'ಕೊನೆಯ ಬಾರಿ ಅಪ್ಪ ಎಂದು ಕರೆಯಲೇ?' ಕರುಣಾನಿಧಿಗೆ ಸ್ಟಾಲಿನ್ ಭಾವುಕ ಪತ್ರ!
ಚೆನೈ, ಆಗಸ್ಟ್ 08: 'ನಾನು ನಿಮ್ಮನ್ನು ಯಾವತ್ತೂ ತಲೈವಾರ್(ನಾಯಕ) ಎಂದೇ ಕರೆಯುತ್ತಿದ್ದೆ. ಈಗ ಕೊನೆಯ ಬಾರಿಗೆ ನಾನು ನಿಮ್ಮನ್ನು 'ಅಪ್ಪ' ಎಂದು ಕರೆಯಲೇ?...' ಡಿಎಂಕೆ ಮುಖಂಡ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಗಲಿಕೆಯ ನಂತರ ಅವರ ಮುದ್ದಿನ ಪುತ್ರ ಎಂ ಕೆ ಸ್ಟಾಲಿನ್ ಬರೆದ ಪತ್ರದ ಸಾಲು ಇದು!
ತಂದೆ-ಮಗನ ನಡುವಿನ ಅಪೂರ್ವ ಬಾಂಧ್ಯವ್ಯಕ್ಕೆ ಕನ್ನಡಿಯಾಗುವ ಈ ಭಾವುಕ ಪತ್ರವನ್ನು ಸ್ಟಾಲಿನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿದ್ದಾರೆ. ಕರುಣಾನಿಧಿ ಅವರಬಗ್ಗೆ ಅವರಿಗಿದ್ದ ಅಭಿಮಾನ, ಅಕ್ಕರೆಯ ಪರಾಕಾಷ್ಠೆಯನ್ನು ಈ ಮೂಲಕ ಅಭಿವ್ಯಕ್ತಿಸಿದ್ದಾರೆ.
ತಮಿಳುನಾಡು ರಾಜಕೀಯದ ಕ್ರಾಂತಿಕಾರಿ ಎಂದೇ ಹೆಸರಾಗಿದ್ದ ಡಿಎಂಕೆ ನಾಯಕ ಎಂ ಕರುಣಾನಿಧಿ ಲಕ್ಷಾಂತರ ಅಭಿಮಾನಿಗಳನ್ನು ನಿನ್ನೆ(ಆ.08) ಅಗಲಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲು ತಮಿಳರು ಸಿದ್ಧರಿಲ್ಲ.
|
ಕೊನೆಯ ಬಾರಿ 'ಅಪ್ಪ' ಎಂದು ಕರೆಯಲೇ?
ನಾನು ನಿಮಗೆ 'ಅಪ್ಪ' ಎಂದು ಕರೆಯುವ ಬದಲು ಯಾವಾಗಲೂ ತಲೈವಾರ್ ಎಂದೇ ಕರೆಯುತ್ತಿದ್ದೆ. ನೀವು ನನ್ನ ಪಾಲಿಗೆ ಬಹುದೊಡ್ಡ ನಾಯಕರಾಗಿದ್ದಿರಿ. ಆದರೆ ಒಂದೇ ಒಂದು ಬಾರಿ, ಕೊನೆಯ ಬಾರಿ ನಿಮಗೆ 'ಅಪ್ಪ' ಎಂದು ಕರೆಯಲೇ? ಎಂದು ಸ್ಟಾಲಿನ್ ಭಾವುಕರಾಗಿ ಬರೆದಿದ್ದಾರೆ. ಸ್ಟಾಲಿನ್ ಕರುಣಾನಿಧಿ ಅವರ ಅಚ್ಚುಮೆಚ್ಚಿನ ಪುತ್ರ. ಕರುಣಾನಿಧಿ ಅವರ ಎರಡನೇ ಪತ್ನಿ ದಯಾಳು ಅಮ್ಮಾಳ್ ಅವರ ಪುತ್ರ ಸ್ಟಾಲಿನ್.

ಒಂದು ಮಾತನ್ನೂ ಹೇಳದೆ ಹೋದಿರಿ ಏಕೆ?
"ನೀವು ಎಲ್ಲೇ ಹೊರಟರೂ ನನಗೆ ಒಂದು ಮಾತು ಹೇಳಿ ಹೋಗುತ್ತಿದ್ದಿರಿ. ಆದರೆ ಈ ಬಾರಿ ಯಾಕೆ ನನಗೇನೂ ಹೇಳದೆ ಹೋಗಿದ್ದೀರಿ. ನಮ್ಮನ್ನೆಲ್ಲ ಸಂಕಷ್ಟದಲ್ಲಿ ದೂಡಿ ನೀವೆಲ್ಲಿಗೆ ಹೋಗಿದ್ದೀರಿ?" ಎಂದು ಸ್ಟಾಳಿನ್ ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಸ್ಟಾಲಿನ್ ಕರುಣಾನಿಧಿ ಅವರೊಂದಿಗೇ ಇದ್ದರು. ಅಪ್ಪ-ಮಗನ ಬಾಂಧವ್ಯ ಹೇಗಿರಬೇಕು ಎಂಬುದನ್ನು ಕರುಣಾನಿಧಿ ಮತ್ತು ಸ್ಟಾಲಿನ್ ಆದರ್ಶವೆನ್ನಿಸಿದ್ದರು.

ಸಮಾಧಿ ಮೇಲೆ ಏನು ಬರೆಯಲಿ...?
ಮೂವತ್ತ್ಮೂರು ವರ್ಷದ ಹಿಂದೆ ನೀವು ಹೇಳಿದ್ದಿರಿ. ನಿಮ್ಮ ಸಮಾಧಿಯಲ್ಲಿ ಅಕ್ಷರಗಳಿರಬೇಕು ಅಂತ. 'ಜೀವನಪರ್ಯಂತ ಅವಿಶ್ರಾಂತವಾಗಿ ದುಡಿದ ನಾಯಕ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ' ಎಂದು ನಿಮ್ಮ ಸಮಾಧಿಯ ಮೇಲೆ ಬರೆಯುತ್ತೇವೆ. ನೀವು ನಿಜಕ್ಕೂ ತಮಿಳರಿಗಾಗಿ ಅವಿರತವಾಗಿ ದುಡಿದಿದ್ದೀರಿ. ತಮಿಳು ಸಮುದಾಯಕ್ಕಾಗಿ ನೀವು ಮಾಡಿದ ಕೆಲಸ ನಿಮಗೆ ನಿಜಕ್ಕೂ ಸಂತೃಪ್ತಿ ತಂದಿದೆಯೇ ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ತಮಿಳರ ಕಣ್ಮಣಿ ಕರುಣಾನಿಧಿ
ಕಲೆ, ಸಾಹಿತ್ಯ, ಸಿನೆಮಾ, ರಾಜಕೀಯ ಎನ್ನುತ್ತ ಎಂ ಕರುಣಾನಿಧಿ ಅವರು ಕಾಣಿಸಿಕೊಳ್ಳದ ಕ್ಷೇತ್ರವಿಲ್ಲ. ತಮ್ಮ 94 ವರ್ಷಗಳ ಜೀವಿತಾವಧಿಯಲ್ಲಿ 80 ವರ್ಷಗಳ ಸುದೀರ್ಘ ಕಾಲವನ್ನು ಸಮಾಜಕ್ಕಾಗಿಯೇ ಮೀಸಲಿಟ್ಟ ಧೀಮಂತ ವ್ಯಕ್ತಿ ಕರುಣಾನಿಧಿ. ಅವರ ಅಗಲಿಕೆಗೆ ತಮಿಳುನಾಡಿನಾದ್ಯಂತ ಶೋಕ ಮಡುಗಟ್ಟಿದೆ. ಇಂದು ಸಂಜೆ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದ್ದು, ಇಂದು ತಮಿಳಿನಾಡಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.












Click it and Unblock the Notifications