ಕರುಣಾನಿಧಿ ನಿಧನ: ಮುಗಿಲುಮುಟ್ಟಿದ ಜನತೆಯ ಆಕ್ರಂದನ (In Pics)
ಬೆಂಗಳೂರು, ಆಗಸ್ಟ್ 8: ಡಿಎಂಕೆ ವರಿಷ್ಠರಾಗಿದ್ದ ಬಹುಮುಖ ವ್ಯಕ್ತಿತ್ವದ ಎಂ.ಕರುಣಾನಿಧಿ ಮಂಗಳವಾರ ಸಂಜೆ ನಿಧನರಾಗಿದ್ದಾರೆ. ರಾಜಕೀಯ, ಸಿನಿಮಾ ಮತ್ತು ದ್ರಾವಿಡ ಹೋರಾಟಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದವರು. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಹಲವಾರು ವರ್ಷಗಳ ಕಾಲ ಕಿಂಗ್ ಮೇಕರ್ ಆಗಿ ಪಾತ್ರ ನಿರ್ವಹಿಸಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆಯ ಪರಮೋಚ್ಚ ನಾಯಕ ಮತ್ತುವೇಲು ಕರುಣಾನಿಧಿ ವಿಧಿವಶರಾಗಿದ್ದು, ರಾಜಾಜಿ ಹಾಲ್ ನಲ್ಲಿ ಪಾರ್ಥೀವ ಶರೀರವನ್ನು ಇರಿಸಲಾಗಿದೆ.
LIVE: ಮರೀನಾ ಬೀಚ್ ನಲ್ಲೇ ಕರುಣಾನಿಧಿ ಅಂತ್ಯಕ್ರಿಯೆ: ಮದ್ರಾಸ್ ಕೋರ್ಟ್
ಜನತೆಯ ಆಕ್ರಂದನ ಮುಗಿಲುಮುಟ್ಟಿದೆ. 11 ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರುಣಾನಿಧಿಯವರು ನಿನ್ನೆ ಸಂಜೆ 6.10ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕರುಣಾನಿಧಿಯವರ ಅಗಲಿಕೆ ಅಸಂಖ್ಯಾತ ಡಿಎಂಕೆ ಕಾರ್ಯಕರ್ತರನ್ನು ಶೋಕಸಾಗರದಲ್ಲಿ ದೂಡಿದೆ.
'ಕೊನೆಯ ಬಾರಿ ಅಪ್ಪ ಎಂದು ಕರೆಯಲೇ?' ಕರುಣಾನಿಧಿಗೆ ಸ್ಟಾಲಿನ್ ಭಾವುಕ ಪತ್ರ!
ಕಲೈನಾರ್ ಎಂದೇ ಖ್ಯಾತರಾದ ಎಂ. ಕರುಣಾನಿಧಿ ಅವರು 1924ರ ಜೂನ್ 3ರಲ್ಲಿ ಜನಿಸಿದರು. ಹೋರಾಟ ಮತ್ತು ರಾಜಕೀಯದಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಹೊಂದಿದ್ದ ಕರುಣಾನಿಧಿ, 14ನೇ ವಯಸ್ಸಿನಲ್ಲೇ ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಆ ಹೊತ್ತಿನ ತಮಿಳುನಾಡಿನ ಪ್ರಭಾವಿ ನಾಯಕ, ಜಸ್ಟಿಸ್ ಪಾರ್ಟಿಯ ನಾಯಕ ಅಳಗಿರಿ ಸ್ವಾಮಿ ಅವರ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದರು.
ಕರಿಣಾನಿಧಿ ನಿಧನಕ್ಕೆ ಜನರ ಆಕ್ರಂದನ
ಡಿಎಂಕೆ ನಾಯಕ ಎಂ ಕರುಣಾನಿಧಿ ನಿಧನದಿಂದ ಡಿಎಂಕೆ ನಾಯಕರೂ ಸೇರಿದಂತೆ ತಮಿಳುನಾಡು ಜನತೆ ಶೋಕ ಸಾಗರದಲ್ಲಿ ಮುಳುಗಿದೆ. ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡ ಹಿನ್ನಲೆಯಲ್ಲಿ ಡಿಎಂಕೆ ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿಯಬಹುದು ಎಂಬ ಕಾರಣಕ್ಕೆ ತಮಿಳುನಾಡಿನಾದ್ಯಂತ 2 ಲಕ್ಷಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಕರುಣಾನಿಧಿ ಹೋರಾಟದಲ್ಲೂ ಭಾಗಿ
ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಬರುವುದಕ್ಕೂ ಮೊದಲು ಹೋರಾಟಗಳಲ್ಲೇ ಹೆಚ್ಚು ಗುರುತಿಸಿಕೊಂಡಿದ್ದ ಕರುಣಾನಿಧಿ, ಯುವಕರ ಸಂಘ ಕಟ್ಟಿದ್ದರು. ಸಂಘದ ಸದಸ್ಯರಿಗಾಗಿ 'ಮನಾವರ್ ನೇಸನ್' ಎಂಬ ಪ್ರಕಟಣೆಯನ್ನು ಹೊರತರುತ್ತಿದ್ದರು. ಅಲ್ಲದೆ, ತಮಿಳ್ ಮನಾವರ್ ಮಂದರಮ್ ಎಂಬ ಸಂಘಟನೆಯನ್ನು ಸ್ಥಾಪಿಸುವ ಮೂಲಕ ದ್ರಾವಿಡ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ಪಾರ್ಥಿವ ಶರೀರ ರಾಜಾಜಿ ಹಾಲ್ನಲ್ಲಿ ಇರಿಸಲಾಗಿದೆ
ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದ ಕರುಣಾನಿಧಿಯವರ ಪಾರ್ಥಿವ ಶರೀರವನ್ನು ರಾತ್ರಿ ಅವರ ಮನೆಗೆ ಕೊಂಡೊಯ್ಯಲಾಯಿತು. ಬಳಿಕ ಬುಧವಾರ ಬೆಳಗ್ಗೆ 4 ಗಂಟೆ ವೇಳೆಗೆ ದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ರಾಜಾಜಿ ಹಾಲ್ ಗೆ ತರಲಾಗಿದೆ.
ತಮಿಳರ ಕಣ್ಮಣಿಯ ನೆನಪು ಮಾತ್ರ
ಕರುಣಾನಿಧಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. 12 ಬಾರಿ ಶಾಸಕರಾಗಿ ತಮಿಳುನಾಡು ವಿಧಾನಸಭೆ ಪ್ರವೇಶಿಸಿದ್ದ ಕರುಣಾನಿಧಿ ಅತಿ ಹಿರಿಯ ಮುಖ್ಯಮಂತ್ರಿ ಎಂಬ ಶ್ರೇಯಸ್ಸನ್ನು ಪಡೆದುಕೊಂಡಿದ್ದರು.