರುಗಳಿಗೆ ಡಿಕ್ಕಿ ಹೊಡೆದ ದೇಶದ ಅತ್ಯಂತ ಸೂಪರ್ಟೆಕ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಇಂದು ತಾಂತ್ರಿಕ ದೋಷದಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್ಪ್ರೆಸ್ನ ಚಕ್ರಗಳು ಬುಲಂದ್ಶಹರ್ನಲ್ಲಿ ಜಾಮ್ ಆಗಿವೆ. ಇದರಿಂದಾಗಿ ರೈಲು ಎರಡು ನಿಲ್ದಾಣಗಳ ನಡುವೆ ಗಂಟೆಗಟ್ಟಲೆ ನಿಂತಿತ್ತು.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದೋಷ:
ದೇಶದ ಅತ್ಯಂತ ಸೂಪರ್ಟೆಕ್ ರೈಲು ಎಂದು ಪರಿಗಣಿಸಲ್ಪಟ್ಟಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಪಘಾತಗಳು ಮತ್ತು ಅವಾಂತರಗಳು ನಿರಂತರವಾಗಿ ಸಂಭವಿಸುತ್ತಿವೆ. ಕಳೆದ ಎರಡು ದಿನಗಳಿಂದ ಗುಜರಾತ್ನಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಜಾನುವಾರುಗಳಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಇದೀಗ ಇಂದು ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ತಾಂತ್ರಿಕ ದೋಷದಿಂದ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಚಕ್ರಗಳು ಜಖಂಗೊಂಡಿವೆ. ಇದರಿಂದಾಗಿ ಬುಲಂದ್ಶಹರ್ನ ಡಂಕೌರ್ ಮತ್ತು ವೇರ್ ರೈಲು ನಿಲ್ದಾಣದ ನಡುವೆ ರೈಲುಗಳು ಗಂಟೆಗಳ ಕಾಲ ಸ್ಥಗಿತಗೊಂಡಿವೆ.

ಮಾಧ್ಯಮ ವರದಿಗಳ ಪ್ರಕಾರ, ಬೆಳಗ್ಗೆ 7 ಗಂಟೆಗೆ ವಂದೇ ಭಾರತ್ ಎಕ್ಸ್ಪ್ರೆಸ್ನ ಚಕ್ರಗಳು ಜಾಮ್ ಆಗಿವೆ. ಸುಮಾರು 5 ಗಂಟೆಗಳ ಕಾಲ ಚಕ್ರಗಳನ್ನು ಸರಿಪಡಿಸಲು ಪ್ರಯತ್ನಿಸಿದರು. ಆದರೆ ಯಶಸ್ಸು ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಂದೇ ಭಾರತ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಮತ್ತೊಂದು ರೈಲಿನಲ್ಲಿ ಗಮ್ಯಸ್ಥಾನಕ್ಕೆ ಕರೆದೊಯ್ಯಲಾಯಿತು. ರೈಲನ್ನು ಹೇಗೋ ಖುರ್ಜಾ ಜಂಕ್ಷನ್ಗೆ ತರಲಾಯಿತು ಎಂದು ಹೇಳಲಾಯಿತು. ತಾಂತ್ರಿಕ ತಂಡದ ಅಧಿಕಾರಿಗಳು ದೋಷವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದರು.
ರೈಲುಗಳ ಮಾರ್ಗ ಬದಲಿಸಬೇಕಾಯಿತು
ವಂದೇ ಭಾರತ್ ರೈಲಿನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳ ಮಾರ್ಗವನ್ನು ಬದಲಾಯಿಸಬೇಕಾಯಿತು. ಸೀಮಾಂಚಲ್ ಎಕ್ಸ್ ಪ್ರೆಸ್ ಸೇರಿದಂತೆ ಕೆಲವು ಎಕ್ಸ್ ಪ್ರೆಸ್ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಕೆಲವು ರೈಲುಗಳ ಮಾರ್ಗವನ್ನೂ ಬದಲಾಯಿಸಲಾಗಿದೆ. ಖುರ್ಜಾ ಜಂಕ್ಷನ್ನ ಎಸ್ಎಸ್ ಘನಶ್ಯಾಮ್ ದಾಸ್ ಮೀನಾ ಮಾತನಾಡಿ, "ವಂದೇ ಭಾರತ್ ಎಕ್ಸ್ಪ್ರೆಸ್ (22436) ಕಳೆದ 5 ಗಂಟೆಗಳಿಂದ ವೀಲ್ ಜಾಮ್ನಿಂದ ವೇರ್ ಮತ್ತು ಡಂಕೌರ್ ನಿಲ್ದಾಣದ ನಡುವೆ ಟ್ರ್ಯಾಕ್ನಲ್ಲಿ ನಿಂತಿದೆ. ತಾಂತ್ರಿಕ ತಂಡದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈಲನ್ನು ಪರಿಶೀಲಿಸುವ ಕೆಲಸ ಮಾಡುತ್ತಿದ್ದಾರೆ," ಎಂದರು.

ರೈಲು ಸರಿಯಾಗಲು ಸಮಯ ಹಿಡಿಯಬಹುದು ಎನ್ನುತ್ತಾರೆ ತಾಂತ್ರಿಕ ತಂಡ. ಎಲ್ಲಾ ಚಕ್ರಗಳನ್ನು ಪರಿಶೀಲಿಸಲಾಗುತ್ತಿದೆ. ಮೊನ್ನೆ ಅಕ್ಟೋಬರ್ 6ರಂದು ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಅಕ್ಟೋಬರ್ 7ರಂದು ಆನಂದ್ ನಿಲ್ದಾಣದ ಬಳಿ ಹಸು ಡಿಕ್ಕಿ ಹೊಡೆದು ವಂದೇ ಭಾರತ್ ಎಕ್ಸ್ಪ್ರೆಸ್ನ ಇಂಜಿನ್ಗೆ ಹಾನಿಯಾಗಿತ್ತು.












Click it and Unblock the Notifications